ಮಂಜುನಾಥ ಶೆಟ್ಟಿ…
ಶಿವಮೊಗ್ಗ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನೆಲೆಯಾಗಿದ್ದು, ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು ಹಾಗೂ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಈಸೂರಿನ ಹೋರಾಟಗಾರರ ತ್ಯಾಗವು ನಮಗೆಲ್ಲರಿಗೂ ಸದಾ ಸ್ಪೂರ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ
80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಶುಭಾಶಯ ಕೋರಿ ಸಂದೇಶ ನೀಡಿರುವ ಅವರು, “ಸ್ವಾತಂತ್ರ್ಯ ಎಂದರೆ ಕೇವಲ ಧ್ವಜ ಹಾರಿಸುವುದಲ್ಲ, ಪ್ರತಿಯೊಬ್ಬ ಮನುಷ್ಯನೂ ಗೌರವದಿಂದ ಬದುಕುವ ವಾತಾವರಣ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ. ಹಸಿವು, ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟವೇ ನಮ್ಮ ಇಂದಿನ ಕರ್ತವ್ಯ” ಎಂದಿದ್ದಾರೆ.
ಯುವಶಕ್ತಿಯನ್ನು ಸಮಾಜ ನಿರ್ಮಾಣದಲ್ಲಿ ತೊಡಗಿಸುವ ಉದ್ದೇಶದಿಂದ ರಾಜ್ಯಾದ್ಯಂತ 10,000 “ಭಾರತ್ ಜೋಡೋ ಯುವಕ ಸಂಘ” ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರತಿ ಯುವಕ ಸಂಘಕ್ಕೆ ಸರ್ಕಾರವು ವಾರ್ಷಿಕ ರೂ.10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ನೀಡಲಿದ್ದು, ಯುವಜನತೆ ಉದ್ಯೋಗ, ಶಿಕ್ಷಣ ಮತ್ತು ಸಮಾಜದ ಏಳಿಗೆಗಾಗಿ ಧ್ವನಿ ಎತ್ತಲು ಹಾಗೂ ಸರ್ಕಾರದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಇದು ವೇದಿಕೆಯಾಗಲಿದೆ.
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ…
ಗೃಹಲಕ್ಷ್ಮಿ: ಜಿಲ್ಲೆಯ 3.78 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ರೂ.2,363 ಕೋಟಿ ನೇರವಾಗಿ ಜಮೆಯಾಗಿದೆ.
ಅನ್ನಭಾಗ್ಯ: 3.76 ಲಕ್ಷ ಪಡಿತರ ಕಾರ್ಡುದಾರರಿಗೆ 2,45,290 ಕ್ವಿಂಟಾಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಶಕ್ತಿ ಯೋಜನೆ: 8.25 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ.
ಗೃಹಜ್ಯೋತಿ…
4.77 ಲಕ್ಷ ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ ₹752 ಕೋಟಿ ವೆಚ್ಚ ಮಾಡಿದೆ.
ಯುವನಿಧಿ: 12,969 ವಿದ್ಯಾರ್ಥಿಗಳಿಗೆ ರೂ.36 ಕೋಟಿ ನೇರ ಖಾತೆಗೆ ಜಮಾ ಮಾಡಲಾಗಿದೆ.
ರಾಜ್ಯದಲ್ಲಿ 1,000 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟು 1,000 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು.
ರಾಜ್ಯಮಟ್ಟದ ಕೆಪಿಎಸ್ ಉದ್ಘಾಟನಾ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿಯೇ ಆಯೋಜಿಸುವ ಉದ್ದೇಶವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 11 ಕೆಪಿಎಸ್ ಶಾಲೆಗಳು ಕಾರ್ಯಾಚರಿಸುತ್ತಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 59 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ.
ಜಿಲ್ಲೆಯ 222 ಸರ್ಕಾರಿ ಶಾಲೆಗಳಲ್ಲಿ ಪೂರ್ವಾಪ್ರಾಥಮಿಕ ತರಗತಿಗಳು ನಡೆಯುತ್ತಿವೆ.
ರೈತರ ಹಿತರಕ್ಷಣೆಗಾಗಿ ‘ಮುಖ್ಯಮಂತ್ರಿಗಳ ರೈತ ಚೈತನ್ಯ’ ಹಾಗೂ ‘ರೈತ ಮಿತ್ರ’ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಮುಂಗಾರು ಮಳೆಯ ಏರುಪೇರು, ಅತಿವೃಷ್ಟಿ ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ತ್ವರಿತ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಕೊಠಡಿಗಳ ದುರಸ್ತಿಗೆ ₹319 ಲಕ್ಷ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ರೂ. 1,180 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
ಐತಿಹಾಸಿಕ ಪರೀಕ್ಷಾ ಫಲಿತಾಂಶ: ರಾಜ್ಯದಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ (98.08%) ಹಾಗೂ ಪಿಯುಸಿಯಲ್ಲಿ (92.25%) ದೇಶದಲ್ಲೇ ಚಾರಿತ್ರಿಕ ಫಲಿತಾಂಶ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಶೇ. 96.5 ರಷ್ಟಿದ್ದು, ಹಿಂದಿಗಿಂತ ಶೇ. 14 ರಷ್ಟು ಏರಿಕೆಯಾಗಿದೆ.
ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆಗೆ ಇದೇ ಮೊದಲ ಬಾರಿಗೆ ಸರ್ಕಾರ ಆದೇಶಿಸಿದೆ.
ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಕಟ್ಟಡಗಳಿಗೆ ರೂ.24 ಕೋಟಿ ರೂ. ಮಂಜೂರಾಗಿದೆ. ಕಳೆದೆರಡು-ಮೂರು ವರ್ಷಗಳಲ್ಲಿ ಜಿಲ್ಲೆಗೆ 9 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮಂಜೂರಾಗಿದ್ದು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ.
ರಾಜ್ಯದ ಯುವಜನರ ಭವಿಷ್ಯಕ್ಕಾಗಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ 15,000 ಶಿಕ್ಷಕರ ನೇರ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.
‘ಯುವ ಉದ್ಯೋಗ ಸೇತು…
ಖಾಸಗಿ ವಲಯದಲ್ಲಿ ಉದ್ಯೋಗ ಬಯಸುವ ಯುವಕರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸಲು AI (ಕೃತಕ ಬುದ್ಧಿಮತ್ತೆ) ಆಧಾರಿತ ‘ಯುವ ಉದ್ಯೋಗ ಸೇತು’ ವೇದಿಕೆಯನ್ನು ಜಾರಿಗೆ ತರಲಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲಾಗಿದೆ. ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ‘ಪ್ರಜಾಸೇವಾ ಅಭಿಯಾನ’ ಜಾರಿಗೆ ಬಂದಿದೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 250 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಸಂಪರ್ಕ ರಸ್ತೆಗಳು ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ.
ವಿಬಿ ಜಿ ರಾಮ್ ಜಿ 2025-26ರಲ್ಲಿ 19 ಲಕ್ಷ ಮಾನವ ದಿನಗಳನ್ನು ರಚಿಸಿ, 68.69 ಕೋಟಿ ರೂ. ಕೂಲಿ ಹಾಗೂ 8.82 ಕೋಟಿ ರೂ. ಸಾಮಗ್ರಿಗಳಿಗೆ ವೆಚ್ಚ ಮಾಡಲಾಗಿದೆ.
2025-26ರಲ್ಲಿ 19 ಲಕ್ಷ ಮಾನವ ದಿನಗಳನ್ನು ರಚಿಸಿ, ರೂ.68.69 ಕೋಟಿ ರೂ. ಕೂಲಿ ಹಾಗೂ ರೂ.8.82 ಕೋಟಿ ರೂ. ಸಾಮಗ್ರಿಗಳ ವೆಚ್ಚ ಮಾಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 1,005 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಸಾಗುತ್ತಿದ್ದು, ಸಾಗರ ತಾಲೂಕಿನ ಆನಂದಪುರ ಯೋಜನೆಯ ರೂ.100.94 ಕೋಟಿ ರೂ. ಅಂದಾಜಿನ ಕೆಲಸಗಳು ಅಂತಿಮ ಹಂತದಲ್ಲಿವೆ.
ಮೆಗಾ ಆಸ್ಪತ್ರೆಯ ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದ್ದು, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ವಿಭಾಗ ಹಾಗೂ ತೀವ್ರ ನಿಗಾ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ದಶಕಗಳಿಂದ ಬಾಕಿ ಇರುವ ಶರಾವತಿ ಸಂತ್ರಸ್ತರ ಹಾಗೂ ಬಾಗರ್ ಹುಕುಂ ಸಾಗುವಳಿದಾರರ ಹಕ್ಕುಗಳ ನಿವಾರಣೆಗೆ ಸರ್ಕಾರ ಆದ್ಯತೆ ನೀಡಿದೆ.
ರೈತರು, ಬಡವರು ಹಾಗೂ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ‘ಎಸ್ಆರ್ ಬೊಮ್ಮಾಯಿ’ ಮತ್ತು ‘ದೇವರಾಜ ಅರಸು’ ಅವರ ಆಶಯದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 1990ರಲ್ಲಿ ಕೇವಲ 12,000 ಹೆಕ್ಟೇರ್ ಇದ್ದ ಅಡಿಕೆ ಬೆಳೆಯು ಇಂದು 1.4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ಇಂತಹ ಹಲವು ಜನಪರ ಯೋಜನೆಗಳ ಮೂಲಕ ಜನರ ಜೀವನಮಟ್ಟ ಸುಧಾರಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪನವರು ಇಂದಿಗೂ ರಾಜ್ಯದ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.
“ನಾನು ಬಂಗಾರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಆದರೆ, ಅದಕ್ಕಿಂತ ಹೆಚ್ಚಾಗಿ ಅದೊಂದು ದೊಡ್ಡ ಜವಾಬ್ದಾರಿ! ಬಡವರ, ಶೋಷಿತರ ಮತ್ತು ನಮ್ಮ ಶಿವಮೊಗ್ಗದ ಜನರ ಸೇವೆ ಮಾಡುವ ಅವರ ಹಾದಿಯಲ್ಲೇ ಮುನ್ನಡೆಯುವುದು ನನ್ನ ಕರ್ತವ್ಯವಾಗಿದೆ” ಎಂದು ಪ್ರತಿಪಾದಿಸಲಾಗಿದೆ.
ಅಭಿವೃದ್ಧಿ ಎಂದರೆ ಕೇವಲ ತಂತ್ರಜ್ಞಾನವಲ್ಲ; ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಗೌರವವಾಗಿದೆ. ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿ, ಕನ್ನಡದ ನೆಲ-ಜಲ-ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ ಶಿವಮೊಗ್ಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸರ್ವರ ಸಹಕಾರ ಕೋರಲಾಗಿದೆ.
1947ರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಗೌರವ ಸಲ್ಲಿಸುತ್ತಾ, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವುದು ಎಲ್ಲರ ಹೊಣೆ. ಈಸೂರಿನ ಸ್ವಾಭಿಮಾನವನ್ನು ಉಳಿಸಿ, ಕುವೆಂಪು ಅವರ ‘ವಿಶ್ವಮಾನವ’ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಹೊಸ ಅವಕಾಶ, ರೈತರಿಗೆ ಬಲ ಹಾಗೂ ಪ್ರತಿಯೊಬ್ಬರಿಗೂ ಗೌರವಯುತ ಬದುಕು ನೀಡುವ ಹೊಸ ಭಾರತವನ್ನು ಕಟ್ಟಲು ಒಟ್ಟಾಗಿ ಹೋರಾಡಿ ಗೆಲ್ಲೋಣ ಎಂದು ಕರೆ ನೀಡಿದರು.
“ನನ್ನ ತಂದೆ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪನವರು ಬಡವರು, ರೈತರು ಮತ್ತು ಹಿಂದುಳಿದವರ ಪರವಾಗಿ ನಿರ್ಮಿಸಿದ ಹಾದಿಯಲ್ಲಿ ಸಾಗುವುದು ನನ್ನ ಜವಾಬ್ದಾರಿಯಾಗಿದೆ. ಕುವೆಂಪು ಅವರ ‘ವಿಶ್ವಮಾನವ’ ಸಂದೇಶದೊಂದಿಗೆ ಶಿವಮೊಗ್ಗ ಮತ್ತು ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋಣ.”
— ಎಸ್. ಮಧು ಬಂಗಾರಪ್ಪ, ಸಚಿವರು
ಸ್ವಾತಂತ್ರ್ಯೋತ್ಸವ ವಿಶೇಷತೆಗಳು :
29 ಕವಾಯಿತು ತುಕಡಿಗಳು ಶಿಸ್ತು ಮತ್ತು ಆಕರ್ಷಕ ಪಥ ಸಂಚಲನ ನಡೆಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಡಿಎಆರ್ ಆರ್ ಪಿಐ ಯುವರಾಜ್ ಇವರು ಕವಾಯಿತು ಮುಖ್ಯ ದಂಡ ನಾಯಕರಾಗಿ ಕನ್ನಡದಲ್ಲಿ ಆದೇಶಗಳನ್ನು ನೀಡಿದರು.
ಶಿಸ್ತಿನ ಕವಾಯಿತು ಪ್ರದರ್ಶಿಸಿದ ತುಕುಡಿಗಳಾದ
ಕಸ್ತೂರಿಬಾ ಬಾಲಕಿಯರ ಪ ಪೂ ಪ್ರೌಢಶಾಲೆಯ ಭಾರತ ಸೇವಾದಳ ವಿಭಾಗಕ್ಕೆ ಪ್ರಥಮ, ಜಾವಳ್ಳಿಯ ಜ್ಞಾನದೀಪ ಪ್ರೌಢಶಾಲೆಗೆ ದ್ವಿತೀಯ ಹಾಗೂ
ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆ ತೃತೀಯ ಬಹುಮಾನ ಪಡೆಯಿತು.
ಅತ್ಯುತ್ತಮ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಕಿರಣ ಕೇಂದ್ರ ವಿದ್ಯಾಲಯಕ್ಕೆ ಪ್ರಥಮ, ಪೊಲೀಸ್ ಪಬ್ಲಿಕ್ ಶಾಲೆಗೆ
ದ್ವಿತೀಯ, ಮೌಂಟ್ ಇನ್ನೋವೇಟಿವ್ ಶಾಲೆಗೆ
ತೃತೀಯ ಬಹಮಾನ ಸ್ಥಾನ ಘೋಷಿಸಿ ಬಹುಮಾನ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
18 ಸಾವಿರ ಮಕ್ಕಳ ಪಾಲ್ಗೊಳ್ಳುವಿಕೆ: ಇವಿಧ ಶಾಲಾ-ಕಾಲೇಜುಗಳಿಂದ ಸುಮಾರು 18000 ಮಕ್ಕಳು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ಎಸ್ ಎನ್ ಚನ್ನಬಸಪ್ಪ
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ರಾಜ್ಯ ಜವಳ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ರಾಜ್ಯ ಎಸ್ ಸಿ, ಎಸ್ ಟಿ, ಅಲೆಮಾರಿಗಳ ಅಭಿವೃದ್ದಿ ಸಂಘದ ಅಧ್ಯಕ್ಷೆ ಪಲ್ಲವಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ,ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ,ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಎಸಿ, ತಹಶೀಲ್ದಾರ್, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.