ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆರೋಗ್ಯಕರ ತೂಕದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವುದು ಮತ್ತು ಸದೃಢರಾಗಿರುವುದು ಅವಶ್ಯಕವಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ BMI (Body Mass Index) 29 ಕಿಂತ ಹೆಚ್ಚು ಹೊಂದಿದ್ದ ಅಧಿಕಾರಿ ಸಿಬ್ಬಂಧಿಗಳ ತೂಕವನ್ನು ಕಡಿಮೆ ಮಾಡುವ ಉದ್ದೇಶದಿಂದ ದಿನಾಂಕಃ 26-05-2024 ರಿಂದ 23-06-2024 ರ ವರೆಗೆ ಕಾರ್ಯಗಾರವನ್ನು ಆಯೋಜಿಸಿದ್ದು, ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ ಸದರಿ ಕಾರ್ಯಾಗಾರದ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು,

ಶ್ರೀ ಮಿಥುನ್ ಕುಮಾರ್, ಜಿ.ಕೆ, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀ ಅನಂತ ಗುರೂಜಿ, ಹಿರಿಯ ಯೋಗ ಶಿಕ್ಷಕರು, ಯೋಗ ವಿಸ್ಮಯ ಟ್ರಸ್ಟ್, ಶಿವಮೊಗ್ಗ, ಶ್ರೀಮತಿ ಕುಮುದ, ಯೋಗ ವಿಸ್ಮಯ ಟ್ರಸ್ಟ್, ಶಿವಮೊಗ್ಗ ಮತ್ತು ಶ್ರೀ ಮೋಹನ್ ಕುಮಾರ್ ಎಸ್. ಡಿ, ಯೋಗ ಶಿಕ್ಷಕರು, ನಂದಿ ಗ್ಲಾಸ್ ಹೌಸ್, ಯೋಗ ವಿಸ್ಮಯ ಟ್ರಸ್ಟ್, ಶಿವಮೊಗ್ಗ ರವರಿಗೆ ಅಭಿನಂದನಾ ಪತ್ರವನ್ನು ನೀಡಿ, ಗೌರವಿಸಿ ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುರಿತು ಈ ಕೆಳಕಂಡಂತೆ ಮಾತನಾಡಿದರು.

1) ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಡವಾಗಿಟ್ಟುಕೊಳ್ಳಲು ಯೋಗ, ಧ್ಯಾನ ಮತ್ತು ವ್ಯಾಯಾಮ ಸಹಕಾರಿಯಾಗಲಿದ್ದು, ಈ ಕಾರ್ಯಾಗಾರದಲ್ಲಿ ಹೇಳಿಕೊಟ್ಟಂತಹ ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗಿರುತ್ತದೆ.

2) ಸದರಿ ಕಾರ್ಯಾಗಾರಕ್ಕೆ ಹಾಜರಾಗಿದ್ದ ಅಧಿಕಾರಿ ಸಿಬ್ಬಂಧಿಗಳಲ್ಲಿ ದೇಹದ ತೂಕವು ಧನಾತ್ಮಕ ಮಟ್ಟದಲ್ಲಿ ಇಳಿಕೆಯಾಗಿದ್ದು, ಯೋಚನಾ ಲಹರಿ ಮತ್ತು ಆಲೋಚನೆಗಳಲ್ಲಿಯೂ ಸಹಾ ಬದಲಾವಣೆಯನ್ನು ಕಾಣಬಹುದಾಗಿರುತ್ತದೆ. ಎಲ್ಲರೂ ಇನ್ನು ಮುಂದೆಯೂ ಕೂಡ ಈ ಹವ್ಯಾಸಗಳನ್ನು ಮುಂದುವರೆಸಿಕಂಡು ಹೋದಾಗ ಅನಾರೋಗ್ಯದಿಂದ ದೂರ ಉಳಿದು ಜೀವನದುದ್ದಕ್ಕೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿರುತ್ತದೆ ಮತ್ತು ಸದರಿ ಕಾರ್ಯಾಗಾರದ ಉದ್ದೇಶ ಪೂರ್ತಿಗೊಂಡು ಕಾರ್ಯಾಗಾರ ಯಶಸ್ಸು ಕಂಡಂತಾಗುತ್ತದೆ.

3) ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಂದೋಬಸ್ತ್, ರಾತ್ರಿ ಪಾಳಿ ಕರ್ತವ್ಯಗಳು ಹಾಗೂ ಇತರೆ ಮುಖ್ಯ ಸಂದರ್ಭಗಳಲ್ಲಿ ಸಮಯದ ಹೊಂದಾಣಿಕೆ / ಅಭಾವದಿಂದ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದೇ ನಿರ್ಲಕ್ಷತನ ತೋರುತ್ತೇವೆ. ಆದರೆ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಆರೋಗ್ಯವಾಗಿದ್ದಾಗ ಮಾತ್ರ ಕರ್ತವ್ಯ ಮತ್ತು ಕುಟುಂಬ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿರುತ್ತದೆ.

4) ನಮ್ಮ ದಿನ ನಿತ್ಯದ ಜೀವನದಲ್ಲಿ ನಿಯಮಿತ ಯೋಗ, ಧ್ಯಾನ, ವ್ಯಾಯಾಮ, ಕ್ರೀಡೆ, ನಡಿಗೆ, ಓಟ ಮತ್ತು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡಾಗ ಮಾತ್ರ ಆರೋಗ್ಯದಿಂದಿರಲು ಸಾಧ್ಯವಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ ದಿನದಲ್ಲಿ ಒಂದು ಗಂಟೆಯಾದರೂ ಅದಕ್ಕಾಗಿ ಮುಡಿಪಿಟ್ಟು ಆರೋಗ್ಯ ಸಮಸ್ಯೆಗಳಿಂದ ದೂರ ಇರಿ ಎಂದು ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಶ್ರೀ ಅನಂತ್ ಗುರೂಜಿ, ಯೋಗವಿಸ್ಮಯ ಟ್ರಸ್ಟ್ ಶಿವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಕೃಷ್ಣ ಮೂರ್ತಿ, ಪೊಲೀಸ್ ಉಪಾಧಿಕ್ಷಕರು,ಡಿಎಆರ್, ಶಿವಮೊಗ್ಗ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ