ಮಂಜುನಾಥ ಶೆಟ್ಟಿ…

ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ಸಾಗಾಟವಾಗುತ್ತಿದ್ದ ಅಡಿಕೆ ಲಾರಿಗಳನ್ನು ತಡೆದು ಪರಿಶೀಲನೆ ನಡೆಸುತ್ತಿರುವುದರಿಂದ ರಾಜ್ಯದ ಅಡಿಕೆ ಮಾರುಕಟ್ಟೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಿಸುತ್ತಿರುವ ಲಾರಿಗಳನ್ನು ಅನಗತ್ಯವಾಗಿ ತಡೆಹಿಡಿಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವುದು ಮಹಾಮಂಡಳದ ಪ್ರಮುಖ ಉದ್ದೇಶವಾಗಿದ್ದು, ಅಡಿಕೆಗೆ ಸಂಬಂಧಿಸಿದಂತೆ ಎದುರಾಗುವ ಪ್ರತಿಯೊಂದು ಕಾನೂನು, ಆಡಳಿತಾತ್ಮಕ ಹಾಗೂ ಮಾರುಕಟ್ಟೆ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಡಿಕೆಗೆ ರಕ್ಷಾ ಕವಚವಾಗಿ ಮಹಾಮಂಡಳ ಕೆಲಸ ಮಾಡುತ್ತಿದೆ…

ಅಡಿಕೆಗೆ ಉತ್ತಮ ಬೆಲೆ ದೊರಕುವ ಸಂದರ್ಭದಲ್ಲೇ ವಿವಿಧ ರೀತಿಯ ಅಡೆತಡೆಗಳು ಎದುರಾಗುವುದು ಹೊಸದೇನಲ್ಲ. ಎರಡು-ಮೂರು ವರ್ಷಕ್ಕೊಮ್ಮೆ ಇಂತಹ ಸಮಸ್ಯೆಗಳು ಮರುಕಳಿಸುತ್ತವೆ. ಈ ಹಿನ್ನೆಲೆಯಲ್ಲಿ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ಅಡಿಕೆ ಬೆಳೆಗಾರರಿಗೆ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಆರೋಪಿಸಿ ನಡೆಯುತ್ತಿರುವ ಸುಪ್ರೀಂ ಕೋರ್ಟ್ ಪ್ರಕರಣದಿಂದ ಹಿಡಿದು, ಅಡಿಕೆ ವ್ಯಾಪಾರಕ್ಕೆ ಅಡ್ಡಿಯಾಗುವ ಎಲ್ಲ ರೀತಿಯ ಕಾನೂನು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಲು ಮಹಾಮಂಡಳ ನಿರಂತರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಅಡಿಕೆ ಬೆಲೆಯಿಂದ ಗ್ರಾಮೀಣ ಆರ್ಥಿಕತೆಗೆ ಹೊಸ ಜೀವ…


ಕಳೆದ ಕೆಲವು ವರ್ಷಗಳಿಂದ ಅಡಿಕೆಗೆ ಉತ್ತಮ ಬೆಲೆ ದೊರೆತ ಪರಿಣಾಮ ಸುಮಾರು ಹತ್ತು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ರೈತರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಮನೆ, ಶಿಕ್ಷಣ, ಕೃಷಿ ಹಾಗೂ ಜೀವನಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಅಡಿಕೆ ಬೆಲೆಯಲ್ಲಿ ಏರುಪೇರು ಅಥವಾ ಮಾರುಕಟ್ಟೆ ಅಸ್ಥಿರತೆ ಉಂಟಾದಾಗ ರೈತರು ಆತಂಕಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಹಾಮಂಡಳ ರೈತರ ಪರವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ಸಾಗುತ್ತಿದ್ದ ಅಡಿಕೆ ಲಾರಿಗಳನ್ನು ವಿವಿಧ ಕಾರಣಗಳನ್ನು ನೀಡಿ ತಡೆದು, ವಾರಗಳ ಕಾಲ ಪರಿಶೀಲನೆ ನಡೆಸಲಾಗುತ್ತಿತ್ತು. ಇದರಿಂದ ಸಾರಿಗೆ ಸಂಸ್ಥೆಗಳು ಅಡಿಕೆ ಸಾಗಿಸಲು ಹಿಂದೇಟು ಹಾಕಿದ ಪರಿಣಾಮ ರಾಜ್ಯದ ಮಾರುಕಟ್ಟೆಗಳಲ್ಲಿ ಸಾವಿರಾರು ಟನ್ ಅಡಿಕೆ ಮಾರಾಟವಾಗದೆ ಉಳಿದಿತ್ತು. ರೈತರು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು ಎಂದು ಅವರು ವಿವರಿಸಿದರು.

ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಮಹತ್ವದ ಸಭೆ…


ಈ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿಯ ಗೃಹ ಕಚೇರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ವಿಶೇಷ ಸಭೆ ನಡೆಸಲಾಯಿತು ಎಂದು ಆರಗ ಜ್ಞಾನೇಂದ್ರ ಹೇಳಿದರು.ಸಭೆಯಲ್ಲಿ ಕರ್ನಾಟಕದ ಅಡಿಕೆ ಬೆಳೆಗಾರರ ಸಂಖ್ಯೆ, ಅಡಿಕೆ ಬೆಳೆಯ ವಿಸ್ತೀರ್ಣ, ದೇಶದ ಆರ್ಥಿಕತೆಗೆ ಅಡಿಕೆ ಉದ್ಯಮ ನೀಡುತ್ತಿರುವ ಜಿಎಸ್‌ಟಿ ಕೊಡುಗೆ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ತಪಾಸಣೆಯಿಂದ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಮಹಾರಾಷ್ಟ್ರದಲ್ಲಿ ಅನ್‌ಲೋಡ್ ಆಗದ ಲಾರಿಗಳನ್ನು ತಡೆಯಬೇಡಿ…

ಕರ್ನಾಟಕದಿಂದ ಹೊರಡುವ ಬಹುತೇಕ ಅಡಿಕೆ ಲಾರಿಗಳು ದೆಹಲಿ, ಗುಜರಾತ್, ಲಖನೌ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತೆರಳುತ್ತವೆ. ಅವು ಮಹಾರಾಷ್ಟ್ರದಲ್ಲಿ ಮಾರಾಟವಾಗುವುದಿಲ್ಲ ಅಥವಾ ಅನ್‌ಲೋಡ್ ಆಗುವುದಿಲ್ಲ. ಹೀಗಿರುವಾಗ ಮಹಾರಾಷ್ಟ್ರದ ಕೆಲ ಅಧಿಕಾರಿಗಳು ಅನಗತ್ಯವಾಗಿ ಲಾರಿಗಳನ್ನು ತಡೆದು ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ವಿಷಯವನ್ನು ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಯಿತು ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದಲ್ಲಿ ಅನ್‌ಲೋಡ್ ಆಗದ ಹಾಗೂ ಅಲ್ಲಿನ ಮಾರುಕಟ್ಟೆಗೆ ಸಂಬಂಧಿಸದ ಅಡಿಕೆ ಲಾರಿಗಳನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ತಡೆಹಿಡಿದ ಲಾರಿಗಳಿಗೂ ಪರಿಹಾರ
ಪ್ರಸ್ತುತ ವಿವಿಧ ಹಂತಗಳಲ್ಲಿ ತಡೆಹಿಡಿಯಲಾಗಿರುವ ಅಡಿಕೆ ಲಾರಿಗಳ ಕುರಿತು ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ. ಈಗಾಗಲೇ ಎಫ್‌ಐಆರ್ ದಾಖಲಿಸಿ ನ್ಯಾಯಾಲಯದ ವ್ಯಾಪ್ತಿಗೆ ಹೋಗಿರುವ ಪ್ರಕರಣಗಳಲ್ಲೂ ಕಾನೂನುಬದ್ಧವಾಗಿ ಲಾರಿಗಳನ್ನು ಬಿಡುಗಡೆ ಮಾಡಿಸಲು ಅಗತ್ಯ ಸಹಕಾರ ನೀಡುವಂತೆ ಮಹಾರಾಷ್ಟ್ರ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಮುಂದೆ ಯಾವುದೇ ಅಡಿಕೆ ಲಾರಿಗೆ ಸಮಸ್ಯೆ ಎದುರಾದರೆ ಹಿರಿಯ ಐಎಎಸ್ ಅಧಿಕಾರಿ ಲೋಕೇಶ್ ಚಂದ್ರ ಅವರನ್ನು ಸಂಪರ್ಕಿಸುವಂತೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದ್ದು, ರೈತರು ಹಾಗೂ ವ್ಯಾಪಾರಿಗಳಿಗೆ ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಲಾಗಿದೆ ಎಂದರು.

ಮಹಾಮಂಡಳದ ಪ್ರಯತ್ನಕ್ಕೆ ಫಲ…


ಬಹಳ ದಿನಗಳಿಂದ ಅಡಿಕೆ ಬೆಳೆಗಾರರಲ್ಲಿ ಮನೆಮಾಡಿದ್ದ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಹೆಜ್ಜೆಯಾಗಿದೆ. ಈ ಸಭೆಯನ್ನು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ಆಯೋಜಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

Leave a Reply

Your email address will not be published. Required fields are marked *