ಕೋಲಾರ ನ್ಯೂಸ್…

ಕೋಲಾರ:: ಡಿಸೆಂಬರ್ ೨೯ ಕುವೆಂಪುರವರ ಸಮನ್ವಯ ಸಮಾನತೆ ಸಮಬಾಳು ಎಂದಿಗೂ ಶಾಶ್ವತವಾದ ಸುವರ್ಣ ಅಕ್ಷರಗಳು ಎಂದು ಕವಿ ಡಾ ಶರಣಪ್ಪ ಗಬ್ಬೂರು ತಿಳಿಸಿದರು.

ಅವರು ನಗರದ ಜಯ ಕರ್ನಾಟಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಸಂದೇಶ ದಿನಾಚರಣೆ ಉಪನ್ಯಾಸ ನೀಡಿ ಮಾತಾನಾಡುತ್ತಿದ್ದರು.

ಕುವೆಂಪುರವರ ವಿಚಾರ ಧಾರೆಗಳು ಇಂದಿಗೂ ಮನುಷ್ಯ ಕುಲಕ್ಕೆ ನೀಡಿದ ಆದರ್ಶಗಳು ಮತ್ತು ಮಾರ್ಗದರ್ಶನ ಸಾರ್ವಕಾಲಿಕ ಸತ್ಯ. ಕುವೆಂಪುರವರ ಚಿಂತನೆ ತತ್ವ ಆದರ್ಶಗಳ ಮೂಲಕ ವಿಶ್ವವ್ಯಾಪಿ ಹೆಸರನ್ನು ಮಾಡಿದ ಮೇರು ಕವಿಯಾಗಿದ್ದಾರೆ. ನೈಸರ್ಗಿಕ ಕವಿಯಾಗಿ ಸಮುದಾಯದ ಮತ್ತು ಸಮಾಜದ ಸ್ಥಿತಿಗತಿಗಳನ್ನು ವಾಸ್ತವಾಗಿ ತಮ್ಮ ಕಾವ್ಯಗಳಲ್ಲಿ ಕಟ್ಟಿಕೊಡುವ ಮೂಲಕ ವಿಶ್ವ ಮಾನವ ಸಂದೇಶವನ್ನು ಸಾರುತ್ತಿದರು. ಮಾನವ ಜನಾಂಗಕ್ಕೆ ಯಾವುದೇ ತಾರತಮ್ಯವಿಲ್ಲದೆ ನಾವೆಲ್ಲರೂ ವಿಶ್ವ ಮಾನವರಾಗಿರಬೇಕು ಹಾಗೂ ಕುವೆಂಪುರವರ ಕೃತಿಗಳನ್ನು ಅವಲೋಕಿಸಿ ಅವರ ವೈಚಾರಿಕತೆಯ ಮತ್ತು ಜಾಗೃತಿ ಗೊಳಿಸುವಂತ ಚಿಂತನೆಗಳನ್ನು ಪ್ರತಿಯೊಂದು ಮನೆ ಮನಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ. ಆರ್ ತ್ಯಾಗರಾಜ್ ಮಾತಾನಾಡಿ ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿರುವ ಸಂತೋಷದ ಸಂಗತಿ. ಸರ್ಕಾರ ವಿವಿಧ ಇಲಾಖೆಗಳ ಮೂಲಕ ಚರ್ಚಾ ಸ್ಪರ್ಧೆಗಳು, ವಿಚಾರ ಗೋಷ್ಠಿಗಳು ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ವಿಶ್ವ ಮಾನವ ಸಂದೇಶವನ್ನು ಸಾರುತ್ತಿರುವುದು ಶ್ಲಾಘನೀಯ. ಕನ್ನಡದ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಧೀಮಂತ ಸಾಹಿತಿ. ಮನುಜ ಮತ ವಿಶ್ವಪಥ ದ ಮೂಲಕ ಮಾನವ ಕುಲಕ್ಕೆ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಮಹಾನ್ ಕವಿ ಎಂದು ಬಣ್ಣಿಸಿದರು.

ಅತಿಥಿಗಳಾಗಿ ಆಗಮಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಜಿ ಶ್ರೀನಿವಾಸ್ ಮಾತಾನಾಡಿ ಇಂದಿನ ಯು ಪೀಳಿಗೆಗಳಿಗೆ ಕುವೆಂಪು ಮಾತು ಸಂದೇಶಗಳು ಭಾರಿ ಮಟ್ಟದಲ್ಲಿ ಪರಿಣಾಮ ಬೀರುತ್ತಿವೆ. ಯುವ ಜನಾಂಗಕ್ಕೆ ಇವರ ಕನ್ನಡದ ಅದ್ಭುತ ಕೊಡುಗೆಯೂ ಸ್ಫೂರ್ತಿದಾಯಕ. ಕುವೆಂಪುರವರ ಕನ್ನಡದ ಬಗ್ಗೆ ಚಿಂತನೆ ಕಾಳಜಿ ಮಾತಿನ ಪ್ರಜ್ಞೆ ರೈತರ ಬಗ್ಗೆ ಇರುವ ಗೌರವ ಎಲ್ಲವೂ ಗೈರವಯುತವಾಗಿದೆ. ಬಾರಿಸು ಕನ್ನಡ ಡಿಂಡಿಮವ ಎನ್ನುವ ಮೂಲಕ ಕನ್ನಡಕ್ಕೆ ಅದ್ಭುತವಾದ ಹಾಡನ್ನು ಕೊಟ್ಟು ಜೈ ಭಾರತ ಜನನಿಯ ಎಂಬ ಅರ್ಥ ಪೂರ್ಣವಾದ ನಾಡಗೀತೆಯಾಗಿ ನೀಡಿದ ನಮ್ಮ ವಿಶ್ವ ಮಾನವ ಕವಿ ಎಂದರು ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಮಾತನಾಡಿ ಕುವೆಂಪುರವರು ಅವರು ಸಾಹಿತ್ಯದ ಮೂಲಕ ವಿಶ್ವದ ಗಮನವನ್ನು ಸೆಳೆದ ಮೇರು ಸಾಹಿತಿ ಇವರ ಜನ್ಮದಿನಾಚರಣೆ ಆಚರಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಸಂಚಾಲಕ ಅಭಿ ಜಗದೀಶ್ ಸಂಘಟನಾ ಕಾರ್ಯದರ್ಶಿ ಟೈಗರ್ ವೆಂಕಟೇಶ್ ಚಂದ್ರಶೇಖರ್ ನಂದೀಶ್ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಭಾಗ್ಯಲಕ್ಷ್ಮಿ ಪದಾಧಿಕಾರಿಗಳಾದ ನಾರಾಯಣಮ್ಮ ವಿಜಯಮ್ಮ ಗೌರಮ್ಮ ರುಕ್ಮಿಣಿ ಮಂಜುಳಾ ನಾಗೂಬಾಯಿ ಚೈತ್ರ ಲಲಿತಾ ಇನ್ನಿತರರು
ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…