ಶಿವಮೊಗ್ಗ: ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆ ನಡೆಸಲು ಅನುಮತಿ ನೀಡಲಾಗಿದ್ದು, ನೌಕರರು ಕೆಲಸಕ್ಕೆ ಹೋಗಿ ಬರಲು ಪೊಲೀಸರಿಂದ ಯಾವುದೇ ಅಡೆತಡೆ ಮಾಡಬಾರದೆಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಸರ್ಕಾರ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆ ನಡೆಸಲು ಅನುಮತಿ ನೀಡಿದೆ. ಅಗತ್ಯ ವಸ್ತುಗಳ ಸರಬರಾಜು ವಾಹನಗಳ ಸಂಚಾರಕ್ಕೆ ಅನುಮತಿ ಇದ್ದು, ಈ ಸಮಯದಲ್ಲಿ ಈ ವಾಹನಗಳಿಗೆ ಯಾವುದೇ ತಾಂತ್ರಿಕ ತೊಂದರೆಯಾದಲ್ಲಿ ಅವುಗಳನ್ನು ಸರಿಪಡಿಸಲು ಬೇಕಾಗುವ ಗ್ಯಾರೇಜ್, ಬಿಡಿಭಾಗಗಳ ಅಂಗಡಿ ತೆರೆದಿಡಬೇಕಿದ್ದು, ಇಂತಹ ಅಂಗಡಿಗಳನ್ನು ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ತೆರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲು ಕೈಗಾರಿಕಾ ಸಂಘದ ಸಂಯೋಜಿತ ಸಂಘಗಳು ಸಹಕರಿಸಲಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕೆಲಸಕ್ಕೆ ಹೋಗುವ ನೌಕರರು ಗುರುತಿನ ಚೀಟಿ ತೋರಿಸಿ ಹೋಗಿ ಬರಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್, ಪ್ರಮುಖರಾದ ಜಿ.ವಿಜಯಕುಮಾರ್ ವಸಂತ ಹೋಬಳಿದಾರ್, ಮಧುಸೂದನ್ ಐತಾಳ್, ಜಗದೀಶ್ ಮಾತನವರ್, ಎಸ್.ಎಸ್. ಉದಯಕುಮಾರ್, ಪ್ರದೀಪ್ ವಿ. ಯಲಿ, ಪರಮೇಶ್ವರ್ ಇ.ಎಂ., ರಾಜು, ಬಿ.ಆರ್. ಸಂತೋಷ್, ಕೆ.ಎಸ್. ಸುಕುಮಾರ್, ಗಣೇಶ್ ಎಂ. ಅಂಗಡಿ, ಬಿ. ಮಂಜೇಗೌಡ, ಮರಿಸ್ವಾಮಿ, ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…