ಆನವಟ್ಟಿ ನ್ಯೂಸ್…

ಅತಿಥಿ ಶಿಕ್ಷಕರ ವೇತನದಲ್ಲೂ ಶೇಕಡ 25 ಕಮಿಷನ್ ಪಡೆಯುತ್ತಿರುವ ದುರಾಡಳಿತ ನಮ್ಮ ತಾಲೂಕಿನಲ್ಲಿ ಇದೆ. ರಾಜ್ಯದಲ್ಲಿ ಇದಿಯೋ ಇಲ್ಲೋ ಗೊತ್ತಿಲ್ಲ ಆದರೆ ನಮ್ಮ ತಾಲೂಕಿನಲ್ಲಿ ಮಾತ್ರ ಈ ರೀತಿಯ ಕಮಿಷನ್ ದಂದೆ ನಡೆಯುತ್ತಿದ್ದು. ಇಂತಹ ದುರಾಡಳಿತಕ್ಕೆ ಜನರ ತಕ್ಕ ಉತ್ತರ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧುಬಂಗಾರಪ್ಪ ತಿಳಿಸಿದರು.

ಆನವಟ್ಟಿ ಸಮೀಪದ ಕುಬಟೂರು ಗ್ರಾಮದ ಬಂಗಾರ ನಿವಾಸದ ಆವರಣದಲ್ಲಿ ಹಮ್ಮಿಕೊಂಡಿದ್ದ,ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ , ಗಂಗವಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆಗಳು ಜನರ ಮೇಲಿನ ಕಾಮನ್ ಸೆನ್ಸ್ ನಿಂದಲ್ಲ , ಬದಲಾಗಿ ಅವರ ಹೇಳಿಕೆಗಳು ಕಮಿಷನ್ ಸೆನ್ಸ್ ಪರವಾಗಿದೆ. ದಂಡಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಶಾಸಕರು ಕಚವಿ ಏತ ನೀರಾವರಿ ನಿಂತಿದ್ದು ಏಕೆ ಎಂದು ತಾಲೂಕಿನ ಜನರಿಗೆ ಮೊದಲು ತಿಳಿಸಲಿ, ಗುತ್ತಿಗೆದಾರ ಸ್ಪಂದಿಸಲಿಲ್ಲ ಎಂದು ಹಾರಿಕೆ ಉತ್ತರ ನೀಡುವ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಕಚವಿ ಏತ ನೀರಾವರಿ ಕಾಮಗಾರಿ ನಿಲ್ಲಲು ಕಮಿಷನ್ ವ್ಯವಹಾರವೇ ಕಾರಣ ಎಂದು ಆರೋಪಿಸಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ನೋಟಿಸ್ ನೀಡುತ್ತಿರುವುದು ನಿಂತಿಲ್ಲ ಮೂಗಿಗೆ ತುಪ್ಪ ಒರೆಸುವ ರೀತಿಯಲ್ಲಿ ಚುನಾವಣೆ ಗಿಮಿಕ್ ಗಾಗಿ ಸರ್ವೆ ಕಾರ್ಯ ಕೈಗೊಂಡಿದ್ದಾರೆ .ನಿಜವಾಗಲೂ ರೈತರ ಮೇಲೆ ಕಾಳಜಿ ಇದ್ದಿದ್ದೆ ಆದರೆ ಈಗಾಗಲೇ ಸರ್ವೇ ಆಗಿರುವ ಜಮೀನುಗಳನ್ನು ಮಂಜೂರು ಮಾಡಿಕೊಡಲಿ ಎಂದು ಸವಾಲು ಎಸೆದರು. ಅತಿಥಿ ಶಿಕ್ಷಕರು ಹಾಗೂ ಅಂಗವಿಕಲರು ಗುತ್ತಿಗೆ ಆಧಾರ ಮೇಲೆ ಸರ್ಕಾರಿ ಕಚೇರಿಗಳಲ್ಲಿ ದುಡಿಯುತ್ತಿದ್ದು ಅವರಿಗೆ ಕನಿಷ್ಠ ವೇತನ ನೀಡಬೇಕು ಎಂಬ ಅವಹಾಲು ನೀಡಿದ್ದಾರೆ ಅವರ ಬೇಡಿಕೆಯನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದರು .

ನರೇಗಾ ಯೋಜನೆಯಲ್ಲಿ ಬಹುಪಾಲು ಜನರಿಗೆ ಕೆಲಸ ನೀಡಲಾಗುತ್ತಿತ್ತು ಆದರೆ ಈಗ ಮಿಷನರಿ ಯಂತ್ರಗಳಿಗೆ ಹೆಚ್ಚಿನ ಪಾಲು ಕೆಲಸ ನೀಡಿದ್ದು ಕಮಿಷನ್ ಗಾಗಿ ಜನರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು. ಮೂಡಿ, ಮೂಗುರು ಏತ ನೀರಾವರಿ ಕಾಮಗಾರಿಯಲ್ಲಿ ಕಮಿಷನ್‌ ಹಣ ಉಳಿಸುವುದಕ್ಕಾಗಿ, ಸಣ್ಣಗಾತ್ರದ ಪೈಪ್‌ಗಳನ್ನು ಆಳವಡಿಸಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಬೃಹತ್‌ ಗಾತ್ರ ಪೈಪ್‌ಗಳ ಆಳವಡಿಕೆ ಮಾಡಲು ಯೋಜನೆಯ ನೀಲಿ ನಕ್ಷೆ ತಯಾರಿಸಿ, ಯೋಜನೆಗೆ ಬಜೆಂಟ್‌ನಲ್ಲಿ ಹಣ ಮಂಜೂರು ಮಾಡಿಸಿದ್ದೇನೆ. ಸಣ್ಣ ಗಾತ್ರದ ಪೈಪ್‌ಗಳ ಆಳವಡಿಕೆಯಿಂದ ನದಿಯಿಂದ ಹರಿದು ಬರುವ ನೀರು ಪೈಪ್‌ ಗಾತ್ರ ದಾಟಿ, ಮುಂದೆ ಹರಿದು ಹೋಗುತ್ತದೆ ಇದರಿಂದಾಗಿ, ಬೇಗ ಕೆರೆಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೂ ಸಾಕಾಷ್ಟು ಲೋಪದೋಷಗಳು ಕಾಮಗಾರಿಯಲ್ಲಿ ಇದ್ದು. ಶಾಸಕರ ಕಮಿಷನ್ ವ್ಯವಹಾರದಿಂದಾಗಿ ಏತ ನೀರಾವರಿ ಯೋಜನೆ, ಮೂಲ ಉದ್ದೇಶ ಈಡೇರಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ಮುಖಂಡರುಗಳಾದ ಸುರೇಶ್ ಹಾವಣ್ಣನವರ್, ಸದಾ ಗೌಡ,ಅಭಿಬುಲ್ಲ ಹವಾಲ್ದಾರ್, ಸಂಜೀವ್ ತರಕಾರಿ,ಕೃಷ್ಣಪ್ಪ ನಲ್ಲೂರ್, ಪರಮೇಶ್ ನಗವಾಡಿ ಎಲ್. ಜಿ. ಮಾಲ್ತೇಶ್ ಇತರರು ಹಾಜರಿದ್ದರು.

ವರದಿ ಪ್ರಜಾಶಕ್ತಿ…