ಶಿವಮೊಗ್ಗ : ನಮ್ಮ ಯುವ ಸಮೂಹಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಲು ಭಾರತ ಸರ್ಕಾರವು ಇಸ್ರೋ ಸಂಸ್ಥೆಯ ಮೂಲಕ ಮುಕ್ತ ಅವಕಾಶ ನೀಡುತ್ತಿದ್ದೆ ಎಂದು ಇಸ್ರೋ ಸಂಸ್ಥೆಯ ಸಂವಹನ ಮತ್ತು ನಿಯಂತ್ರಣಾ ಕೇಂದ್ರದ ಉಪ ನಿರ್ದೇಶಕಿ ಕೆ.ಎಲ್.ಶಿವಾನಿ ಹೇಳಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿಭಾಗಗಳಿಗೆ ನೂತನವಾಗಿ ಪ್ರವೇಶಾತಿ ಪಡೆದಿರುವ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸಂಶೋಧನೆಯ ಕುರಿತು ನಾವೀನ್ಯ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ. ಇದರಿಂದ ಪ್ರಸ್ತುತತೆಯ ಆಧಾರಿತ ಕಲಿಕೆಗೆ ಅನುಕೂಲವಾಗಲಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲವೇ ವಿಭಾಗಗಳಿಂದ ಭವಿಷ್ಯ ಎಂಬ ಭ್ರಮೆ ಬೇಡ. ಎಲ್ಲಾ ವಿಭಾಗಗಳು ತಮ್ಮದೇ ಅದ್ಭುತ ಅವಕಾಶಗಳನ್ನು ಹಿಡಿದಿಟ್ಟಿದೆ.

ಜೆಎನ್ಎನ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಅನೇಕ ಅವಿಸ್ಮರಣೀಯ ಅನುಭವಗಳನ್ನು ಪಡೆದಿದ್ದೇನೆ. ವಿದ್ಯಾರ್ಥಿ ಜೀವನವೆಂಬುದು ಬದುಕಿನ ಅಮೂಲ್ಯ ಕ್ಷಣ. ನೀವು ನೀವಾಗಿರಲು ಸದಾ ಪ್ರಯತ್ನಿಸಿ. ನಮ್ಮಲ್ಲಿರುವ ಬಲ ಮತ್ತು ದುರ್ಬಲತೆಯನ್ನು ಮುಕ್ತವಾಗಿ ಸ್ವೀಕರಿಸಿ. ಇದರಿಂದ ಪ್ರಸ್ತುತತೆಯ ಅವಶ್ಯಕತೆಗಳಿಗೆ ತಕ್ಕಂತೆ ಬದುಕಿನಲ್ಲಿ ಸಧೃಡತೆಯಿಂದ ರೂಪಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ ಕಳೆದ ಎಪ್ಪತ್ತೈದು ವರ್ಷಗಳಿಂದ ಎನ್ಇಎಸ್ ಸಂಸ್ಥೆಯು ಯಾವುದೇ ಲಾಭಾಂಶದ ಹಂಬಲವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಮಾನವ ಸಂಪನ್ಮೂಲಕ್ಕಿಂತ ಮಾನವ ಸಂಬಂಧಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಅಂಕದ ಹಿಂದೆ ಓಡದೆ ಮೌಲ್ಯದ ಹಿಂದೆ ಓಡಬೇಕಿದೆ. ಹಾಗಾಗಿಯೇ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಸೃಜನಶೀಲ, ಸಾಹಿತ್ಯಾತ್ಮಕ, ಸಂಸ್ಕಾರಯುತ ಚಿಂತನೆಗಳಿಗೆ ಯುವ ಸಮೂಹ ಒಗ್ಗಿಕೊಳ್ಳಬೇಕಿದೆ. ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವ ಪ್ರಜೆಗಳಾಗಿ ಹೊರಹೊಮ್ಮಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಕಾಲೇಜಿನ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಳೆದ ವರ್ಷ ಸುಮಾರು 8 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಲಾಗಿದೆ. ಆದ್ಯತೆಯು ಸ್ಪಷ್ಟವಾಗಿದ್ದಲಿ ಕಲಿಕೆಯಲ್ಲಿ ಗೊಂದಲವಿರುವುದಿಲ್ಲ, ಅಂತೆಯೇ ಜ್ಞಾನಾರ್ಜನೆಯ ಆದ್ಯತೆಯಲ್ಲಿ ವೃತ್ತಿ ಪರ ಶಿಕ್ಷಣ ನಿಮ್ಮದಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಮಧುರಾವ್, ಸುಧೀರ್, ಅನಂತದತ್ತ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಪ್ರಾಂಶುಪಾಲರಾದ ಡಾ‌.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ‌.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ವರದಿ ಪ್ರಜಾಶಕ್ತಿ…