ಆರೋಗ್ಯವಂತ ಜನರು ರಕ್ತದಾನ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು. ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ಜೆಸಿಐ ಸಹ್ಯಾದ್ರಿ ಸಂಸ್ಥೆಯ ಸಂಯೋಜನೆಯೊದಿಗೆ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನ ಅತ್ಯಂತ ಪ್ರಮುಖವಾಗಿದ್ದು, ರಕ್ತದ ಬೇಡಿಕೆ ಹೆಚ್ಚಿರುವ ಕಾರಣ ಆರೋಗ್ಯವಂತ ಜನರು ರಕ್ತದಾನ ಮಾಡಬೇಕು. ಆರೋಗ್ಯ ವೃದ್ಧಿಗೂ ಸಹಕಾರಿ ಆಗುತ್ತದೆ ಎಂದು ತಿಳಿಸಿದರು. ನೆಪ್ಚೂನ್ ಆಟೋ ಕಾರ್ ಗ್ಯಾರೇಜ್ ಮಾಲೀಕ ಕಿಶೋರ್ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ಎಲ್ಲ ಕಾರ್ಮಿಕರು ರಕ್ತದಾನ ಮಾಡುತ್ತ ಬರುತ್ತಿದ್ದು, ಸಮಾಜ ಮತ್ತು ರೋಗಿಗಳಿಗೆ ಅನುಕೂಲವಾಗುವಂತಹ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸೇವಾ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡು ಕೆಲಸ ಮಾಡುತ್ತಿದೆ. ಇದೀಗ ಜೆಸಿಐ ಸಹ್ಯಾದ್ರಿ ಸಂಸ್ಥೆ ಜತೆಯಲ್ಲಿ ರಕ್ತದಾನ ಶಿಬಿರ ನಡೆಸುತ್ತಿರುವುದು ತುಂಬಾ ಸಂತೋಷದ ಸಂಗತಿ. ಜೆಸಿಐ ಸಹ್ಯಾದ್ರಿ ಅಧ್ಯಕ್ಷ ಕಿಶೋರ್ ಅವರು ಸಂಸ್ಥೆಯಲ್ಲಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ ನಡೆಸುತ್ತಿದ್ದಾರೆ ಎಂದು ಹೇಳಿದರು.
ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ರಕ್ತದಾನದಿಂದ ಆಗುವ ಅನುಕೂಲಗಳು ಸಾಕಷ್ಟು ಇದ್ದು, ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನೀವು ಮಾಡುವ ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು. ಜನ್ಮದಿನ ಹಾಗೂ ಮನೆಯಲ್ಲಿ ನಡೆಯುವ ಶುಭ ಕಾರ್ಯದ ಸಂದರ್ಭಗಳಲ್ಲಿ ಉತ್ತಮ ಸೇವಾ ಕಾರ್ಯದಿಂದ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು.
ಜೆಸಿಐ ಸಹ್ಯಾದ್ರಿ ಅಧ್ಯಕ್ಷ ಕಿಶೋರ್‌ಕುಮಾರ್ ಮಾತನಾಡಿ, ಈವರೆಗೂ ಸಂಸ್ಥೆ ನೆಪ್ಚೂನ್‌ನಿಂದ 600 ಯೂನಿಟ್ ರಕ್ತದಾನ ಮಾಡಲಾಗಿದ್ದು, ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಸಮಾಜಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಡಲು ಸದಾ ಸಿದ್ಧವಿದ್ದೇವೆ. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ಅನುಷ್ ಗೌಡ, ಗುರುರಾಜ್, ಬಸವರಾಜ್, ಅನಿಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153