ಮಂಜುನಾಥ ಶೆಟ್ಟಿ…

ದೋಷಯುಕ್ತ ಮೊಬೈಲ್ ಫೋನ್ ಮಾರಾಟ ಮಾಡಿ ಸೇವಾ ನ್ಯೂನತೆ ಎಸಗಿದ ಮೊಬೈಲ್ ಕಂಪನಿ ಹಾಗೂ ಮಾರಾಟಗಾರರಿಗೆ ಗ್ರಾಹಕನಿಗೆ ಮೊಬೈಲ್‌ನ ಹಣವನ್ನು ಬಡ್ಡಿ ಸಮೇತ ಮರುಪಾವತಿಸಲು ಮತ್ತು ಒಟ್ಟು 15,000 ರೂ. ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ.


ಶಿವಮೊಗ್ಗದ ಗೋಪಾಳ ನಿವಾಸಿ ಶ್ರೀ ಮಂಜುನಾಥ ಜೆ.ವಿ. ಎಂಬುವವರು ನಗರದ ನೆಹರು ರಸ್ತೆಯಲ್ಲಿರುವ ‘ಫೀಲ್ಡ್ ಸೆಂಟರ್ ಆಂಡ್ ಎಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ 1,650 ರೂ. ಪಾವತಿಸಿ ‘ಐಟೆಲ್ ಪಿ 450’ ಮೊಬೈಲ್ ಖರೀದಿಸಿದ್ದರು. ಖರೀದಿಸಿದ ಒಂದು ತಿಂಗಳೊಳಗೆ ಮೊಬೈಲ್‌ನಲ್ಲಿ ದೋಷ ಕಂಡುಬಂದಿತ್ತು. ಮಾರಾಟಗಾರರು ಚಾರ್ಜರ್ ಬದಲಾಯಿಸಿಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಪದೇ ಪದೇ ಕೋರಿದರೂ ಹಾಗೂ 2026ರ ಫೆಬ್ರವರಿ 27ರಂದು ಪತ್ರ ಬರೆದು ಮನವಿ ಮಾಡಿದರೂ ಮೊಬೈಲ್ ಸರಿಪಡಿಸದೆ ನಿರ್ಲಕ್ಷ್ಯ ವಹಿಸಿದ್ದರು.


ಇದರಿಂದ ನೊಂದ ಗ್ರಾಹಕರು ಐಟೆಲ್ ಮೊಬೈಲ್ ಕಂಪನಿ ಹಾಗೂ ಸ್ಥಳೀಯ ಮಾರಾಟಗಾರರ ವಿರುದ್ಧ ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು ನೀಡಿದ ನೋಟಿಸ್ ಜಾರಿಯಾಗಿದ್ದರೂ ಎದುರುದಾರರು ಹಾಜರಾಗದ ಕಾರಣ ಏಕಪಕ್ಷೀಯ ವಿಚಾರಣೆ ನಡೆಸಲಾಯಿತು.
ದೂರುದಾರರ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಶ್ರೀ ಟಿ. ಶಿವಣ್ಣ ಹಾಗೂ ಸದಸ್ಯರಾದ ಶ್ರೀ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಸೇವಾ ನ್ಯೂನತೆಯನ್ನು ಎತ್ತಿಹಿಡಿದು ಈ ಕೆಳಗಿನಂತೆ ಆದೇಶಿಸಿದೆ.


ಮೊಬೈಲ್‌ನ ಮೂಲ ಬೆಲೆ 1,650 ರೂ. ಗಳನ್ನು ದಿನಾಂಕ 27/02/2026 ರಿಂದ ವಾರ್ಷಿಕ ಶೇ. 7ರ ಬಡ್ಡಿ ಸೇರಿಸಿ 45 ದಿನಗಳೊಳಗೆ ದೂರುದಾರರಿಗೆ ಮರುಪಾವತಿಸಬೇಕು (ತಪ್ಪಿದಲ್ಲಿ ಶೇ. 10ರ ಬಡ್ಡಿ ಅನ್ವಯ).
ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗಾಗಿ 5,000 ರೂ. ಪರಿಹಾರ ನೀಡಬೇಕು.
ದೂರಿನ ಖರ್ಚು-ವೆಚ್ಚವಾಗಿ 10,000 ರೂ. ನೀಡಬೇಕು.
ನಿಗದಿತ 45 ದಿನಗಳೊಳಗೆ ಈ ಪರಿಹಾರ ಮೊತ್ತವನ್ನು ಪಾವತಿಸದಿದ್ದರೆ ವಾರ್ಷಿಕ ಶೇ. 10ರ ಬಡ್ಡಿಯನ್ನು ಸೇರಿಸಿ ನೀಡತಕ್ಕದ್ದು.
ದೂರುದಾರರು ಆದೇಶವಾದ 45 ದಿನಗಳೊಳಗೆ ಮೊಬೈಲ್ ಫೋನ್‌ ಅನ್ನು ಎದುರುದಾರರಿಗೆ ಹಸ್ತಾಂತರಿಸಬೇಕು.

Leave a Reply

Your email address will not be published. Required fields are marked *