ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಕನ್ನಡ ವಿಭಾಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ 27ನೇ ವಚನ ಮಂಟಪ ದತ್ತಿ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ. ಕೆ. ಅವರು ಮಾತನಾಡಿ, ” ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು. ಲಿಂಗ ಭೇದವನ್ನು, ಜಾತಿ ಭೇದವನ್ನು ವಿರೋಧಿಸುವ ದನಿಯೊಂದು 12ನೇ ಶತಮಾನದಲ್ಲಿ ಮೂಡಿ ಬಂತು. ಅದು ಇಂದಿಗೂ ನಮ್ಮ ಸಾಮಾಜಿಕ ಬದುಕಿನಲ್ಲಿ ಬೆಸೆದುಕೊಂದಿದೆ. ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ವಚನಕಾರರ ಜೀವನ ಆದರ್ಶವೆ ಸ್ಫೂರ್ತಿ. ಮನುಷ್ಯ ಬದುಕಿನ ಘನತೆಯನ್ನು ದುಡಿಮೆಯ ಮೌಲ್ಯವನ್ನು ಶರಣರು ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ” ಎಂದರು.

'ಬಸವಣ್ಣನವರು ಕಟ್ಟಿದ ಸಮಾಜ' ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಎಂ ಬಾರಂದೂರು ಅವರು ಮಾತನಾಡಿ, " ಇಂದಿನ ಸಮಾಜದಲ್ಲಿ ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವಾದಿ ಶಿವಶರಣರು ನೀಡಿದ ಸಂದೇಶವನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಆಧುನಿಕ ಬಂಡುವಾಳಶಾಹಿ ಜಗತ್ತಿನ ಸ್ವಾರ್ಥ ದುರಾಸೆಗಳಿಂದ ನಮ್ಮ ಬದುಕು ಕಲುಷಿತಗೊಂಡಿದೆ. ದಯೆ ಕ್ಷಮೆ ಇಂದಿನ ಜಗತ್ತಿಗೆ ಅಗತ್ಯವಾಗಿದೆ. ಅದನ್ನೇ ಬಸವಣ್ಣನವರು, ಸಕಲ ಜೀವಿಗಳ ಮೇಲೆ ದಯಾ ಭಾವ ತೋರುವುದೇ ಧರ್ಮ. ಹಿಂಸೆ, ದ್ವೇಷಗಳಿಂದ ಬಿಡುಗಡೆ ಪಡೆದು ಪ್ರೀತಿ ದಯೆ ಮೊದಲಾದ ಮಾನವೀಯ ಗುಣಗಳನ್ನು ಹರಡಿದಾಗಲೇ ಅರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ" ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀ ಮಹಾರುದ್ರ ಎಚ್. ಎನ್. ಕಾರ್ಯಕ್ರಮದ ಉದ್ದೇಶ ಮಹತ್ವವನ್ನು ವಿವರಿಸಿದರು. ದತ್ತಿದಾನಿಗಳಾದ ಪ್ರೊ. ಎ. ಎಸ್. ಚಂದ್ರಶೇಖರ್, ಶ್ರೀಮತಿ ಭಾರತಿ ಚಂದ್ರಶೇಖರ್, ಶ್ರೀ ಆರ್. ಎಸ್. ಸ್ವಾಮಿ., ರೋಟರಿ ವಿಜಯ ಕುಮಾರ್, ಉಪಕುಲಸಚಿವರಾದ ಶ್ರೀ ಚಂದ್ರಕಾಂತ್ ಎಂ., ಡಾ. ದೊಡ್ಡ ನಾಯ್ಕ್ ಎಚ್., ಶ್ರೀ ಕುಮಾರಸ್ವಾಮಿ, ಶ್ರೀಮತಿ ಅಶ್ವಿನಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಕು. ದಿವ್ಯಾ ಎಚ್. ಪಿ ಹಾಗೂ ಶ್ರೀ ಸಿದ್ದಾರೂಢ ಎಂ.ಐ. ಕಾರ್ಯಕ್ರಮ ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…