ಶಿವಮೊಗ್ಗ: ಆರೋಗ್ಯ ಸಮಸ್ಯೆ ಎಂದರೆ ಕೇವಲ ದೈಹಿಕವಾಗಿ ಅಸ್ವಸ್ಥವಾಗುವುದಲ್ಲ. ಮಾನಸಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿಯೂ ಕೂಡ ಸ್ವಸ್ಥವಾಗಿ ಇರುವುದೇ ನಿಜವಾದ ಆರೋಗ್ಯ ಎಂದು ಭಾರತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ. ಕೆ.ಎಸ್. ಪಲ್ಲವಿ ತಿಳಿಸಿದ್ದಾರೆ.
ವಿನೋಬಾ ನಗರದ ಸತ್ಸಂಗದಲ್ಲಿ ನಡೆದ ದನ್ವಂತರಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಧನ್ವಂತರಿ ಅವರ ಚರಕ ಸಂಹಿತೆ ಹಾಗೂ ಇತರೆ ಗ್ರಂಥಗಳ ಪ್ರಕಾರ, ದೇವತಾರಾಧನೆ ಕೂಡಾ ಒಂದು ಚಿಕಿತ್ಸೆ. ಇದನ್ನು ದೈವವ್ಯಪಾಶ್ರಯ ಚಿಕಿತ್ಸೆ ಎಂದು ಕರೆಯಲಾಗಿದೆ ಎಂದು ಅವರು ವಿವರಿಸಿದರು.
ಸತ್ವಾವಜಯ ಚಿಕಿತ್ಸೆ ಮೂಲಕ ಮಾನಸಿಕ ಸಮಾಲೋಚನೆ ಹಾಗೂ ಯುಕ್ತಿವ್ಯಪಾಶ್ರಯದ ಮೂಲಕ ಮೂಲಕ ಔಷಧ ಚಿಕಿತ್ಸೆಯನ್ನು ಧನ್ವಂತರಿ ಅವರು ವಿವರಿಸಿದ್ದಾರೆ. ಈ ಹಿನ್ನಲೆಯಲ್ಲಿ ಭಜನೆಯಂತ ಚಟುವಟಿಕೆಗಳು ಆರೋಗ್ಯದ ಮೇಲೆ ಸತ್ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಸತತ 24 ವರ್ಷಗಳಿಂದ ನಿರಂತರವಾಗಿ ಭಜನೆ, ಲಲಿತಾ ಸಹಸ್ರನಾಮ, ಭಗವದ್ಗೀತೆ ಶ್ಲೋಕ ಪಠಣ ಮುಂತಾದ ಕಾರ್ಯಗಳನ್ನು ಆಯೋಜಿಸುತ್ತಿರುವ ವಿನೋಬಾ ನಗರ ಸತ್ಸಂಗ ವಿಭಾಗದ ಪ್ರತಿಮಾ ಉಡುಪ ಅವರನ್ನು ಸನ್ಮಾನಿಸಲಾಯಿತು. ಧನ್ವಂತರಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಆರೋಗ್ಯ ಭಾರತಿಯ ವನಜ ಶ್ರೀನಿವಾಸ್ ಮಾಡಿದರು. ಅನ್ನಪೂರ್ಣ ಸ್ವಾಗತಿಸಿದರು.