ಶಿವಮೊಗ್ಗ ನ್ಯೂಸ್…

ನಗರದ ಬೆಕ್ಕಿನ ಕಲ್ಮಠ ಆವರಣದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ  ಶಿಲಾ ಮಂಟಪ ಹಾಗೂ ಶಿವಾಲಯ ನಿರ್ಮಾಣ ಕಾರ್ಯಕ್ಕೆ ಅ.15ರಂದು  ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಲಾಗುವುದು ಎಂದು ಶ್ರೀ ಮಠದ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ವರ್ಷಗಳ ಹಿಂದೆ ಗುರುಬಸವ ಶ್ರೀಗಳು ಶ್ರೀ ಮಠವನ್ನು ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿಯೇ ಅವರು,  ಸಂಸ್ಕೃತ ಸಮಾವೇಶದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಮೌಢ್ಯಗಳ ವಿರುದ್ಧ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು ಎಂದರು. ಆನಂದಪುರದಲ್ಲಿರುವ ಮುರುಘಾಮಠದ ಆವರಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಉಚಿತ ವಿದ್ಯಾರ್ಥಿ ನಿಲಯವನ್ನು  ನಿರ್ಮಿಸಲಾಗ್ಠುತ್ತಿದೆ. ನಗರಕ್ಕೆ ಸಮೀಪದ ಮಲ್ಲಿಗೇನಹಳ್ಳಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಲಾಗುತ್ತಿದ್ದು, ಇದು ಮುಗಿಯುವ ಹಂತಕ್ಕೆ ತಲುಪಿದೆ. ಜನವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದರು.ನಗರದ ತುಂಗಾನದಿ ದಡದಲ್ಲಿ ಬೆಕ್ಕಿನ ಕಲ್ಮಠ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಶ್ರೀಮಠದಲ್ಲಿ ಗುರುಬಸವ ಶ್ರೀಗಳ ಶಿಲಾ ಮಂಟಪವನ್ನು ಸ್ಥಾಪನೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಲಾಗಿತ್ತು. ಸತತ ಎರಡು ವರ್ಷಗಳ ಕೋವಿಡ್  ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಇದೀಗ ಈ ಕಾರ್ಯ ಆರಂಭಗೊಳ್ಳಲಿದೆ ಎಂದರು.

ನಗರದ ನಾಗರೀಕರು ಆಧುನಿಕ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಶಿಲಾಮಂಟಪದ ಆವರಣದಲ್ಲಿ  ಧ್ಯಾನ ಹಾಗೂ ಮೌನ ವ್ರತಕ್ಕೆ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು ಎಂದ ಅವರು, ಇದರಿಂದ ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ ಹಾಗೂ ಸದೃಢತೆ ದೊರೆಯಲಿದೆ ಎಂದರು. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ  ಶಿಲಾ ಮಂಟಪವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾರ್ಕಳದ ಮಹೇಶ್ ಭಟ್ ಕಟ್ಟಡದ ಕಾರ್ಯನಿರ್ವಹಣೆ ಕೈಗೊಳ್ಳಲಿದ್ದಾರೆ ಎಂದರು. ಕತೃ ಗದ್ದುಗೆ ಹಾಗೂ ಶಿವಾಲಯ ಕಟ್ಟಡ ನಿರ್ಮಾಣ ಸಮಿತಿಯ ಮಹಾ ಪೋಷಕರಾಗಿ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪೋಷಕರಾಗಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಕಾರ್ಯ ನಿರ್ವಹಿಸಿದರೆ,  ಕಾರ್ಯಾಧ್ಯಕ್ಷರಾಗಿ  ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಅಧ್ಯಕ್ಷರಾಗಿ ಹೆಚ್.ವಿ. ಮಹೇಶ್ವರಪ್ಪ, ಉಪಾಧ್ಯಕ್ಷರಾಗಿ  ಎಸ್.ಎಸ್. ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ಸಿ.ಎಸ್. ಷಡಾಕ್ಷರಿ, ಗೋವಿಂದ ನಾಯರ್  ಕಾರ್ಯನಿರ್ವಹಿಸಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಎಂ.ಶ್ರೀಕಾಂತ್, ಅಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ, ಶ್ರೀಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್,  ಎಂ.ಆರ್. ಪ್ರಕಾಶ್ ಮೊದಲಾದವರಿದ್ದರು. ಬು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…