ಬೈಂದೂರು: ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಭಾನುವಾರ ತಾಲ್ಲೂಕಿನ ಶಂಕರನಾರಾಯಣದ ಬೆದ್ರಕಟ್ಟೆಯ ಜನತಾ ಕಾಲೋನಿಗೆ ಭೇಟಿ ನೀಡಿ ಕೊರಗ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ಕಾಲೋನಿಯಲ್ಲಿ 70 ಕ್ಕೂ ಹೆಚ್ಚು ಕುಟುಂಬಗಳು ಬದುಕು ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿವೆ. ಈ ಭಾಗದ ಜನರಿಗೆ ಪ್ರಮುಖ ಸಮಸ್ಯೆಯಾದ ಮನೆ ನಿರ್ಮಾಣಕ್ಕೆ ಭೂಮಿಯ ಸಮಸ್ಯೆ ತೀರದ ದಾಹದಂತಿದೆ. ಅದೇ ರೀತಿ, ಕುಡಿಯುವ ನೀರು, ರಸ್ತೆ, ಭೂ- ಹಕ್ಕು ಪತ್ರ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ತಲೆ ದೂರಿವೆ. ಆದರೆ, ಇಲ್ಲಿಯವರೆಗೆ, ಯಾವುದೇ ಸಂಸದರು ಈ ಕಾಲೂನಿಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು‌.

ಈ ಭಾಗದಲ್ಲಿ ಹೆಚ್ಚಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಬುಟ್ಟಿ ನೇಕಾರರು, ಚೆಂಡೆ ವಾದ್ಯ ವಾದಕರು ಸೇರಿ ಇನ್ನಿತರ ಕುಲಕಸುಬು ನಂಬಿಕೊಂಡು ಬದುಕ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆ ಯಾವುದೇ, ರೀತಿಯ ಮಕ್ಕಳ ಉದ್ಯೋಗ, ವಿದ್ಯಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿಲ್ಲ. ಆದ್ದರಿಂದ, ಈ ಭಾಗದ ಜನರಿಗೆ ಸಮರ್ಪಕವಾದ ಸೌಲಭ್ಯ ಕಲ್ಪಿಸಿಕೊಡುವಂತೆ ಕಾಲೋನಿಯ ಜನರು ಮನವಿ ಮಾಡಿದರು.

ಇದಕ್ಕೆ, ಪ್ರತಿಕ್ರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಮುಂದಿನ ದಿನದಲ್ಲಿ ಸಮಾಜದೊಂದಿಗೆ ಇರುವುದಾಗಿ ಭರವಸೆ ನೀಡಿದರು.

ಇದೇ ವೇಳೆ, ಕಲೋನಿಯ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರೂಪ ಅಕ್ಷಯ್ ಅವರ ಗೃಹ ಪ್ರವೇಶಕ್ಕೆ ಭೇಟಿ ನೀಡಿದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಪಂಚಾಯಿತಿ ಸದಸ್ಯ ಗುರುದತ್ ಷೇಟ್, ಸಂಕೇತ್ ಶೆಟ್ಟಿ, ಕೃಷ್ಣ ನಾಯ್ಕ್, ರಾಮಚಂದ್ರ ದೇವಾಡಿಗ, ಎ.ಪಿ ಶೆಟ್ಟಿ, ಬಿ.ಕೆ.ಶ್ರೀನಿವಾಸ, ಜಿ.ಎಸ್.ಹರಿಪ್ರಸಾದ್ ಆಚಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಪಿಗೇಡಿ ಸಂಜೀವ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ ಸೇರಿ ಅನೇಕ ಕಾರ್ಯಕರ್ತರು ಇದ್ದರು.

ಗೋಡಂಬಿ (ಗೇರು ಬೀಜ) ಕಾರ್ಖಾನೆಗೆ ಗೀತಾ ಶಿವರಾಜಕುಮಾರ ಭೇಟಿ…

ತಾಲ್ಲೂಕಿನ ಉಳ್ಳೂರು ಕನಕಾನಂದ ಬ್ರಾಂಡ್ ಕ್ಯಾಶ್ಯೂಸ್ (ಗೋಡಂಬಿ ಉತ್ಪನ್ನ) ಕಾರ್ಖಾನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಕಾರ್ಖಾನೆಯ ಸಿಬ್ಬಂದಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಗೀತಾ ಅವರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು‌ ಎಂದು ಕಾರ್ಖಾನೆಯ ಸಿಬ್ಬಂದಿಗಳಿಗೆ ಶಕ್ತಿ ತುಂಬಿದರು.

ಗೀತಾಗೆ ಬಡವ ಬಗ್ಗೆ ಕಾಳಜಿ ಹೆಚ್ಚಿದೆ. ಆದ್ದರಿಂದ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಕೇಂದ್ರ ಹಾಗೂ ರಾಜ್ಯದ ಹಂತದ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಗೀತಾ ಒತ್ತು ನೀಡುವರು- ಶಿವರಾಜಕುಮಾರ, ನಟ

ವರದಿ ಪ್ರಜಾ ಶಕ್ತಿ