ಶಿವಮೊಗ್ಗ: ಪ್ರವಾಸೋದ್ಯಮ ಕ್ಷೇತ್ರ ಹಾಗೂ ಸಾಹಸಿ ಕ್ರೀಡೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶಗಳಿದ್ದು, ಅಗತ್ಯ ರೀತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪರಿಚಯಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಜ್ರ ಮಹೋತ್ಸವ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ, ಶಿವಮೊಗ್ಗ ಬೈಕ್ ಕ್ಲಬ್, ನಮ್ಮ ಕನಸಿನ ಶಿವಮೊಗ್ಗ, ಶಿವಮೊಗ್ಗ ಪ್ರವಾಸೋದ್ಯಮ ವೇದಿಕೆ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಬೈಕ್ ರ‍್ಯಾಲಿ ಹಾಗೂ ಸುರಕ್ಷತೆ ಪ್ರಯಾಣದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದ ದಿನಗಳಲ್ಲಿ ನನಗೂ ಸಾಹಸಿ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಸಿ ಕ್ರೀಡೆಗಳಿಗೆ ಇರುವ ಅವಕಾಶಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಎಲ್ಲರೂ ಒಟ್ಟುಗೂಡಿ ಕಾರ್ಯಗತಗೊಳಿಸಬೇಕು. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಕ್ಕೆ ಹೆಚ್ಚಿನ ಅವಕಾಶ ಸಿಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ನಮ್ಮ ಸಂಘವು ವಜ್ರ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿ ಇದ್ದು, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆದಿದೆ. ಮೊದಲ ಕಾರ್ಯಕ್ರಮವಾಗಿ ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಬೈಕ್ ರ‍್ಯಾಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಬೈಕ್ ರ‍್ಯಾಲಿಯು ನೇಪಾಳದಿಂದ ಶಿವಮೊಗ್ಗದವರೆಗೂ ನಡೆಯಲಿದ್ದು, ಬೈಕ್ ಪ್ರವಾಸದ ಸಂದರ್ಭದಲ್ಲಿ ವಿವಿಧ ಆಯ್ದ ಪ್ರದೇಶಗಳಲ್ಲಿ “ ಈ ಬಾರಿ ಶಿವಮೊಗ್ಗ “ ವಿಷಯ ಕುರಿತು ಪ್ರಚಾರ ನಡೆಸಲಿದ್ದು, ವಿವಿಧ ರಾಜ್ಯಗಳ ಜನರಿಗೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡುವ ಜತೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರದೀಪ್ ಎಲಿ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನೇಪಾಳದಿಂದ ಶಿವಮೊಗ್ಗದವರೆಗೂ ಬೈಕ್ ಪ್ರವಾಸ ಆಯೋಜಿಸಿದ್ದು, ನೇಪಾಳದಿಂದ ಆರಂಭಗೊಂಡು ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಸಾಗಲಿದೆ. ಅಂದಾಜು 4000 ಕೀಮಿ ಪ್ರಯಾಣ ಆಗಲಿದೆ. 11 ಜನರು ಬೈಕ್ ಸಾಹಸಿಗಳು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಶಿವಮೊಗ್ಗ ಪ್ರವಾಸೋದ್ಯಮ ವೇದಿಕೆ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಬಿ.ಗೋಪಿನಾಥ್, ಜಿ.ವಿಜಯ್‌ಕುಮಾರ್, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ವಸಂತ ಹೋಬಳಿದಾರ್, ರಮೇಶ್ ಹೆಗ್ಡೆ, ಪರಮೇಶ್ವರ್, ಎಸ್.ಎಸ್.ವಾಗೀಶ್, ಮರಿಸ್ವಾಮಿ, ಅನಾ ವಿಜಯೇಂದ್ರ, ಗಣೇಶ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…