ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ವಿವಿಧ ಕ್ಷೇತ್ರಗಳಿಗೆ ಬೇಟಿ ನೀಡಿದ ಸಂದರ್ಭ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಹಂದಿಗಳನ್ನು ಸಾಕುತ್ತಿರುವ ಮಾಲೀಕರು ವಿರುದ್ಧ ದೂರನ್ನು ಸ್ವೀಕರಿಸಿದ್ದಾರೆ.

ಹಂದಿಗಳಿಂದ ಅನೈರ್ಮಲ್ಯತೆ, ಪರಿಸರ ಮಾಲಿನ್ಯ, ಹಂದಿ ಜ್ವರ ಮತ್ತು ಮೆದುಳು ಜ್ವರದಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ಹಿಂದೆ ಹಂದಿ ಸಾಕಾಣಿಕೆದಾರರಿಗೆ ಪರ್ಯಾಯವಾಗಿ ಸಹಾಯಧನ ಮತ್ತು ಮನೆ ಮನೆ ಕಸ ಸಂಗ್ರಹಣೆಯ ಕೆಲಸವನ್ನು ನೀಡಿ ಕಡ್ಡಾಯವಾಗಿ ಹಂದಿ ಸಾಕಾಣಿಕೆ ಮಾಡಬಾರದೆಂದು ನಿರ್ದೇಶಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿತ್ತು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರ ಅನುಮತಿ ಇಲ್ಲದೆ ಹಂದಿಗಳನ್ನು ಸಾಕುತ್ತಿರುವುದು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಕಲಂ 344 ಮತ್ತು 345 ರನ್ವಯ ಕಾನೂನು ಬಾಹಿರವಾಗಿದೆ.
ಈ ಹಿಂದೆ ಕಛೇರಿಯಿಂದ ಅನೇಕ ಬಾರಿ ಪಾಲಿಕೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ತಿಳುವಳಿಕೆ ನೀಡಲಾಗಿದ್ದರೂ ಸಹಾ ಹಂದಿ ಮಾಲೀಕರು ಯಾವುದೇ ರೀತಿಯ ಕ್ರಮ ವಹಿಸಿರುವುದಿಲ್ಲ.

ಆದ್ದರಿಂದ ಎಲ್ಲಾ ಹಂದಿ ಸಾಕಾಣಿಕೆದಾರರು ನಗರ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿದ್ದಲ್ಲಿ ತಮ್ಮ ಎಲ್ಲಾ ಹಂದಿಗಳನ್ನು 3 ದಿನಗೊಳಗೆ ಖಾಲಿ ಮಾಡತಕ್ಕದ್ದು. ತಪ್ಪಿದ್ದಲ್ಲಿ ನಗರ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಬಿಡಾಡಿ ಹಂದಿಗಳೆಂದು ಪರಿಗಣಿಸಿ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇದರಿಂದ ಆಗುವ ಯಾವುದೇ ನಷ್ಟಕ್ಕೆ ಮಹಾನಗರ ಪಾಲಿಕೆ ಜವಾಬ್ದಾರರಲ್ಲ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸ್ಪಷ್ಟನೆ ನೀಡಿದ್ದಾರೆ.

ವರದಿ ಪ್ರಜಾ ಶಕ್ತಿ