ಶಿವಮೊಗ್ಗ: ಪಾಲಿಕೆಯ ಯಾವುದೇ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿಲ್ಲ. ದೇವಕಾತಿ ಕೊಪ್ಪದಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ ಎಂದು ಮೇಯರ್ ಸುನೀತಾ ಅಣ್ಣಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೆರೆ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ವಿಳಂಬವಾಗಿದೆ. ಈಗ ಎಲ್ಲಾ ಬಾಕಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿರಬಹುದು. ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 2023ರ ಜೂನ್ ತಿಂಗಳವರೆಗೆ ಸರ್ಕಾರ ಅವಕಾಶ ನೀಡಿದೆ. ಅಷ್ಟರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು. ಈಗಾಗಲೇ ದುರ್ಗಿಗುಡಿ, ಮಿಷನ್ ಕಾಂಪೌಂಡ್ನುಲ್ಲಿ ಕೆಲಸ ಮುಗಿದಿರುವೆಡೆ ಜನರು ಸಂತೋಷದಿಂದ ಓಡಾಡುತ್ತಿದ್ದಾರೆ. ಆದರೆ ಜೈಲ್ ರಸ್ತೆ ಸೇರಿದಂತೆ ಇತರೆಡೆ ಕೆಲಸ ನಡೆಯುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಮಗಾರಿ ನಡೆಯುವಾಗ ಧೂಳು ಬರುವುದು ಸಹಜ, ಇದಕ್ಕಾಗಿ ರಸ್ತೆಗೆ ನೀರು ಹಾಕಲಾಗುತ್ತಿದೆ. ಕೆಲವೆಡೆ ಹೆಚ್ಚು ತೊಂದರೆ ಆಗಿರಬಹುದು, ಆದರೆ ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ಬೂಟಾಟಿಕೆಯ ಹೋರಾಟ ಮಾಡುತ್ತಿದೆ ಎಂದರು.ಕಾಂಗ್ರೆಸ್ ಸ್ಮಾರ್ಟ್ಸಿಗಟಿ ಕಾಮಗಾರಿ ಸೇರಿದಂತೆ ಪಾಲಿಕೆಯ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ತಪ್ಪು ಕಲ್ಪನೆ ಮೂಡಿಸುತ್ತಿದೆ. ತಾನು ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿದೆ ಎಂದು ಟೀಕಿಸಿದರು.ರಾಜಕಾರಣಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ನಗರಕ್ಕೆ ಶಾಪವಲ್ಲ, ವರವಾಗಿದೆ. ಎಲ್ಲಾ ಕಾಮಗಾರಗಳು ಮುಗಿದ ನಂತರ ಗೊತ್ತಾಗುತ್ತದೆ ಎಂದರು.ಗೋವಿಂದಪುರದಲ್ಲಿ ಆಶ್ರಯ ಸಮಿತಿಯಿಂದ ನಿರ್ಮಿಸುತ್ತಿರುವ ಜಿ ಪ್ಲಸ್ 2 ಮನೆಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಆಗಸ್ಟ್ ವೇಳೆಗೆ 1500 ಮನೆಗಳು ಸಂಪೂರ್ಣ ಸಿದ್ದವಾಗಲಿವೆ. ಗೋಪಶೆಟ್ಟಿಕೊಪ್ಪದಲ್ಲಿ ಶೀಘ್ರದಲ್ಲೇ ಮನೆ ನಿರ್ಮಾಣ ಪ್ರಾರಂಭವಾಗುವುದು ಎಂದು ತಿಳಿಸಿದರು.ಪಾಲಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಸಲಹೆ ನೀಡಿ, ನಾವು ಸರಿ ಮಾಡಲು ಪ್ರಯತ್ನಿಸುತ್ತೇನೆ. ವಿರೋಧ ಪಕ್ಷವೆಂದ ಬರೀ ಆರೋಪಗಳನ್ನೇ ಮಾಡಬೇಡಿ ಎಂದರು.ಸುದ್ದಿಗೋಷ್ಟಿಯಲ್ಲಿ ಉಪಮೇಯರ್ ಶಂಕರ ಗನ್ನಿ, ಹಾಗೂ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಪ್ರಮುಖರಾದ ಜ್ಞಾನೇಶ್ವರ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಬಳ್ಳೆಕೆರೆ ಸಂತೋಷ್, ನಾಗರಾಜ್, ಬಾಲು ಮತ್ತಿತರರಿದ್ದರು..

ವರದಿ ಮಂಜುನಾಥ್ ಶೆಟ್ಟಿ…