ಮಂಜುನಾಥ ಶೆಟ್ಟಿ…
ಶಿವಮೊಗ್ಗ : ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಈಜುಪಟು ಶಶಿಕುಮಾರ್ ಅವರನ್ನು ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಫ್ರೆಂಡ್ಸ್ ಸೆಂಟರ್ ಸದಸ್ಯರಿಗಾಗಿ ಆಯೋಜಿಸಿದ್ದ ದೇಶಭಕ್ತಿ ಗೀತಾ ಸರಮಾಲೆ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರ್, ನೀರಿನ ಅಲೆಯನ್ನು ಮೀರಿ ನೀವು ಸಾಧಿಸಿರುವ ಈ ವಿಜಯ ಅಪೂರ್ವ. ನಿಮ್ಮ ನಿರಂತರ ಅಭ್ಯಾಸ, ಬೆವರು ಮತ್ತು ಸಮರ್ಪಣಾ ಭಾವಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನೀರಿನ ಅಡೆತಡೆಗಳನ್ನು ಮೆಟ್ಟಿ ನಿಂತು ತೋರಿದ ನಿಮ್ಮ ಪ್ರತಿಭೆ ಅನನ್ಯ. ಯುವ ಪೀಳಿಗೆಗೆ ನೀವು ಮಾದರಿ ಕ್ರೀಡಾಪಟು. ನಿಮ್ಮ ಕಠಿಣ ಪರಿಶ್ರಮ ಮತ್ತು ಛಲ ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ಗೆದ್ದು ದೇಶ ಮತ್ತು ನಾಡಿಗೆ ಕೀರ್ತಿ ತರಬೇಕು. ನಿಮ್ಮ ಸಾಧನೆ ಇಲ್ಲಿಗೇ ನಿಲ್ಲದೆ ಒಲಿಂಪಿಕ್ಸ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಧ್ವಜ ಹಾರಿಸುವಂತಾಗಲಿ ಎಂದು ಹಾರೈಸಿದರು.
ಶಶಿಕುಮಾರ್ ಅವರು ನೇಪಾಳದಲ್ಲಿ ನಡೆದ ಎಸ್ಬಿಕೆಎಫ್ 7ನೇ ಅಂತರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅಲ್ಲದೆ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ವಿಶ್ವಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಮಾಸ್ಟರ್ಸ್ ಫೆಡರೇಶನ್ ಆಯೋಜಿಸಿದ್ದ ಅಖಿಲ ಭಾರತ ಮಾಸ್ಟರ್ಸ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನಲ್ಲಿ 30 ರಿಂದ 34 ವರ್ಷ ವಯೋಮಾನದ ವಿಭಾಗದ 50 ಮೀಟರ್ ಬಟರ್ಫ್ಲೈ ಹಾಗೂ 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಥಾಯ್ಲೆಂಡ್ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ವರ್ಲ್ಡ್ ಮಾಸ್ಟರ್ಸ್ ಕ್ರೀಡಾ ಚಾಂಪಿಯನ್ಶಿಪ್ನಲ್ಲಿ ಪುರುಷರ 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಾಗರಾಜ್ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಬಾಬು ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು. ರಂಜನಿ ದತ್ತಾತ್ರೇಯ ನಿರೂಪಿಸಿದರು.
ಈ ಸಂದರ್ಭದಲ್ಲಿ ಧನರಾಜ್, ಪಂಚಾಕ್ಷರಯ್ಯ ಹಿರೇಮಠ, ಲೋಕೇಶಪ್ಪ, ದತ್ತಾತ್ರೇಯ, ಮಹೇಶ್ವರಪ್ಪ, ಸುರೇಂದ್ರ ಕಾಸಲ್, ಗುರುನಾಥ್, ವೆಂಕಟೇಶಮೂರ್ತಿ, ಚಂದ್ರಶೇಖರ್, ಮನೋಹರ್, ರವಿ, ಅಣಜಿ ಬಸವರಾಜ್, ಮಹಿಳಾ ಅಧ್ಯಕ್ಷೆ ಸುನಿತಾ ಚೇತನ್, ಅನಿತಾ ಕಾಸಲ್, ವೀಣಾ ಹಾಗೂ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.