ಶಿವಮೊಗ್ಗ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಕಾಯಿಲೆಗಳಿಂದ ದೂರ ಇರಲು ಸಾಧ್ಯವಿದೆ ಎಂದು ರೋಟರಿ ಜಿಲ್ಲೆ ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಹೇಳಿದರು.

ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ರೋಟರಿ ವಲಯ 10 ಮತ್ತು 11ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಕ್ರೀಡೆಯಿಂದ ಖಿನ್ನತೆ ದೂರವಾಗುವುದರ ಜೊತೆಗೆ ಸದಾ ನಾವು ಲವಲವಿಕೆಯಿಂದ ಇರುತ್ತೇವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಸೇವೆಗಳ ಜೊತೆಗೆ ಸದಸ್ಯರ ಆರೋಗ್ಯದ ಬಗ್ಗೆ ಸಹ ಕಾಳಜಿ ವಹಿಸಿ ಇಂತಹ ಕ್ರೀಡೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಎಲ್ಲ ಸದಸ್ಯರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ವಲಯ 10 ಮತ್ತು 11ರ ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ರೋಟರಿ ಸ್ನೇಹ ಸೌಹಾರ್ದತೆ ಹಾಗೂ ಸೇವೆಯ ಜೊತೆಗೆ ರೋಟರಿ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಕ್ರೀಡಾಕೂಟ ಆಯೋಜಿಸಿದೆ. ಪ್ರತಿಯೊಬ್ಬರು ಕ್ರೀಡೆಗಳಲ್ಲಿ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ವಲಯ 10 ಮತ್ತು 11ರ ಕ್ರೀಡಾಕೂಟದಲ್ಲಿ ನೂರಾರು ಸದಸ್ಯರು ಪಾಲ್ಗೊಂಡಿದ್ದರು. ವಲಯ 10 ಮತ್ತು 11ರ ಸಂಚಾರಕರಾದ ರೇವಣಸಿದ್ದಪ್ಪ ಮತ್ತು ಧರ್ಮೇಂದರ್ ಸಿಂಗ್, ವಲಯ 10ರ ಸಹಾಯಕ ಗವರ್ನರ್ ಸುನಿತಾ ಶ್ರೀಧರ್, ಎಂ.ಪಿ.ಆನಂದಮೂರ್ತಿ, ಜಿ.ವಿಜಯಕುಮಾರ್, ಕೆಪಿ ಶೆಟ್ಟಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ಎಲ್ಲಾ ಕ್ಲಬ್ಬಿನ ಅಧ್ಯಕ್ಷರು, ಕಾರ್ಯದರ್ಶಿಗಳು, ಗೋಪಾಲ್ ಕೃಷ್ಣ ಗುಪ್ತ, ಎಂ.ಆರ್.ರಘು, ಜಿ.ರವಿ, ಚಂದ್ರ ಜೆಪಿ, ಧನರಾಜ್, ಕುಮಾರಸ್ವಾಮಿ, ವೀಣಾ ಸುರೇಶ್, ಕೋಣಂದೂರು ಪುಟ್ಟಪ್ಪ, ರಾಧಾಕೃಷ್ಣ, ದೇವೆಂದ್ರಪ್ಪ, ಎನ್.ವಿ.ಭಟ್ ಉಪಸ್ಥಿತರಿದ್ದರು. 15 ಕ್ಲಬ್ ಗಳ ಎಲ್ಲಾ ಸದಸ್ಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…