ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021ರ ರಾತ್ರಿ 10.30ರ ಸುಮಾರಿಗೆ ಕಲ್ಲು ಕೋರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಪೋಟಗೊಂಡು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಶಿವಮೊಗ್ಗ ಜಿಲ್ಲೆ ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಹ ಭೂಕಂಪದ ಅನುಭವವಾಗಿತ್ತು. ಘಟನೆ ನಡೆದ ಸ್ಥಳದ ಸುತ್ತ ಮುತ್ತಲಿನ ಗ್ರಾಮಗಳಾದ ಗೆಜ್ಜೆನಹಳ್ಳಿ ಹನುಮಂತನಗರ ಹುಣಸೋಡು ಅಬ್ಬಲಗೆರೆ ಮೋಜಪ ಹೊಸೂರು ಬಸವನಗಂಗುರು ಬೊಮ್ಮನಕಟ್ಟೆ ಕಲ್ಲು ಗಂಗೂರು ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಮನೆಗಳು ಗೋಡೆಗಳು ಬಿರುಕು ಬಿಟ್ಟಿದ್ದು ಕೆಲ ಮನೆಗಳ ಮೇಲ್ಛಾವಣಿ ಮತ್ತೆ ಕೆಲವು ಮನೆಗಳ ಟಿವಿ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾನಿಗೊಳಗಾಗಿದ್ದು ಅನೇಕ ಗ್ರಾಮಸ್ಥರ ಕಿವಿ ತಮಟೆ ಗಳು ಹಾಳಾಗಿದೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದ್ದು ಹಾನಿಗೊಳಗಾದ ಮನೆಗಳು ಸುಮಾರು 850 ಸಂತ್ರಸ್ತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿ 7-8 ತಿಂಗಳ ಕಳೆದರು ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಪರಿಹಾರ ನೀಡಿರುವುದಿಲ್ಲ.
ಸಂತ್ರಸ್ತರು ವೇದಿಕೆಯ ಸಹಾಯದೊಂದಿಗೆ ನಡೆಸಿದ ನಿರಂತರ ಹೋರಾಟದಿಂದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿದೆ ಪ್ರತಿ ಮನೆಗಳು ಕೇವಲ ಶೇಕಡ 10 ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದು ವರದಿ ಪ್ರಕಾರ ಶೇಕಡ 10 ರಷ್ಟು ಪರಿಹಾರವನ್ನು ಜಿಲ್ಲಾಡಳಿತ ನೀಡಿರುವುದಿಲ್ಲ. ಸ್ಪೋಟದಿಂದ ಬಿರುಕುಬಿಟ್ಟ ಹಲವಾರು ಮರಗಳ ಮಳೆಯಿಂದಾಗಿ ಸಂಪೂರ್ಣ ನೆಲಸಮವಾಗಿದೆ. ನವ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಸಂತ್ರಸ್ತರು ಆರೋಪಿಗಳ ಮೊಬೈಲ್ ಕರೆ ಆಧರಿಸಿ ತನಿಖೆ ನಡೆಸಲು ಜಿಲ್ಲಾ ರಕ್ಷಣಾಧಿಕಾರಿಗಳಿಗೂ ದೂರನ್ನು ಸಹ ನೀಡಿದ್ದೇವೆ.
ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸಿ ಬದುಕಿರುವ ಮತ್ತು ಮೃತ ರಾಗಿರುವ ಆರೋಪಿಗಳಿಂದ ಮೊಬೈಲ್ ಕರೆ ಆಧಾರಿಸಿ ತನಿಖೆ ನಡೆಸಿದರೆ ದೊಡ್ಡ ಪ್ರಮಾಣದ ಸ್ಪೋಟಕ್ಕೆ ಕಾರಣವಾದ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿ ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ