ಶಿವಮೊಗ್ಗ: ಅಗಸವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿಟ್ಟ ಜಾಗವನ್ನು ಅನಧಿಕೃತ ಬಡವಾಣೆಗಳಾಗಿ ಮಾಡಿಕೊಂಡು ಸಾರ್ವಜನಿಕರಿಗೆ ನಿವೇಶನ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ. ಕಿರಣ್ ಕುಮಾರ್ ಪವಾರ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಸವಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸರ್ವೇ ನಂ. 167ರಲ್ಲಿ ಸುಮಾರು 2033.30 ಎಕರೆ ಸರ್ಕಾರದ ಜಮೀನಿದೆ. ಈ ಜಮೀನನ್ನು ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿಡಲಾಗಿದೆ. ಇದನ್ನು ಯಾರಿಗೆ ಆಗಲಿ ಪರಭಾರೆ ಮಾಡಲು ಬರುವುದಿಲ್ಲ. ಆದರೆ ಕೆಲವು ದುಷ್ಕರ್ಮಿಗಳು ಸೇರಿಕೊಂಡು ಸರ್ಕಾರದ ಈ ಜಮೀನನ್ನು ಕಬಳಿಸಿ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ದೊಡ್ಡ ವಂಚನೆಯಾಗಿದೆ ಎಂದರು.

ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿಟ್ಟ ಮೇಲೆ ಅದನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬರುವುದಿಲ್ಲ. ಆದರೆ ಕೆಲವರು ಸರ್ಕಾರಕ್ಕೆ ವಂಚನೆ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗಾಗಲೇ ಮಾರಾಟ ಮಾಡಿರುವ ನಿವೇಶನಗಳನ್ನು ವಾಪಸ್ಸು ಪಡೆಯಬೇಕು ಮತ್ತು ಇಂತಹ ವಂಚಕರ ವಿರುದ್ಧ ಕ್ರಮ ತೆಗೆದುಕೊಳ್ಳ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ವಿ.ಅಶೋಕ್ಕುಲಮಾರ್, ಪ್ರಮುಖರಾದ ಅಬ್ದುಲ್ ಲತೀಫ್, ಹೆಚ್.ಎನ್.ಮಂಜುನಾಥ್, ಕೇಶವಮೂರ್ತಿ ಸೇರಿದಂತೆ ಹಲವರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…