ಮಂಜುನಾಥ ಶೆಟ್ಟಿ…
ಶಿವಮೊಗ್ಗ : ಕಿಡ್ನಿ ಎಂಬುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಎಂ. ಶ್ರೀಕಾಂತ್ ಹೇಳಿದರು.
ಶಿವಮೊಗ್ಗದ ದುರ್ಗಿಗುಡಿ ತೃಪ್ತಿ ಹೆಲ್ತ್ ಕೇರ್ ನಲ್ಲಿ ಎಂ. ಶ್ರೀಕಾಂತಣ್ಣ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಮೂತ್ರಕೋಶ ಮತ್ತು ಮೂತ್ರಪಿಂಡ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ತಮ್ಮ ದಿನನಿತ್ಯದ ಕೆಲಸದ ಜೊತೆಗೆ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆಯೂ ನಿಗಾ ವಹಿಸಬೇಕೆಂದು ಹೇಳಿದರು. ಕಿಡ್ನಿ ಮತ್ತು ಮೂತ್ರಕೋಶದ ಬಗ್ಗೆ ಬಹಳಷ್ಟು ಜನರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ವೈದ್ಯರು ಸಿಗುವುದೇ ಬಹಳ ಅಪರೂಪ. ಸಾವಿರಾರು ರೂ. ವೆಚ್ಚ ತಗಲುವ ಪರೀಕ್ಷೆಗಳನ್ನು ಉಚಿತವಾಗಿ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಇಂತಹವರು ಸಾರ್ವಜನಿಕರ ಮಧ್ಯೆ ಇರಬೇಕೆಂದು ಆಶಿಸಿದರು.
ಈ ವೇಳೆ ನೂರಾರು ಜನ ಸಾರ್ವಜನಿಕರು ಶಿಬಿರದ ಲಾಭ ಪಡೆದರು.
ಈ ಸಂದರ್ಭದಲ್ಲಿ ಮೂತ್ರಕೋಶ ಹಾಗೂ ಮೂತ್ರಪಿಂಡ ತಜ್ಞ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಅಂಶಗಳನ್ನು ವಿವರಿಸಿದರು. ಹೆಚ್ಚು ನೀರು ಕುಡಿಯುತ್ತಿದ್ದರೆ, ಕಿಡ್ನಿ ಸಮಸ್ಯೆಗಳಿಂದ ದೂರವಿರಬಹುದೆಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್(ದನಿ), ಪತ್ರಕರ್ತರಾದ ಗಾ.ರಾ. ಶ್ರೀನಿವಾಸ್, ಗೋ.ವ. ಮೋಹನಕೃಷ್ಣ, ಮೆಸ್ಕಾಂ ವಾಣಿಜ್ಯ ಮತ್ತು ಕೈಗಾರಿಕಾ ಸಲಹಾ ಸಮಿತಿ ಸದಸ್ಯ ರಘು ಗೌಡ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಂಗೆಗೌಡ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಗ್ಯಾರಂಟಿ ಯೋಜನೆ ಸದಸ್ಯ ಬಸವರಾಜ್, ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ಸೇರಿದಂತೆ ಹಲವರಿದ್ದರು.