ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಹೊನ್ನಾಳಿ ರಸ್ತೆ, ಮಲ್ಲಿಕಾರ್ಜುನ ನಗರದ ಎಂ.ಕೆ. ದಿವಾಕರ್ ಎಂಬುವವರು ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ನ ಟರ್ನ್ ಕೀ ಹಾಲಿಡೇಸ್ ಪ್ರವಾಸಿ ಸಂಸ್ಥೆಯ ವಿರುದ್ಧ ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ವಕೀಲರ ಮೂಲಕ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಎದುರುದಾರರಿಗೆ ಆದೇಶಿಸಿ ತೀರ್ಪು ನೀಡಿದೆ.


ದೂರುದಾರರು ಎದುರುದಾರರಲ್ಲಿ ಜಪಾನ್ ಮತ್ತು ಸೌತ್ ಕೋರಿಯ ದೇಶಗಳಿಗೆ 10 ದಿನಗಳ ಪ್ರವಾಸಕ್ಕಾಗಿ ನೋಂದಣಿ ಮಾಡಿಸಿದ್ದು, ಏಪ್ರಿಲ್ 2025ರಲ್ಲಿ ಪ್ರವಾಸ ನಿಗಧಿಯಾಗಿದ್ದು ಪ್ರವಾಸದ ಮೊತ್ತ 4,09,865/- ಗಳನ್ನು ಹಂತ ಹಂತವಾಗಿ ಪಾವತಿಸಿರುತ್ತಾರೆ. ಮಾರ್ಚ್-2025ರಲ್ಲಿ ದೂರದಾರರಿಗೆ ಅಫಘಾತವಾಗಿದ್ದು ಕಾಲು ಮುರಿದುಹೋಗಿದ್ದು, ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸಲಹೆ ನೀಡಿದ್ದರಿಂದ ಪ್ರವಾಸ ಹೋಗಲು ಸಾಧ್ಯವಾಗದೆ ರದ್ದು ಮಾಡಿ, ಪಾವತಿಸಿದ ಹಣವನ್ನು ವಾಪಸು ಮಾಡಲು ಕೋರಿ ಪತ್ರ ಬರೆದಿರುತ್ತಾರೆ.

ಸಂಸ್ಥೆಯು ವಿವಿಧ ಸಂಸ್ಥೆಗಳಿಂದ ಪಡೆದಿರುವ ರೀಫಂಡ್ ಮೊತ್ತ ರೂ. 2,52,000/-ಗಳನ್ನು ಜುಲೈ 2025ರೊಳಗೆ ಇದೇ ತೆರನಾದ ಯಾವುದಾದರೂ ಪ್ರವಾಸಕ್ಕೆ ಬಂದಲ್ಲಿ ಹೊಂದಾಣಿಕೆ ಮಾಡುವುದಾಗಿ ತಿಳಿಸಿರುತ್ತಾರೆ. ಆದರೆ ದೂರದಾರರು ಮೊತ್ತವನ್ನು ವಾಪಾಸ್ಸು ನೀಡಲು ಲೀಗಲ್ ನೋಟೀಸ್ ನೀಡಿದ್ದು, ಅದಕ್ಕೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.

ಆಯೋಗವು ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ ತಮ್ಮ ವಕೀಲರ ಮೂಲಕ ಹಾಜರಾಗಿದ್ದು, ಎರಡೂ ಪಕ್ಷಗಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದ ವಿವಾದವನ್ನು ಆಲಿಸಿ, ಎದುರುದಾರರು ದೂರದಾರರ ಪ್ರವಾಸಕ್ಕೆ ನೀಡಿದ ಮೊತ್ತವನ್ನು ಹಿಂತಿರುಗಿಸದೆ ಬೇರೆ ಪ್ರವಾಸಕ್ಕೆ ಹೊಂದಾಣಿಕೆ ಮಾಡುತ್ತೇವೆ ಎಂಬುದು ಸಹಾ ಸೇವಾನ್ಯೂನ್ಯತೆಯಾಗುತ್ತದೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿದೆ.

ಎದುರುದಾರರು ದೂರುದಾರರಿಗೆ ನೀಡಬೇಕಾಗಿದ್ದ ರೂ.2.52 ಲಕ್ಷಗಳಿಗೆ ದಿ: 28/05/2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8ರ ಬಡ್ಡಿಯನ್ನು ಸೇರಿಸಿ, ಈ ಆದೇಶವಾದ 45 ದಿನಗಳೊಳಗೆ ಪಾವತಿಸುವುದು ಹಾಗೂ ರೂ. 10,000/- ಗಳನ್ನು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 10ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ.18 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.