ರಾಜ್ಯದ ಒಳನಾಡು ಹಾಗೂ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು 50ಲಕ್ಷ ರೂ.ಗಳ ಆರ್ಥಿಕ ನೆರವನ್ನು ಒದಗಿಸಲು ಉದ್ದೇಶಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.

ಅವರು ಇಂದು ಶಿವಮೊಗ್ಗ ನಗರದ ಬಿ.ಬಿ.ಸ್ಟ್ರೀಟ್ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರ ಹೆಸರಿನಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಕೂಲ್‌ಬ್ಯಾಗ್, ನೋಟ್‌ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲಾ ನೆರವು ಹಾಗೂ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.
ಸರ್ಕಾರಿ ಶಾಲೆಗಳು ಈ ಹಿಂದಿನಂತಿಲ್ಲ. ಬದಲಾಗಿ ಸ್ಮಾರ್ಟ್ಕ್ಲಾಸ್‌ನಂತಹ ಅನೇಕ ಮಾರ್ಪಾಡುಗಳನ್ನು ಕಂಡಿವೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ. ಭೌತಿಕ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಅಗತ್ಯ ನೆರವು ನೀಡಿದೆ ಎಂದ ಅವರು, ಸರ್ಕಾರದೊಂದಿಗೆ ಸ್ಥಳೀಯವಾಗಿರುವ ದಾನಿಗಳ ನೆರವಿನಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಕಾರ ದೊರೆತಿದೆ. ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮಾರ್ಪಾಡಾಗಿದೆ. ಇದರಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗಿರುವುದು ವಿಶೇಷ ಎಂದವರು ನುಡಿದರು.

ಪೋಷಕರು ಮತ್ತು ಸಾರ್ವಜನಿಕರು ತಮ್ಮ ಕುಟುಂಬದ ಮಕ್ಕಳ ಮದುವೆ, ಹುಟ್ಟುಹಬ್ಬ, ಮತ್ತಿತರ ಶುಭ ಸಮಾರಂಭಗಳನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಶಾಲೆಗಳಲ್ಲಿನ ಬಡ ಅರ್ಹ ಮಕ್ಕಳಿಗೆ ಬಟ್ಟೆ, ಪುಸ್ತಕ, ನೋಟ್‌ಪುಸ್ತಕ ಮತ್ತಿತರ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸುವ ಮೂಲಕ ಆಚರಿಸಿಕೊಳ್ಳಲು ಸಲಹೆ ನೀಡಿದರು.
ಅನೇಕ ಸಭೆ-ಸಮಾರಂಭಗಳಿಗೆ ನೀಡುವ ಹಣಕ್ಕಿಂತ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನೀಡುವ ಹಣ ಮಾನಸಿಕವಾಗಿ ಹೆಚ್ಚಿನ ಸಮಾಧಾನ ನೀಡಲಿದೆ ಎಂದ ಅವರು ನಗರದ ಇನ್ನೂ ಹತ್ತು ಶಾಲೆಗಳ ಮಕ್ಕಳಿಗೆ ದಾನಿಗಳ ನೆರವಿನಿಂದ ಪಠ್ಯಪುಸ್ತಕ, ಬ್ಯಾಗ್ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ಮಾತನಾಡಿ, ಕೊರೋನ ಸೋಂಕಿನ ಕಾರಣದಿಂದಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿವೆ. ಶೇ.70ರಷ್ಟು ಮಕ್ಕಳು ತಮ್ಮ ಕಲಿಕೆಯನ್ನು ಮರೆತಿದ್ದಾರೆ. ಇದರಿಂದಾಗಿ ದೇಶದ ಮೇಲೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದ ಅವರು, ಇದನ್ನು ಮಕ್ಕಳಲ್ಲಿ ಪುನರ್ ಮನನ ಮಾಡಲು ಶಿಕ್ಷಣ ತಜ್ಞರ ಸಲಹೆಯಂತೆ ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಿದೆ ಎಂದ ಅವರು ಈ ಕಾರ್ಯಕ್ರಮದಿಂದಾಗಿ ಮಕ್ಕಳ ಕಲಿಕೆಯಲ್ಲಿ ಉತ್ತಮ ಸುಧಾರಣೆ ಕಾಣಲು ಸಾಧ್ಯವಾಗಲಿದೆ. ಈ ಸಂಬAಧ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ 2ದಿನಗಳ ತರಬೇತಿ ನೀಡಲಾಗಿದೆ ಎಂದರು.

ಸರ್ಕಾರವು ಪ್ರಸ್ತಕ ಶೈಕ್ಷಣಿಕ ಸಾಲನ್ನು ಕಲಿಕಾ ಚೇತರಿಕಾ ವರ್ಷ ಎಂದು ಘೋಷಿಸಿದೆ. ಅಂತೆಯೇ ಪ್ರಸಕ್ತ ಸಾಲಿನ ಕಾರ್ಯಕ್ರಮಗಳ ಜೊತೆಗೆ ಮಳೆಬಿಲ್ಲು ಎಂಬ ವಿನೂತನ ಕಾರ್ಯಕ್ರಮವನ್ನು ಜೋಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಿಂಗಳ 14ದಿನಗಳ ಕಾಲ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಪಠ್ಯ ಚಟುವಟಿಕೆಗಳಿಲ್ಲದೆ ಶಿಕ್ಷಣ ನೀಡಲಾಗುವುದು. ಇದರಿಂದಾಗಿ ಮಕ್ಕಳು ದಿನಂಪೂರ್ತಿ ಕಲಿಕೆಯಲ್ಲಿ ಲವಲವಿಕೆಯಿಂದಿರಲು ಸಾಧ್ಯವಾಗಲಿದೆ ಎಂದರು.
ಸರ್ಕಾರವು ಈಗಾಗಲೇ ಶೇ.70ರಷ್ಟು ಪುಸ್ತಕ, ಸಮವಸ್ತç ಮುಂತಾದವುಗಳನ್ನು ಸರಬರಾಜು ಮಾಡಿದೆ. ಮುಂದಿನ 3-4ದಿನಗಳಲ್ಲಿ ಉಳಿದ ಎಲ್ಲಾ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತç ಒದಗಿಸಲಾಗುವುದು. ಪ್ರಸ್ತುತ ಶಾಲಾ ಆರಂಭದ ದಿನ ಇಂದು ಶಾಲೆಯನ್ನು ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಸಜ್ಜುಗೊಳಿಸಲಾಗಿದೆ. ದಾನಿಗಳ ನೆರವಿನಿಂದ ಸುಣ್ಣ-ಬಣ್ಣ ಮಾಡಿಸಲಾಗಿದೆ. ಒಟ್ಟಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಬಿ.ರುದ್ರಪ್ಪ, ನೌಕರರ ಸಂಘದ ಕಾರ್ಯದರ್ಶಿ ಕೃಷ್ನಮೂರ್ತಿ, ಹಿರಿಯ ಉಪಾಧ್ಯಕ್ಷ ಪಾಪಣ್ಣ, ಮಹಾನಗರಪಾಲಿಕೆ ಸದಸ್ಯ ಶ್ರೀಮತಿ ಭಾನುಮತಿ ಶೇಟ್, ಹೆಚ್.ಡಿ.ಎಂ.ಸಿ. ಅಧ್ಯಕ್ಷ ಗಣೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೇಬಿ ಸೇರಿದಂತೆ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…