ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಮನಸ್ಸಿಗೆ ಮುದ ನೀಡಲು ಬೇಸಿಗೆ ಶಿಬಿರದಂತಹ ಚಟುವಟಿಕೆಗಳು ಅವಶ್ಯಕವಾಗಿದ್ದು, ಮಕ್ಕಳು ತಪ್ಪದೇ ಇಂತಹ ಶಿಬಿರಗಳ ಸದುಪಯೋಗ ಪಡಿಯಬೇಕು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಾಶಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ೬ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ “ಸೃಜನಾತ್ಮಕ ಮತ್ತು ಕ್ರಿಯಾಶೀಲಾತ್ಮಕ” ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೊಳಗಿನ ಕಲೆ, ಪ್ರತಿಭೆ ಹೊರ ತರಲು ಈ ತರಹದ ಚಟುವಟಿಕೆಗಳು ಅವಶ್ಯಕವಾಗಿದ್ದು, ಅದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸರ್ಕಾರಿ ಶಾಲೆಗಳು ಅವಕಾಶ ನೀಡುತ್ತಿರುವುದು ಸಂತಸವಾಗಿದೆ.
ಇಂತಹ ಶಿಬಿರಗಳು ಹೆಚ್ಚೆಚ್ಚು ಆಗಬೇಕು. ಅದಕ್ಕೆ ಸರ್ಕಾರದ ಮಟ್ಟದಲ್ಲಿ ನಾನು ಚರ್ಚೆ ಮಾಡಿ ೧೫ ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತೇನೆ. ಇದಕ್ಕೆ ಸಂಬAಧಪಟ್ಟ ಅಧಿಕಾರಗಳೊಂದಿಗೆ ಸಹ ಚರ್ಚೆ ಮಾಡಿ ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆ ಎಂದರು.
ನಮ್ಮ ಸುತ್ತಮುತ್ತ ಇಂತಹ ಚಟುವಟಿಕೆಗೆ ಪೂರಕವಾರ ಮನಸುಗಳು ಹಾಗೂ ಸಂಘ ಸಂಸ್ಥೆಗಳು ಇವೆ. ಇಲಾಖೆಯು ಅವರುಗಳ ಸಹಭಾಗಿತ್ವದೊಂದಿಗೆ ಶಿಬಿರಗಳನ್ನು ಮಾಡಬೇಕು. ಆಗ ಶಿಬಿರಗಳು ಇನ್ನಷ್ಟು ಯಶಸ್ವಿಯಾಗಿ ನಡೆಯುತ್ತದೆ ಎಂದು ಸಲಹೆ ನೀಡಿದರು.
ಆಹಾರ ಸಲಹಾ ತಜ್ಞರಾದ ಹೆಚ್.ನೇತ್ರಾವತಿ ಮಾತನಾಡಿ, ಮಕ್ಕಳಿಗೆ ಆರೋಗ್ಯಕವಾರದ ಆಹಾರವನ್ನು ನೀಡಬೇಕು. ಹೊರಗಡೆ ಕರೆದ ಅಡುಗೆ ಎಣ್ಣೆಯ ಪದಾರ್ಥಗಳು ಹಾಗೂ ಪ್ಲಾಸ್ಟಿಕ್ನಲ್ಲಿ ಇಟ್ಟಿರುವ ಆಹಾರವನ್ನು ಸೇವಿಸುವುದು ಕಡಿಮೆ ಮಾಡಬೇಕು. ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತದೆ. ಮನೆಯಲ್ಲಾಗಲಿ ಅಥವಾ ಹೊರಗಡೆಯಾಗಲಿ ಒಂದು ಬಾರಿ ಬಳಸಿದ ಎಣ್ಣೆಯನ್ನು ಹೆಚ್ಚು ಬಾರಿ ಅಡುಗೆಗೆ ಬಳಸಬಾರದು. ಹಾಗೂ ಆ ರೀತಿ ಬಳಸಿದ ಎಣ್ಣೆಯ ಪದಾರ್ಥಗಳನ್ನು ತಿನ್ನಬಾರದು. ಇದರಿಂದ ಹೃದಯ ಸಂಬAಧಿತ ಕಾಯಿಲೆಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮನೆಯಲ್ಲಿ ಮಕ್ಕಳನ್ನು ಅಡುಗೆಯ ಸಹಾಯಕ್ಕೆ ಬಳಸಿಕೊಳ್ಳಬೇಕು. ಅದರಿಂದ ಮಕ್ಕಳಿಗೆ ಆರೋಗ್ಯಕರ ಊಟದ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳು ಆರೋಗ್ಯಕರವಾದ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಬೇಕು. ಇದರಿಂದ ರಕ್ತದ ಒತ್ತಡ, ಹೃದಯ ಸಂಬAಧಿತ ಕಾಯಿಲೆ , ಮೂಳೆಗಳಿಗೆ, ಕಣ್ಣುಗಳಿಗೆ, ಜೀರ್ಣ ಕ್ರಿಯೆಗೆ ಹಾಗೂ ಬುದ್ದಿ ಚುರುಕುತನಕ್ಕೆ ಸಹಾಯವಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್. ಕೃಷ್ಣಪ್ಪ ಮಾತನಾಡಿ, ಮಕ್ಕಳ ಮನಸ್ಸು ಜಡವಾಗಿ ಇರಲು ಬಿಡಬಾರದು ಅವರನ್ನು ಸದಾ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲರನ್ನಾಗಿ ಮಾಡಬೇಕು. ಕಲೆ, ಸಾಹಿತ್ಯ, ನಾಟಕಗಳಿಂದ ಮಕ್ಕಳ ವ್ಯಕ್ತಿ ವಿಕಸನವಾಗುತ್ತದೆ. ಆ ದಿಸೆಯಿಂದಲೆ ಬೇಸಿಗೆ ಶಿಬಿರ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚಿಗೆ ಮಕ್ಕಳು ಮೊಬೈಲ್ ಅನ್ನು ಅವಲಂಬಿಸಿದ್ದಾರೆ. ಊಟ ಮಾಡಲು, ಹೋಮ್ ವರ್ಕ್ ಮಾಡಲು ಮೊಬೈಲ್ ಇಲ್ಲದೆ ಆಗದು ಎನ್ನುವು ಸ್ಥಿತಿಗೆ ತಲುಪಿದ್ದಾರೆ. ಇಂತಹ ವಾತಾವರಣದಿಂದ ಪೋಷಕರು ಮಕ್ಕಳನ್ನು ದೂರ ಇಡಬೇಕು. ಇಲ್ಲದಿದ್ದರೆ ಮಕ್ಕಳಿಗೆ ಓದಿನಲ್ಲಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಒಂದು ಕಡೆ ಮನಸ್ಸನ್ನು ಕೇಂದ್ರಿಕರಿಸಲು ಆಗುವುದಿಲ್ಲ. ಇದರಿಂದ ದೇಹದಲ್ಲಿನ ಹಾರ್ಮೊನ್ ವ್ಯತ್ಯಾಸಕ್ಕೆ ಒಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲಿಂಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಅಧಿಕಾರಿ ಶಶಿರೇಖಾ, ಮುಖ್ಯ ಶಿಕ್ಷಕ ಹಾಲ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು, ಶಾಲೆ ಸಿಬ್ಬಂದಿಗಳು ಹಾಗೂ ಪೋಷಕರು ಭಾಗಿಯಾಗಿದ್ದರು.