ಕರ್ನಾಟಕವೂ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್ ಚುನಾವಣಾ ಗಿಮಿಕ್ ಬಜೆಟ್ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ರಮೇಶ್ ಶಂಕರಘಟ್ಟ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಯಲ್ಲಿ ಬಹಳಷ್ಟು ನಿರೀಕ್ಸೆಗಳನ್ನು ಇಟ್ಟುಕೊಂಡಿದ್ದ ದೇಶದ ಜನತೆಗೆ ಕೇಂದ್ರದ ಬಜೆಟ್ ನೀರಾಶೆಗೊಳಿಸಿದೆ. ಸರಕಾರ ಪೆಟ್ರೋಲ್, ಗ್ಯಾಸ್ ಬೆಳೆಯನ್ನು ಇಳಿಕೆ ಮಾಡಬೇಕಿತ್ತು. ಕೇವಲ ರಾಜಕೀಯ ಉದ್ದೇಶ ಇಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ.
ನಮ್ಮ ಜಿಲ್ಲೆಯಲ್ಲಿನ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರು ಹೊಂದಿದ್ದ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ ಎಂದು ಟೀಕಿಸಿದ್ದಾರೆ.ಲಕ್ಷಾಂತರ ಕುಟುಂಬಗಳು ಅಡಿಕೆ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ, ರೋಗಗಳ ಹೊಡೆತದಿಂದ ಅಡಿಕೆ ಬೆಳೆ ಹಿಂದೆಂದಿಗಿಂತಲೂ ತೀವ್ರ ಹಾನಿಗೊಂಡು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ಬೆಲೆ ಇಳಿಕೆಯಿಂದಾಗಿ ತೀವ್ರ ನಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರಮುಖವಾಗಿದ್ದು, ಬೆಳೆಗಾರರು ತೀವ್ರ ನಷ್ಟದೊಂದಿಗೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗದಂತೆ ರೋಗಗಳ ಬಾಧೆಯಿಂದ ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಬಯಲು ಸೀಮೆಯ ಬೆಳೆಗಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ಜಿಲ್ಲೆಯಲ್ಲಿ ಅಡಿಕೆ ಬೆಳೆ ಅವನತಿ ಅಂಚಿನಲ್ಲಿರುವುದನ್ನು ಗಮನಿಸಿ ಕೇಂದ್ರ ಸರ್ಕಾರದಿಂದ ತಜ್ಞರ ತಂಡವೊಂದು ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಹೋಗಿತ್ತು. ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಅಡಿಕೆ ಬೆಳೆ ಹಾನಿಯ ಬಗ್ಗೆ ಅಧ್ಯಯನ ನಡೆಸಿದ್ದು ಬೆಳೆಗಾರರಲ್ಲಿ ದೊಡ್ಡ ಆಶಾಭಾವನೆ ಮೂಡಲು ಕಾರಣವಾಗಿತ್ತು. ಆದರೆ, ಬಜೆಟ್ನದಲ್ಲಿ ಬಿಡಿಕಾಸಿನ ನೆರವು ಘೋಷಣೆಯಾಗದಿರುವುದು ಬೆಳೆಗಾರರ ನಿರೀಕ್ಷೆಗಳು ಹುಸಿಯಾಗಿವೆ. ಎಂದು ಆರೋಪಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನೀಲ್ಲಿ 5300 ಕೋಟಿ ರೂ.ಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ಈ ಘೋಷಣೆಯಿಂದ ಶಿವಮೊಗ್ಗ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

2014 ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಭರವಸೆ ಕೊಟ್ಟು ಯುವಜನರನ್ನು ದಿಕ್ಕು ತಪ್ಪಿಸಿದ್ದ ಪ್ರಧಾನ ಮಂತ್ರಿ ಮೋದಿಯವರು, ಈ ಬಜೆಟ್ ಮೂಲಕ ಮತ್ತೊಮ್ಮೆ ಯುವಜನರ ದಿಕ್ಕು ತಪ್ಪಿಸುವ ಮತ್ತು ಚುನಾವಣೆಗಾಗಿ ಮೂರು ವರ್ಷದೊಳಗೆ 48 ಲಕ್ಷ ಯುವಜನರಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯಡಿ ಶಿಷ್ಯ ವೇತನ ನೀಡುವುದಾಗಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ಘೋಷಣೆ ಮಾಡಲಾಗಿದೆ. ಇದು ಬೋಗಸ್ ಎಂದು ಜರಿದಿದ್ದಾರೆ.
ಒಟ್ಟಾರೆ ಕೇಂದ್ರ ಸರ್ಕಾರದ ಬಜೆಟ್ ಬಡವರ ವಿರೋಧಿ ಬಜೆಟ್, ಹಸಿವು ನೀಗಿಸುವ ಯೋಜನೆಗಳು ಇಲ್ಲ, ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ನರೇಗಾ ಯೋಜನೆಯಡಿ ಅನುದಾನ ರಹಿತ ಬಜೆಟ್, ಅನ್ನಭಾಗ್ಯಕೆ ಕತ್ತರಿ, ರಸ ಗೋಬ್ಬರದ ಬೆಲೆ ಏರಿಕೆ, ಯುವ ಜನತೆಗೆ ಉದ್ಯೋಗ ಖಾತ್ರಿ ಇಲ್ಲ, ಪರಿಶಿಷ್ಟ ಜಾತಿಗೆ ಅಭಿವೃದ್ಧಿಗೆ ಯಾವದೇ ಅಜೆಂಡಾ ಇಲ್ಲ ಎಂದಿದ್ದಾರೆ.