ಶಿವಮೊಗ್ಗ: ಭಾರತದಲ್ಲಿ ಸರ್ಕಾರಗಳು ತಮ್ಮ ಒಟ್ಟಾರೆ ಬಜೆಟ್ ನ ಶೇ. 20 ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಆ ಹೊತ್ತಿನ ಸಮಯ ಸಂದರ್ಭಕ್ಕೆ ತಕ್ಕ ಹಾಗೇ ವಿಚಾರಧಾರೆಗಳು ಬದಲಾದ ಹಾಗೇ ಪಠ್ಯಗಳನ್ನು ಪರಿಷ್ಕರಿಸುತ್ತಾ ಬಂದಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಇಂದು ಸುವರ್ಣ ಸಂಸ್ಕೃತಿ ಭವನದಲ್ಲಿ ರಾಷ್ಟ್ರೋತ್ಥಾನ ಬಳಗ ಶಿವಮೊಗ್ಗ ಇವರ ವತಿಯಿಂದ ಹಮ್ಮಿಕೊಂಡಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸತ್ಯ –ಮಿಥ್ಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಅವತ್ತು ಕೂಡ ಟೀಕೆ ಟಿಪ್ಪಣಿಗಳು ಬಂದಿದ್ದವು. ಆದರೆ, ಅಂದಿನ ಸರ್ಕಾರಗಳು ಅದಕ್ಕೆ ಕಿವಿಗೊಡದೇ ಅದೇ ಮೆಕಾಲೆ ಕಾಲದ ಶಿಕ್ಷಣ ನೀತಿಯನ್ನು ಮುಂದುವರೆಸುತ್ತಾ ಬಂದವು. ಕರ್ನಾಟಕ ಸರ್ಕಾರ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಮ್ಮ ದೇಶದ ಇತಿಹಾಸ ಪುರುಷರು, ರಾಷ್ಟ್ರ ಪ್ರೇಮಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ರಾಷ್ಟ್ರಭಕ್ತಿ ಜಾಗೃತಿಗೊಳಿಸಬೇಕು. ನಮ್ಮ ದೇಶದ ಸಂಸ್ಕಾರ ಸಂಸ್ಕೃತಿಯನ್ನು ತಿಳಿಸಬೇಕೆಂಬ ಉದ್ದೇಶಕ್ಕೆ 2020 -21 ನೇ ಸಾಲಿನಲ್ಲಿ ಪರಿಷ್ಕರಣೆಗೆ ಅವಕಾಶ ಕಲ್ಪಿಸಿ ಸಮಿತಿ ರಚನೆ ಮಾಡಿ ಸಲಹೆ ಸೂಚನೆಗಳಿಗೆ ಒಂದು ವರ್ಷ ಕಾಲಾವಕಾಶ ಕೂಡ ನೀಡಿತ್ತು. ಆದರೆ, ಇನ್ನೇ ನು ಪುಸ್ತಕ ಮುದ್ರಣ ಹಂತದಲ್ಲಿರುವಾಗ ಸುಳ್ಳಿನ ಸರಮಾಲೆಗಳನ್ನೇ ಸೃಷ್ಠಿಸಿ ವಿರೋಧ ಪಕ್ಷಗಳು ಸುಳ್ಳನ್ನೇ ಸತ್ಯವಾಗಿಸಿ ಬಹುತೇಕ ಚರ್ಚೆಗೆ ಗ್ರಾಸವಾಗಿ ವಿವಾದಗಳನ್ನು ಹುಟ್ಟುಹಾಕುತ್ತಿವೆ ಎಂದು ಆರೋಪಿಸಿದರು.

ಸತ್ಯಕ್ಕೆ ಎಷ್ಟರಮಟ್ಟಿಗೆ ಅಪಚಾರವಾಗಿದೆ ಎಂದು ಹೇಳಿದರೆ ನಾರಾಯಣಗುರುಗಳ ಪಠ್ಯ ತೆಗೆದಿಲ್ಲ. ಕುವೆಂಪು ಪಠ್ಯಗಳನ್ನು ಪರಿಷ್ಕರಣೆ ಮಾಡಿಲ್ಲ. ಎಲ್ಲೂ ಕೂಡ ಕೆಂಪೇಗೌಡರ ನಿಂದನೆ ಮಾಡಿಲ್ಲ. ಬಸವಣ್ಣನವರ ಪಾಠವನ್ನು ಕೂಡ ತೆಗೆದಿಲ್ಲ. ಬದಲಾಗಿ ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ, ಆರ್.ಎಸ್.ಎಸ್. ಸ್ಥಾಪಕ ಹೆಡಗೇವಾರ್ ಅವರ ರಾಷ್ಟ್ರಭಕ್ತಿಯ ಭಾಷಣದ ತುಣುಕನ್ನು ಸೇರಿಸಲಾಗಿದೆ ಎಂದರು. ನಾರಾಯಣಗುರುಗಳ ಮೂಲ ಆಶ್ರಮವಿರುವ ಕೇರಳದಲ್ಲಿ ಅಂದಿನ ಸರ್ಕಾರ ಆಶ್ರಮವನ್ನೇ ನಾಶಪಡಿಸಿ ಅದರ ಜಾಗವನ್ನು ಪರಭಾರೆ ಮಾಡಲು ಹೊರಟಿತ್ತು. ಆಗ ಅಲ್ಲಿನ 40 ಜನ ನಾರಾಯಣಗುರುಗಳ ಅನುಯಾಯಿಗಳು ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ ಸುಪ್ರೀಂ ಕೋರ್ಟ್ ಗೆ ಮೊರೆಯಿಟ್ಟರು. ಆಗ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿ ನಾರಾಯಣಗುರುಗಳ ಆ ಜಾಗವನ್ನು ಅವರ ಅನುಯಾಯಿಗಳ ವಶಕ್ಕೆ ನೀಡಿತ್ತು. ಈಗ ಪಠ್ಯ ತೆಗೆದಿದ್ದಾರೆ ಎಂದು ಸುಳ್ಳು ಹೇಳುವವರು ಆಗ ಸುಮ್ಮನಿದ್ದರು. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ ಬಾರಿಗೆ ನಾರಾಯಣ ಗುರುಗಳ ಆಶ್ರಮಕ್ಕೆ 70 ಕೋಟಿ ರೂ. ಅನುದಾನ ನೀಡಿ ಅದರ ಅಭಿವೃದ್ಧಿಗೆ ಕ್ರಮ ಕೈಗೊಂಡಿತ್ತು. ಅಂತಹ ಬಿಜೆಪಿ ಸರ್ಕಾರ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ಪಠ್ಯವನ್ನು ತೆಗೆಯುವುದುಂಟೇ ? ನಾನು ಕೂಡ ಅದೇ ಜನಾಂಗದಿಂದ ಬಂದವನು ಎಂದರು.

ಹೆಡಗೇವಾರ್ ವಂದೇ ಮಾತರಂ ಚಳವಳಿ ಮೂಲಕ ರಾಷ್ಟ್ರ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದವರು. ಅವರ ಪಠ್ಯ ಸೇರ್ಪಡೆ ಮಾಡಿದರೆ ತಪ್ಪೇನು? ಈ ನೆಲದ ಗಾಳಿ, ನೀರು, ಆಹಾರ ಸೇವಿಸಿ ಇಲ್ಲಿಯ ಸರ್ವಸ್ವವನ್ನು ಪಡೆದವರು ಕೈಯಲ್ಲಿ ಎಕೆ 47 ಹಿಡಿದು ಕಾಶ್ಮೀರ ಲಾಲ್ ಚೌಕ್ ನಲ್ಲಿ ನೀವು ತಾಯಿಯ ಎದೆಹಾಲು ಕುಡಿದಿದ್ದರೆ ತ್ರಿವರ್ಣ ಧ್ವಜ ಹಾರಿಸಿ ಎಂದು ಸವಾಲು ಹಾಕಿದ್ದರು. ಅವರಿಗೆ ಹಿಂದಿನ ಸರ್ಕಾರಗಳು ಯಾವ ಶಿಕ್ಷಣ ನೀಡಿದ್ದವು? ಇಂದು ಅದೇ ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ಪ್ರತಿನಿತ್ಯ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ. ಆರ್ಟಿಕಲ್ 370 ರದ್ದು ಮಾಡಿದೆ ಎಂದರು. ಉಕ್ರೇನ್ ನಲ್ಲಿ 18 ಸಾವಿರ ಭಾರತೀಯ ವಿದ್ಯಾರ್ಥಿಗಳು ಬಂಕರ್ ನಲ್ಲಿ ಉಕ್ರೇನ್ ಸೈನಿಕರ ವಶದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್ ದಾಳಿ, ಆ ಕಡೆ ಉಕ್ರೇನ್ ಸೈನಿಕರಿಂದ ದಬ್ಬಾಳಿಕೆ ನಡೆಯುತ್ತಿದ್ದಾಗ ಓರ್ವ ವಿದ್ಯಾರ್ಥಿನಿ ನನಗೆ ಫೋನಾಯಿಸಿ ತಮ್ಮನ್ನು ರಕ್ಷಿಸುವಂತೆ ಕೋರಿದಳು. ನಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದೆ. ಹೀಗೆ ಪ್ರಯತ್ನಿಸಿದ 24 ಗಂಟೆಯಲ್ಲೇ ಭಾರತ ಸರ್ಕಾರದಿಂದ ಸಂಕಷ್ಟದಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಒಂದು ಸಂದೇಶ ತಲುಪಿತು. ತ್ರಿವರ್ಣ ಧ್ವಜ ಹಿಡಿದು ಹೊರಗೆ ಬನ್ನಿ ನಿಮಗೆ ಎರಡೂ ಕಡೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಆಗ ಅಷ್ಟೂ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಹೊರಗೆ ಬಂದಾಗ ಉಕ್ರೇನ್ ಪಡೆ ಅವರಿಗೆ ಗಡಿ ದಾಟಲು ಸಹಾಯ ಮಾಡಿದರೆ, ರಷ್ಯನ್ ಪಡೆ ನಾಲ್ಕು ದಿನಗಳ ಕಾಲ ಬಾಂಬ್ ದಾಳಿ ನಿಲ್ಲಿಸಿತ್ತು. ಪಾಕಿಸ್ತಾನದ ವಿದ್ಯಾರ್ಥಿಗಳು ಕೂಡ ಭಾರತದ ಧ್ವಜ ಹಿಡಿದು ಅಪಾಯದಿಂದ ಪಾರಾದರು. ಅದು ಭಾರತದ ಈಗಿನ ಘನತೆ ಎಂದರು.ಮುಂದಿನ ಜನಾಂಗ ಸತ್ಯಾನ್ವೇಷಣೆ ಮಾಡಬೇಕು. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ. ಸಾಹಿತಿಗಳಿಗೂ ಇದನ್ನು ಅರ್ಥ ಮಾಡಿಸುವ ಕೆಲಸವನ್ನು ಖುದ್ದಾಗಿ ಮುಖ್ಯಮಂತ್ರಿಗಳೇ ಮಾಡಿದ್ದಾರೆ. ವೈಚಾರಿಕ ವಿಚಾರದ ಬಗ್ಗೆ ಚರ್ಚೆಗೆ ಸರ್ಕಾರ ಯಾವತ್ತೂ ಸ್ವಾಗತ ಮಾಡುತ್ತದೆ. ಆದರೆ, ಸತ್ಯವನ್ನು ಮರೆ ಮಾಚಿ ಸುಳ್ಳು ಇತಿಹಾಸ ತುರುಕುವುದು ಯಾವ ನ್ಯಾಯ ಎಂದರು.ಬೆಂಗಳೂರು ನಗರದ ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಯಾವಾಗ ನೆಹರೂ ಪ್ರಧಾನಿಯಾದರೋ ಆಗ ಅವರು ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ತಮಗೆ ಬೇಕಾದವರ ಸಮಿತಿ ರಚಿಸಿ ತಮಗೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸಿದರು. ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ದಮನ ಆ ಹೊತ್ತಿನಿಂದಲೇ ಶುರುವಾಯ್ತು. ಒಂದೇ ಕುಟುಂಬದ ಹಿತಕ್ಕಾಗಿ ಮತ್ತು ಆ ಕುಟುಂಬ ವೈಭವೀಕರಣಕ್ಕಾಗಿ ಇತಿಹಾಸ ಮರೆ ಮಾಚಲಾಯಿತು ಎಂದರು.

ನಮ್ಮ ವೀರರಿಗೆ ನಾವೇ ಅಪಚಾರವನ್ನು ಶಿಕ್ಷಣದ ಮೂಲಕ ಮಾಡಿದಂತಾಗಿತ್ತು. ಈಗ ಅದನ್ನು ಸರಿಪಡಿಸಲು ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಸರ್ಕಾರ ಮುಂದೆ ಬಂದಿದೆ. ಪಠ್ಯ ಸಮಿತಿಯ ಪರಿಷ್ಕರಣೆ ವಿರುದ್ಧ ಮಾತನಾಡುವ ಮತ್ತು ಸುಳ್ಳನ್ನು ಸೃಷ್ಠಿಸುವವರು ಪರಿಷ್ಕೃತ ಪಠ್ಯವನ್ನು ಒಮ್ಮೆ ಸರಿಯಾಗಿ ನೋಡಲಿ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಯಾವುದನ್ನು ಮರೆ ಮಾಚಿತ್ತು. ಮತ್ತು ಯಾವುದನ್ನು ಕೈಬಿಟ್ಟಿತ್ತು? ಈಗ ಯಾವುದು ಸೇರ್ಪಡೆಯಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.ಈ ಸಂದರ್ಭದಲ್ಲಿ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ಬಳಗದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ. ಸುಧೀಂದ್ರ ಉಪಸ್ಥಿತರಿದ್ದರು. 

ವರದಿ ಮಂಜುನಾಥ್ ಶೆಟ್ಟಿ…