ಲೋಕಸಭಾ ಚುನಾವಣೆ-2024 ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಏ.22 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಅಭ್ಯರ್ಥಿಗಳು ತಾಲ್ಲೂಕುಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುಮತಿಯನ್ನು ಪಡೆಯಬಹುದು. ಕಾರ್ಯಕ್ರಮ ನಡೆಸುವ 48 ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಾವು ಒಂದು ದಿನದ ಒಳಗೆ ಅನುಮತಿಯನ್ನು ನೀಡುತ್ತೇವೆ.


ಜಾತಿ, ಜನಾಂಗ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ಹಾಗೂ ವಸತಿ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಮಾರ್ಗ ನಕ್ಷೆಯನ್ನು ನಿಖರವಾಗಿ ನೀಡಿದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು. ದ್ವೇಷದ ಭಾಷಣ, ವ್ಯಕ್ತಿಯ ಕುರಿತು ಅವಹೇಳನಕಾರಿ ಭಾಷಣ ಮಾಡುವಂತಿಲ್ಲ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಜಿಲ್ಲಾ ಮಟ್ಟದಲ್ಲಿ ಚುನಾವಣಾಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು.


ಟಿವಿ, ಎಲೆಕ್ಟ್ರಾನಿಕ್, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹಿರಾತು ನೀಡುವ ಮುನ್ನ ಎಂಸಿಎಂಸಿ ಸಮಿತಿ ಮುಂದೆ ಜಾಹಿರಾತು ವಿಷಯವನ್ನು ನೀಡಿ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹಿರಾತು ಪ್ರಕಟಿಸಲು ಮತದಾನ ಮುಕ್ತಾಯಕ್ಕೆ ನಿಗದಿಯಾದ ಸಮಯಕ್ಕಿಂತ 48 ಗಂಟೆ ಮುಂಚಿತವಾಗಿ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ. ಕರಪತ್ರಗಳನ್ನು ಪ್ರಕಟಿಸುವ ಅಭ್ಯರ್ಥಿಗಳು ಮುದ್ರಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆಯನ್ನು ಘೋಷಿಸಿ ವಿತರಣೆಗೆ ಅನುಮತಿ ಪಡೆಯಬೇಕು.


ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ಇಡಲು 26 ಕಡೆ ಮೂರು ಪಾಳಿಯಲ್ಲಿ ಚೆಕ್‍ಪೋಸ್ಟ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ತಂಡಗಳು ಕೆಲಸ ಮಾಡುತ್ತಿವೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1950 ಮೂಲಕ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಬಹುದು.

ಅಭ್ಯರ್ಥಿಗಳು ಅಥವಾ ಸಾರ್ವಜನಿಕರು ತಮ್ಮ ಮೊಬೈಲ್‍ಲ್ಲೇ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ಚುನಾವಣಾ ಅಕ್ರಮಗಳ ಕುರಿತಾದ ಫೋಟೋ, ಆಡಿಯೋ, ವಿಡಿಯೋ ಅಪ್‍ಲೋಡ್ ಮಾಡುವ ಮೂಲಕ ದೂರನ್ನು ನೀಡಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ದೂರು ದಾಖಲಾದ ನಂತರ ಎಫ್‍ಎಸ್‍ಟಿ ತಂಡದವರು ದೂರಿನ ಕುರಿತು ಕ್ರಮ ವಹಿಸುವರು.ಅಭ್ಯರ್ಥಿಗಳು ತಮ್ಮ ವಿರುದ್ದ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ಇದ್ದಲ್ಲಿ ಈ ಕುರಿತು ಮೂರು ಬಾರಿ ಮುದ್ರಣ ಮತ್ತು ಟೀವಿ ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳಬೇಕು ಎಂದು ತಿಳಿಸಿದರು.


ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಪೂನಂ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ತಾವು ನೇಮಕವಾಗಿದ್ದು ಸಕ್ರ್ಯೂಟ್ ಹೌಸ್‍ನ ರೂ.ಸಂಖ್ಯೆ 2 ರಲ್ಲಿ ಲಭ್ಯವಿರುತ್ತೇನೆ. ಚುನಾವಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ 8147695215 ನ್ನು ಸಂಪರ್ಕಿಸಬಹುದು.
ಅಭ್ಯರ್ಥಿಗಳು ಪೋಲಿಂಗ್ ಏಜೆಂಟ್ ಮತ್ತು ಎಲೆಕ್ಷನ್ ಏಜೆಂಟರನ್ನು ನೇಮಿಸಬೇಕು. ವಿವಿ ಪ್ಯಾಟ್ ರ್ಯಾಂಡಮೈಸೇಷನ್ ಬಗ್ಗೆ ತಮಗೆ ಮಾಹಿತಿ ನೀಡಲಾಗುವುದು. ಹಾಗೂ ಮತದಾನದ ನಂತರ ಸ್ಟ್ರಾಂಗ್ ರೂಂ ಹೊರಗಡೆ ಒಂದು ಶೆಡ್ ನಿರ್ಮಿಸಲಾಗುವುದು. ಅಲ್ಲಿ ಅಭ್ಯರ್ಥಿಗಳು ತಮ್ಮ ಕಡೆಯಿಂದ ಓರ್ವ ಅಭ್ಯರ್ಥಿಯನ್ನು ಸ್ಟ್ರಾಂಗ್ ರೂಂ ನ್ನು ವೀಕ್ಷಿಸಲು ನೇಮಿಸಬಹುದು. ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಿವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಅಭ್ಯರ್ಥಿಗಳು ಸುವಿಧಾ ತಂತ್ರಾಂಶಕ್ಕೆ ನೋಂದಣಿಯಾಗಿ ಆ ಮೂಲಕ ಅನುಮತಿಯನ್ನು ಪಡೆಯಬಹುದು ಎಂದರು.


ವೆಚ್ಚ ವೀಕ್ಷಕರಾದ ಸರೋಜ್ ಕುಮಾರ್ ಬೆಹೆರ ಮಾತನಾಡಿ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಸಲು ಅಭ್ಯರ್ಥಿಗಳ ಸಹಕಾರ ಅಗತ್ಯವಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ನೆರವು ನೀಡಲು ವೆಚ್ಚ ವೀಕ್ಷಕರು ಲಭ್ಯವಿರುತ್ತಾರೆ. ವೆಚ್ಚ ವೀಕ್ಷಕರ ಮೊಬೈಲ್ ಸಂಖ್ಯೆ: 7760692479 , 8904703613(ಮೀನಾಕ್ಷಿ ಸಿಂಗ್) ಆಗಿರುತ್ತದೆ. ಮೂರು ದಿನಾಂಕಗಳಂದು ಅಭ್ಯರ್ಥಿಗಳ ಸಮ್ಮುಖದಲ್ಲಿ ವೆಚ್ಚ ಪರಿವೀಕ್ಷಣೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.


ವೆಚ್ಚ ನೋಡಲ್ ಅಧಿಕಾರಿ ಪ್ರಶಾಂತ್ ನಾಯಕ್ ಮಾತನಾಡಿ, ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚ ನಿರ್ವಹಿಸುವ ಪ್ರಕ್ರಿಯೆ ಕುರಿತು ವಿವರಣೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ ರೂ.95 ಲಕ್ಷ ಆಗಿದ್ದು, ಚುನಾವಣಾ ವೆಚ್ಚ ನಿರ್ವಹಿಸಲು ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆದು ಆ ಮೂಲಕವೇ ಚುನಾವಣಾ ವೆಚ್ಚ ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್, ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಜರಿದ್ದರು.

ವರದಿ ಪ್ರಜಾ ಶಕ್ತಿ