ಶಿವಮೊಗ್ಗ: ಈಗಾಗಲೇ ರಾಜ್ಯಾದ್ಯಂತ ಅಕ್ರಮ ಖಾತೆಗಳನ್ನು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿ ಸೇರಿದಂತೆ ಸಾರ್ವಜನಿಕರು ಭೂಮಿಯನ್ನು ಕಬ್ಜಾ ಮಾಡುತ್ತಿರುವ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಅದರಂತೆ ಶಿವಮೊಗ್ಗ ನಗರದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಹ ಹಲವಾರು ದೂರುಗಳು ಈ ಹಿಂದೆ ಸಲ್ಲಿಕೆಯಾಗಿದ್ದು, ಕೆಲವು ನಾಗರಿಕರು ಕಾನೂನಿನ ಅರಿವು ಇಲ್ಲದಿರುವುದರಿಂದ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಭಯದ ವಾತಾವರಣದಿಂದ ಯಾವುದೇ ದೂರು ನೀಡದೆ ಹಿಂದೆ ಸರಿದಿದ್ದು,  ಕೂಡಲೇ ಇಂತಹ ಭೂ ವಂಚಕ ಅಕ್ರಮ ಖಾತೆದಾರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ  ಉತ್ತರ ಬ್ಲಾಕ್ ಯುವ ಕಾಂಗ್ರೆಸ್  ಅಧ್ಯಕ್ಷ ಬಿ. ಲೋಕೇಶ್ ಆಗ್ರಹಿಸಿದ್ದಾರೆ.

ಹಿಂದೆ ನಗರದಲ್ಲಿ ನಡೆದಂತಹ ಆಶ್ರಯ ಬಡಾವಣೆಯ ಅಕ್ರಮ ಖಾತೆಗಳು ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವಾಜಪೇಯಿ ಲೇ ಔಟ್ ಸೈಟ್ ಹಂಚಿಕೆಯಲ್ಲಿ ನಡೆದ ಹಗರಣಗಳು ತನಿಖೆಯಲ್ಲಿ ಇದ್ದು, ಶಿವಮೊಗ್ಗ ನಗರದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಲವಾರು ಸರ್ಕಾರಿ ಜಾಗಗಳು ಸೇರಿದಂತೆ ಸಾರ್ವಜನಿಕರ ಜಾಗಗಳನ್ನು ಭೂಗಳ್ಳರು ನಕಲಿ ಖಾತೆಯನ್ನು ಸೃಷ್ಟಿಸಿಕೊಂಡಿರುವ ದೂರುಗಳಿವೆ. ಕೂಡಲೇ ಪಾಲಿಕೆ ಆಡಳಿತವು ಸರ್ಕಾರಿ ಜಾಗಗಳನ್ನು ಗುರುತು ಮಾಡಿ ಬೇಲಿ ನಿರ್ಮಿಸಿ, ಬೋರ್ಡನ್ನು ಹಾಕಬೇಕೆಂದು ಆಗ್ರಹಿಸಿದ್ದಾರೆ.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸೂಕ್ತ ದಾಖಲೆಗಳೊಂದಿಗೆ ಯುವ ಕಾಂಗ್ರೆಸ್ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…