ಶಾಂತಿನಗರಕ್ಕೆ ರಸ್ತೆ ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯಗಳ ನೀಡಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ ಶಾಂತಿನಗರ(ರಾಗಿಗುಡ್ಡ) ನಿವಾಸಿಗಳು ದಿಢೀರ್ ರಸ್ತೆ ನಡೆಸಿ ಪ್ರತಿಭಟಿಸಿದರು.ಶಾಂತಿನಗರ ಶಿವಮೊಗ್ಗದ ಅಭಿವೃದ್ಧಿಯಲ್ಲಿರುವ ಒಂದು ಬಡಾವಣೆ. ಆದರೆ, ಇಲ್ಲಿ ಅನೇಕ ವರ್ಷಗಳಿಂದ ಒಂದು ಒಳ್ಳೆಯ ರಸ್ತೆ ಇಲ್ಲವಾಗಿದೆ. ಮೂಲ ಸೌಕರ್ಯಗಳು ಕೂಡ ಇಲ್ಲ. ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಹಲವರು ಶ್ವಾಸಕೋಶದ ಕಾಯಿಲೆಗಳಿಗೆ ಗುರಿಯಾಗಿದ್ದಾರೆ.

ರಸ್ತೆಗಳೆಲ್ಲಾ ಗುಂಡಿ ಬಿದ್ದಿರುವುದರಿಂದ ಅಪಘಾತಗಳು ಹೆಚ್ಚಾಗಿವೆ. ನೂರಾರು ಜನ ಆಸ್ಪತ್ರೆಗೆ ಸೇರಿ ಲಕ್ಷಾಂತರ ರೂ ಖರ್ಚು ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿ ಮೂಲ ಸೌಕರ್ಯವಿಲ್ಲದ ಜನರನ್ನು ಜನಪ್ರತಿನಿಧಿಗಳು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಲ್ಲಿನ ಹೊಸ ಬಡಾವಣೆಗಳಿಗೆ ಸಂಪರ್ಕ ರಸ್ತೆಗಳನ್ನು ಕಲ್ಪಿಸಿಕೊಡುತ್ತಾರೆ. ಆದರೆ, ಮುಖ್ಯ ರಸ್ತೆಗಳ ಕಾಮಗಾರಿಗೆ ಆದ್ಯತೆ ನೀಡುವುದಿಲ್ಲ. ಜಿಲ್ಲಾಡಳಿತ ಕೂಡ ವಿಫಲವಾಗಿದೆ. ಈ ಭಾಗಕ್ಕೆ ಇಬ್ಬರು ಪಾಲಿಕೆ ಸದಸ್ಯರು ಬರುತ್ತಾರೆ.

ಆದರೆ, ಇಬ್ಬರೂ ಕೂಡ ಅಭಿವೃದ್ಧಿ ಬಗ್ಗೆ ಚಿಂತಿಸಿಲ್ಲ. ಸರ್ಕಾರದಿಂದ ವಿಶೇಷ ಅನುದಾನಗಳು ಕೂಡ ಬಿಡುಗಡೆಯಾಗಿಲ್ಲ. ಶಾಂತಿನಗ ಬಡಾವಣೆಯನ್ನು ಮಲತಾಯಿ ಧೋರಣೆಯಿಂದ ಕಾಣಲಾಗುತ್ತದೆ ಎಂದು ದೂರಿದರು.ತಕ್ಷಣವೇ ರಸ್ತೆ ಕಾಮಗಾರಿ ಸೇರಿದಂತೆ ಶಾಂತಿನಗರಕ್ಕೆ ಮೂಲ ಸೌಕರ್ಯಗಳನ್ನು ನೀಡಬೇಕು. ಇಲ್ಲದಿದ್ದರೆ ಇಲ್ಲಿನ ನಿವಾಸಿಗಳು ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಮುಜೀಬ್, ಶಶಿಕುಮಾರ್, ಪ್ರಕಾಶ್ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…