ಭಾರತದಲ್ಲಿ ಹಲವಾರು ಪಂಥಗಳು, ಟೀಕೆ ಟಿಪ್ಪಣಿಗಳು, ಗೊಂದಲಗಳಿಂದ ಹಿಂದೂ ಸಮಾಜ ನಲುಗಿ ಹೋಗಿದ್ದ ಸಂದರ್ಭದಲ್ಲಿ ವೈದಿಕ ಸಂಪ್ರದಾಯಗಳನ್ನು ಗಟ್ಟಿಗೊಳಿಸಿದರು ಶಂಕರಾಚಾರ್ಯರು ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ, ಸಂಸಾರಿಗಳಿಗೆ ನಿಬಂಧನೆ ವಿಧಿಸದೆ ಸಾಮಾನ್ಯ ವ್ಯಕ್ತಿಗಳಿಗೆ ಸರಳವಾಗಿ ವೈದಿಕ ಸಂಪ್ರದಾಯವನ್ನು ತಿಳಿಯುವಂತೆ ಮಾಡಿದವರು ಶಂಕರಾಚಾರ್ಯರು. ವೈದಿಕ ಸಂಪ್ರದಾಯದಲ್ಲಿದ್ದ ದೋಷಗಳನ್ನು ತೊಡೆದು ಹಾಕಿದ ಬಗೆಯನ್ನು ನಾವುಗಳು ತಿಳಿಯಬೇಕು ಹಾಗೂ ಅವರು ಹಾಕಿ ಕೊಟ್ಟಂತಹ ಮಾರ್ಗದಲ್ಲಿ ನಡೆದರೆ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ, ಮಹನೀಯರ ಜಯಂತಿ ಆಚರಿಸುವ ಮೂಲಕ ಅವರ ದಾರ್ಶನಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಎಲ್ಲರಲ್ಲಿ ಸಾಮರಸ್ಯ ಬೆಳೆಸುವುದು ಜಯಂತಿಗಳ ಉದ್ದೇಶ ಎಂದರು.
ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ದತ್ತಾತ್ರಿ ಎಸ್ ಮಾತನಾಡಿ, ವೈದಿಕ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುವವರ ಮನೆಯಲ್ಲ್ಲಿ ಯಾವುದೇ ಲೋಭ ಮೋಹಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ಅವರು ಶ್ರಿ ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿ, ಶಂಕರಾಚಾರ್ಯರ ಜೀವನ ಮತ್ತು ವೇದ, ಸನಾತನ ಧರ್ಮದ ಪರಂಪರೆ, ಅವರು ಸ್ಥಾಪಿಸಿದ ಚಾತುರ್ ಪೀಠಗಳ ಬಗ್ಗೆ ಹಾಗೂ ತಾಯಿಯ ಒಡನಾಟ, ಸನ್ಯಾಸತ್ವ ,ಶಂಕರಾಚಾರ್ಯರ ಸಾಹಿತ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಪೌರರಾದ ಸುರೇಖಾ ಮುರಳೀಧರ್, ಪಾಲಿಕೆಯ ಸದಸ್ಯರಾದ ರೇಖಾ ರಂಗನಾಥ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಸಿ ನಟರಾಜ ಭಾಗವತ್, ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿಗಳಾದ ಪಿ. ನಾರಾಯಣ್, ಪದ್ಮನಾಭ್ ರಾಮಭಟ್ಟರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಉಮೇಶ್, ಸಮಾಜದ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…