ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಹೊನ್ನಾಳಿ ರಸ್ತೆ, ಮಲ್ಲಿಕಾರ್ಜುನ ನಗರದ ಎಂ.ಕೆ. ದಿವಾಕರ್ ಎಂಬುವವರು ಬೆಂಗಳೂರು ಮಹಾಲಕ್ಷ್ಮೀ ಲೇಔಟ್ನ ಟರ್ನ್ ಕೀ ಹಾಲಿಡೇಸ್ ಪ್ರವಾಸಿ ಸಂಸ್ಥೆಯ ವಿರುದ್ಧ ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ವಕೀಲರ ಮೂಲಕ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಎದುರುದಾರರಿಗೆ ಆದೇಶಿಸಿ ತೀರ್ಪು ನೀಡಿದೆ.
ದೂರುದಾರರು ಎದುರುದಾರರಲ್ಲಿ ಜಪಾನ್ ಮತ್ತು ಸೌತ್ ಕೋರಿಯ ದೇಶಗಳಿಗೆ 10 ದಿನಗಳ ಪ್ರವಾಸಕ್ಕಾಗಿ ನೋಂದಣಿ ಮಾಡಿಸಿದ್ದು, ಏಪ್ರಿಲ್ 2025ರಲ್ಲಿ ಪ್ರವಾಸ ನಿಗಧಿಯಾಗಿದ್ದು ಪ್ರವಾಸದ ಮೊತ್ತ 4,09,865/- ಗಳನ್ನು ಹಂತ ಹಂತವಾಗಿ ಪಾವತಿಸಿರುತ್ತಾರೆ. ಮಾರ್ಚ್-2025ರಲ್ಲಿ ದೂರದಾರರಿಗೆ ಅಫಘಾತವಾಗಿದ್ದು ಕಾಲು ಮುರಿದುಹೋಗಿದ್ದು, ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸಲಹೆ ನೀಡಿದ್ದರಿಂದ ಪ್ರವಾಸ ಹೋಗಲು ಸಾಧ್ಯವಾಗದೆ ರದ್ದು ಮಾಡಿ, ಪಾವತಿಸಿದ ಹಣವನ್ನು ವಾಪಸು ಮಾಡಲು ಕೋರಿ ಪತ್ರ ಬರೆದಿರುತ್ತಾರೆ.
ಸಂಸ್ಥೆಯು ವಿವಿಧ ಸಂಸ್ಥೆಗಳಿಂದ ಪಡೆದಿರುವ ರೀಫಂಡ್ ಮೊತ್ತ ರೂ. 2,52,000/-ಗಳನ್ನು ಜುಲೈ 2025ರೊಳಗೆ ಇದೇ ತೆರನಾದ ಯಾವುದಾದರೂ ಪ್ರವಾಸಕ್ಕೆ ಬಂದಲ್ಲಿ ಹೊಂದಾಣಿಕೆ ಮಾಡುವುದಾಗಿ ತಿಳಿಸಿರುತ್ತಾರೆ. ಆದರೆ ದೂರದಾರರು ಮೊತ್ತವನ್ನು ವಾಪಾಸ್ಸು ನೀಡಲು ಲೀಗಲ್ ನೋಟೀಸ್ ನೀಡಿದ್ದು, ಅದಕ್ಕೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.