ಶಿವಮೊಗ್ಗ: ದಾಸ್ಯದ ಮುಕ್ತಿಗೆ ಹೋರಾಡಿದ, ಭಾರತ ದೇಶ ಕಂಡಿರುವ ಅಪ್ರತಿಮ ದೇಶಾಭಿಮಾನಿ ಸುಭಾಷ್ ಚಂದ್ರಬೋಸ್ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯದಿಂದಲೇ ಅಸಾಮಾನ್ಯ ಪ್ರತಿಭಾವಂತ ಆಗಿದ್ದ ಸುಭಾಷ್ ಚಂದ್ರ ಬೋಸರ ತತ್ವ ಆದರ್ಶ ಗುಣಗಳು ಹಾಗೂ ದೇಶಾಭಿಮಾನ ಪ್ರಸ್ತುತ ಯುವಜನರಿಗೆ ಮಾದರಿ, ಸ್ಫೂರ್ತಿ ಎಂದು ತಿಳಿಸಿದರು.

ಆರೋಗ್ಯವಂತ ಯುವ ಸಮುದಾಯ ರಕ್ತದಾನ ಮಾಡಲು ಮುಂದಾಗಬೇಕು ಹಾಗೂ ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೇರೆಪಿಸುವ ಕೆಲಸ ಮಾಡಬೇಕು. ಇದರಿಂದ ಜೀವ ಉಳಿಸುವ ರಕ್ತದಾನದಂತಹ ಮಹಾತ್ಕಾರ್ಯದಲ್ಲಿ ಭಾಗಿಯಾದಂತಾಗುತ್ತದೆ ಎಂದರು.
ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷ ಹರೀಶ್‌ಕುಮಾರ್ ಲತೋರೆ ಮಾತನಾಡಿ, ಏಳು ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ಸುಭಾಷ್ ಚಂದ್ರಬೋಸರ ಜನ್ಮದಿನದಂದು ರಕ್ತದಾನ ಶಿಬಿರ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಂ.ಎನ್.ವೆAಕಟೇಶ್ ಅವರು 64ನೇ ಬಾರಿ ರಕ್ತದಾನ ಮಾಡಿದರು. 106 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕಾರಿ ಸಮಿತಿಯ ಮಹಿಳೆಯರಾದ ಕವಿತಾ ಹರೀಶ್ ಹಾಗೂ ಸಂಧ್ಯಾ ರಾಮಚಂದ್ರ ರಕ್ತದಾನ ಮಾಡಿದ್ದರು.
ಕಾರ್ಯದರ್ಶಿ ಪ್ರವೀಣ್ ಉತ್ತರಕರ್, ಡೇಪೇಟಿವ್ ಗವರ್ನರ್ ವಿನಾಯಕ.ಡಿ.ಎನ್, ಫಾಸ್ಟ್ ಗವರ್ನರ್ ಸೆಕ್ರೆಟರಿ ಸವನ್ ಜಿ ರಂಗ್ಧೋಲ್, ಸಂಜೀವಿನಿ ಬ್ಲಡ್ ಬ್ಯಾಂಕಿನ ಧರಣೇಂದ್ರ ದಿನಕರ್, ಪ್ರೇರಣ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇಂದಿನ ಶಿಬಿರದಲ್ಲಿ 32 ಸದಸ್ಯರು ರಕ್ತದಾನ ಮಾಡಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಆಚರಣೆಯಲ್ಲಿ ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…