
ಜೀತ ಪದ್ದತಿ ಒಂದು ಅಮಾನವೀಯ ಮತ್ತು ಹೀನಾಯ ಪದ್ದತಿಯಾಗಿದ್ದು ಅದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಹಾಗೂ ಮುಕ್ತಿ ಅಲಯನ್ಸ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಿ ಜಾಗತಿಕ ಮಟ್ಟದಲ್ಲಿ ಅನೇಕ ರೀತಿಯ ಸಾಧನೆ ಮಾಡುತ್ತಿದ್ದರೂ ಈ ಅಮಾನವೀಯ, ಅಮಾನುಷವಾದ ಜೀತ ಪದ್ಧತಿಯಿಂದ ಮಾತ್ರ ಮುಕ್ತಿ ಪಡೆಯಲಾಗುತ್ತಿಲ್ಲ. ಜೀತಪದ್ಧತಿ ನಮ್ಮಲ್ಲಿ ಇನ್ನೂ ಇದೆ ಎಂದು ಹೇಳಿಕೊಳ್ಳಲು ಅವಮಾನವಾಗುತ್ತಿದೆ. ಇದರಷ್ಟು ಹೀನಾಯ ಮತ್ತೊಂದಿಲ್ಲ ಎಂದು ವಿಷಾಧಿಸಿದ ಅವರು ಇದನ್ನು ನಿರ್ಮೂಲನೆ ಮಾಡಲು ಪ್ರಾಮಾಣಿಕ ಪ್ರಯತ್ನ ಆಗಬೇಕು. ಇಂದಿನ ಕಾರ್ಯಾಗಾರದಲ್ಲಿ ಯಾವ ರೀತಿ ಜೀತ ಪದ್ದತಿ ಶೋಧನೆ ಮಾಡಬೇಕು. ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗುತ್ತದೆ.
ಜೀತ ಪದ್ದತಿ ನಿರ್ಮೂಲನೆಯಲ್ಲಿ ಅನುಷ್ಟಾನ ಅಧಿಕಾರಿಗಳ ಜವಾಬ್ದಾರಿ ಮತ್ತು ಪಾತ್ರ ಮಹತ್ತರವಾಗಿದೆ. ಜೀತ ಪದ್ದತಿಯನ್ನು ಶೋಧಿಸಿ, ಸೂಕ್ತ ಕಾನೂನು ಕ್ರಮ ಜೊತೆಗೆ ಶಿಕ್ಷೆ ಆಗಬೇಕು. ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಈ ಪ್ರಕ್ರಿಯೆಯ ಕುರಿತಾದ ತಾಂತ್ರಿಕತೆ ಬಗ್ಗೆ ತಿಳಿದುಕೊಂಡೂ ಕಾರ್ಯೋನ್ಮುಖರಾಗಬೇಕು. ಇಂತಹ ಪ್ರಕರಣಗಳಲ್ಲಿ ಪೊಲೀಸರು ಸೂಕ್ಷö್ಮ ರೀತಿಯಲ್ಲಿ ವ್ಯವಹರಿಸಬೇಕು ಎಂದ ಅವರು ಪೊಲೀಸ್ ಇಲಾಖೆಯ ಸಹಕಾರ ಹೆಚ್ಚಾಗಿ ಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಜೀತ ಪದ್ದತಿ ನಿರ್ಮೂಲನೆಗೆ ಹಕ್ಕು ನೀಡಲಾಗಿದೆ. ಹಾಗೂ ಕಾನೂನು ಜಾರಿಯಾಗಿದೆ. ಇದನ್ನು ನಾವು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬೇಕು. ಇನ್ನೂ ಜೀತ ಪದ್ದತಿ ಕೊನೆಗೊಳ್ಳದಿರುವುದಕ್ಕೆ ಕಾರಣ ನೋಡಬೇಕು.
ಕೆಳಸ್ತರದಿಂದ ಬಂದ, ಬಡವರು ಈ ಪದ್ದತಿಗೆ ಒಳಗಾಗುವುದನ್ನು ಕಾಣುತ್ತೇವೆ. ಜೀತ ಪದ್ದತಿ ತಂದೆ ಪಡೆದ ಸಾಲ ತೀರಿಸಲಾರದ ಮಕ್ಕಳಿಂದ ಮಕ್ಕಳಿಗೆ ಹೀಗೆ ವಂಶ ಪಾರಂಪರ್ಯವಾಗಿ ಮುಂದುವರೆಯುವುದನ್ನು ಕಂಡಿದ್ದೇವೆ. ಜೀತಪದ್ದತಿಯಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಯಾವುದೇ ಸ್ಥಾನಮಾನ, ಸ್ವಾತಂತ್ರವಿರುವುದಿಲ್ಲ. ನಮ್ಮ ರಾಜ್ಯದ ಜನ ಇತರೆ ರಾಜ್ಯಗಳಿಗೆ ಹಾಗೂ ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ಜೀತ ಮಾಡುತ್ತಿರುವುದನ್ನೂ ಕಂಡಿದ್ದೇವೆ. ಇತ್ತೀಚೆಗೆ ಕಾರ್ಖಾನೆ, ಹೋಟೆಲ್, ಕಾಫಿ ಎಸ್ಟೇಟ್ಗಳ ರೂಪದಲ್ಲಿ ಆಧುನಿಕ ಜೀತ ಪದ್ದತಿಯನ್ನೂ ಕಾಣುತ್ತಿದ್ದೇವೆ. ಆದರೆ ದಾಳಿಗೆ ತೆರಳಿದ ಸಂದರ್ಭದಲ್ಲಿ ದಿನಗೂಲಿ ಎನ್ನುತ್ತಾರೆ. ಇದನ್ನು ಕಂಡು ಹಿಡಿಯುವುದು ಕಷ್ಟವಾದರೂ ಈ ಕೆಲಸ ಮಾಡಬೇಕು.
ನಮ್ಮ ಸಂವಿಧಾನ 19, 21, 23, 24 ಗಳ ಮೂಲಕ ದೇಶದ ನಾಗರೀಕರಿಗೆ ಬದುಕುವ ಹಕ್ಕು, ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ, ಘನತೆಯಿಂದÀ ಬದುಕುವ ಹಕ್ಕು ಸೇರಿಂದ ಮೂಲಭೂತ ಹಕ್ಕುಗಳನ್ನು ನೀಡಿದ್ದು, ಜೀತ ಪದ್ದತಿ ನಿರ್ಮೂಲನೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಅನುಷ್ಟಾನದಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಆಗಬೇಕಿದೆ ಎಂದು ಅವರು ಜೀತ ಪದ್ದತಿ ಕುರಿತು ಶಿವರಾಮ ಕಾರಂತರ ಚೋಮನ ದುಡಿ, ದೇವನೂರು ಮಹಾದೇವರ ಡಾಂಬರು ಬಂದುದು ಕಥೆ ಉಲ್ಲೇಖಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಜೀತ ಪದ್ಧತಿ (ರದ್ದತಿ) ಕಾಯ್ದೆ 1976 ಬಗ್ಗೆ ಮಾತನಾಡಿದರು. ಜೀತ ಪದ್ದತಿ ಒಂದು ಸಾಮಾಜಿಕ ಪಿಡುಗು. ಮೂಲಭೂತ ಹಕ್ಕಿನ ಉಲ್ಲಂಘನೆ. ಮೇಲ್ನೋಟಕ್ಕೆ ಜೀತ ಪದ್ದತಿ ಕಂಡು ಬರುವುದಿಲ್ಲ. ಇತ್ತೀಚೆಗೆ ವಿನೂತನ ಸ್ವರೂಪ ಪಡೆದಿದ್ದರಿಂದ ಶೋಧ ಕಷ್ಟವಾಗಿದೆ. ಒಂದು ವ್ಯವಸ್ಥೆ ಯಾಗೇ ಮಾರ್ಪಾಡಾಗಿದೆ. ಆದರೂ ಅನುಷ್ಟಾನ ಇಲಾಖೆಗಳು ಶೋಧಿಸಿ, ಈ ಪದ್ದತಿಯನ್ನು ನಿರ್ಮೂಲನೆ ಮಾಡಬೇಕಿದೆ.
ಬಡವನಿಗೆ ಅಗತ್ಯವಿರುವ ಹಣ ನೀಡಿ, ಅದರ ಅಸಲು, ಬಡ್ಡಿ ಕಟ್ಟಲಿಕ್ಕೆ ಆಗದೇ ವಂಶಪಾರAಪರ್ಯವಾಗಿ ನಡೆಯುವ ಪದ್ದತಿ ಇದು. ಇದನ್ನು ಬೇರು ಸಮೇತ ತೆಗೆದು ಹಾಕಬೇಂದರು ಕಾಯ್ದೆ ಜಾರಿಗೊಳಿಸಲಾಗಿದೆ. ಅನುಷ್ಟಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕಾಯ್ದೆಯನ್ವಯ ಜೀತಕ್ಕಾಗಿ ಮುಂಗಡವಾಗಿ ಹಣ ನೀಡುವಂತಿಲ್ಲ. ಹಣ ನೀಡಿ ಜೀತದ ಕರಾರು ಮಾಡಿಕೊಳ್ಳುವುದು ಅಪರಾಧ. ಹೀಗೆ ನೀಡಿದ ಹಣಕ್ಕೆ ಬದಲಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸುವುದು ಅಪರಾಧ. ಇದನ್ನು ಪ್ರೋತ್ಸಾಹಿಸುವುದ ಸಹಿತ ಅಪರಾಧವಾಗುತ್ತದೆ. ಜೀತಕ್ಕಾಗಿ ಮನೆ ನೀಡುವಂತಿಲ್ಲ. ಅಡಮಾನ ಪಡೆಯುಂತಿಲ್ಲ, ಹೀಗೆ ನೀಡಿದ ಮನೆಯಿಂದ ಹೊರಹಾಕುವಂತಿಲ್ಲ.
ಹಾಗೂ ಅಡಮಾನ ಕೂಡ ರದ್ದಾಗುತ್ತದೆ.
ಈ ಕಾಯ್ದೆಯಡಿ ಬಡವನಿಗೆ ನೀಡುವ ಹಣ ಸಾಲ ಎಂದು ಪರಿಗಣಿಸಿ ಪ್ರಕರಣ ದಾಖಲಾಗುತ್ತದೆ. ಪೊಲೀಸರು ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುತ್ತಾರೆ. ತಪ್ಪಿತಸ್ಥನಿಗೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು.
ಈ ಕಾಯ್ದೆ ಜೀತ ಪದ್ದತಿ ಇಲ್ಲವೆಂದು ಕಾಯ್ದೆ ಘೋಷಣೆ ಮಾಡುತ್ತದೆ. ಓರ್ವ ವ್ಯಕ್ತಿ ಜೀತ ಮುಕ್ತನಾಗಿದ್ದಾನೆ ಎಂದು ಘೋಷಿಸುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳು ಅನುಷ್ಟಾನಾಧಿಕಾರಿಗಳಿರುತ್ತಾರೆ.
ಜೀತ ಪದ್ದತಿಯ ಶೋಧನೆ, ಜೀತ ಪದ್ದತಿಗೆ ಒಳಗಾದ ಸಂತ್ರಸ್ತರನ್ನು ಜೀತಮುಕ್ತಗೊಳಿಸುವುದು ಹಾಗೂ ತಪ್ಪಿತಸ್ಥನಿಗೆ ಶಿಕ್ಷೆ ನೀಡುವುದು ಈ ಕಾಯ್ದೆಯ ಮುಖ್ಯ ಉದ್ದೇಶ ಎಂದ ಅವರು ಈ ಕಾರ್ಯಾಗಾರದಲ್ಲಿ ಜೀತ ಪದ್ದತಿ ನಿರ್ಮೂಲನೆ ಕುರಿತು ತ್ವರಿತಗತಿಯ ಕ್ರಮದ ಬಗ್ಗೆ ಚರ್ಚೆ ಆಗಬೇಕು.
ಕಾಯ್ದೆಯನ್ವಯ ಜೀತ ಪದ್ದತಿ ಶೋಧನೆ, ನಂತರ ಪ್ರಕರಣ ದಾಖಲಿಸಿ. ಮುಕ್ತಿ ಕೊಡಿಸಿ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಆಗಬೇಕು ಎಂದರು.
ಮುಕ್ತಿ ಅಲಯನ್ಸ್ ಕರ್ನಾಟಕದ ಸಂಚಾಲಕರಾದ ಬೃಂದಾ ಅಡಿಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜೀತ ಪದ್ಧತಿ (ರದ್ದತಿ) ಕಾಯ್ದೆ, ಅನುಷ್ಟಾನ ಕುರಿತು ಮಾತನಾಡಿದರು.
ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ಎಸಿ ಸತ್ಯನಾರಾಯಣ, ಮುಕ್ತಿ ಅಲಯನ್ಸ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ರಾಜೇಂದ್ರ, ಸ್ಟಾö್ಯನ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಎಂಎಡಿಬಿ ಅಧಿನ ಕಾರ್ಯದರ್ಶಿ ಹನುಮಾನಾಯಕ್ ಸ್ವಾಗತಿಸಿದರು.