ಶಿವಮೊಗ್ಗ: ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನೆಲ್ ಬಳಿ ನಿನ್ನೆ ರಾತ್ರಿ ವಿದ್ಯಾನಗರದಿಂದ ಸಾಗರದ ಕಡೆಗೆ ಹೊರಟಿದ್ದ ಕಾರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ 8 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಅತ್ಯಂತ ವೇಗವಾಗಿ ಬಂದ ಮಾರುತಿ ಬ್ರೇಜಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಎಮ್ಮೆಗಳಿಗೆ ಗುದ್ದಿದ್ದು, ಎಮ್ಮೆಗಳು ಸಾವು ಕಂಡಿವೆ. ಕಾರ್ ನಜ್ಜುಗುಜ್ಜಾಗಿದೆ. ಅಪಘಾತದ ವೇಳೆ ಕಾರ್ ಬಲೂನ್ ತೆರೆದುಕೊಂಡಿದ್ದರಿಂದ ಚಾಲಕ ಅಪಾಯದಿಂದ ಪಾರಾಗಿದ್ದು, ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರ್ ಗುದ್ದಿದ ರಭಸಕ್ಕೆ ರಸ್ತೆಯಲ್ಲೇ ಒದ್ದಾಡಿದ ಎಮ್ಮೆಗಳು ಪ್ರಾಣಬಿಟ್ಟಿವೆ. ಈ ಭೀಕರ ಅಪಘಾತದಲ್ಲಿ 3 ಕೋಣ, 5 ಎಮ್ಮೆಗಳು ಸಾವು ಕಂಡಿದ್ದು, ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಶಾಸಕ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲೀಕರಿಗೆ ಪರಿಹಾರದ ಭರವಸೆ ನೀಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…