ಶಿವಮೊಗ್ಗ: ಮಧುಮೇಹದ ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಾಗಿರುವ ‘ಡಯಾಬಿಟಿಸ್ ರಿವರ್ಸಸಲ್’ ಚಿಕಿತ್ಸೆಯನ್ನು ಶಿವಮೊಗ್ಗದಲ್ಲೂ ಪ್ರಾರಂಭಿಸಲಾಗುತ್ತಿದೆ ಎಂದು ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪ್ರೀತಂ ತಿಳಿಸಿದರು.

ಇಂದು ಸಾಗರ ರಸ್ತೆಯಲ್ಲಿರುವ ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್‍ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಗತ್ತನ್ನು ಕಾಡುತ್ತಿರುವ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಮಧುಮೇಹವನ್ನು ಸಂಪೂರ್ಣ ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಆದರೆ, ನಿಯಂತ್ರಣದಲ್ಲಿಡಬಹುದು ಎಂಬುದು ಇಲ್ಲಿಯವರೆಗಿನ ನಂಬಿಕೆಯಾಗಿತ್ತು. ಮಧುಮೇಹ ನಿಯಂತ್ರಣದಲ್ಲಿದ್ದರೂ ದೇಹದ ಮೇಲೆ ಆಗುವ ಸೈಡ್ ಎಫೆಕ್ಟ್‍ಗಳ ತಪ್ಪಿಸುವುದು ಕಷ್ಟಕರವಾಗಿತ್ತು. ಮಧುಮೇಹಿಗಳು ಔಷಧೋಪಚಾರದಲ್ಲೇ ಜೀವನವಿಡೀ ಕಳೆಯಬೇಕಿತ್ತು. ಇಂಥ ಮಾರಕ ಮಧುಮೇಹದ ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಾಗಿರುವುದೇ ‘ಡಯಾಬಿಟಿಸ್ ರಿವರ್ಸಲ್’ ಚಿಕಿತ್ಸೆಯಾಗಿದೆ ಎಂದರು.

ಡಯಾಬಿಟಿಸ್ ರಿವರ್ಸಲ್ ಚಿಕಿತ್ಸೆಯಿಂದ ಮಧುಮೇಹವನ್ನು ಸಂಪೂರ್ಣ ಇಲ್ಲವಾಗಿಸುವುದಲ್ಲದೆ, ಯಾವುದೇ ಔಷಧಗಳಿಲ್ಲದೇ ಜೀವನ ಸಾಗಿಸುವಂತೆ ಮಾಡುವ ಚಿಕಿತ್ಸಾ ಪದ್ಧತಿಯಾಗಿದೆ. ಈ ಪದ್ಧತಿ ಅನುಸರಿಸಿದ ಮೂರು ತಿಂಗಳಲ್ಲಿ ಬಹುತೇಕರಿಗೆ ಮಧುಮೇಹ ಇಲ್ಲವಾಗುತ್ತದೆ ಅಥವಾ ಶುಗರ್ ಕಡಿಮೆಯಾಗುತ್ತದೆ. ಈ ಪದ್ಧತಿ ಅನುಸರಿಸಿದ 20ರಿಂದ 30 ದಿನಗಳಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಔಷಧಗಳನ್ನು ನಿಲ್ಲಿಸಬಹುದು. ಪದ್ಧತಿ ಅನುಸರಿಸಿದ ಮೂರು ತಿಂಗಳ ನಂತರ ಪ್ರತಿ ತಿಂಗಳಿಗೆ ಅಗತ್ಯ ಇರುವ ಫುಡ್ ಕಿಟ್ ನೀಡಲಾಗುತ್ತದೆ ಎಂದರು.
ಡಯಾಬಿಟಿಸ್ ರಿವರ್ಸಲ್ ಈಗ ಜಾಗತಿಕ ಟ್ರೆಂಡ್ ಆಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಮಧುಮೇಹಿಗಳ ಚಿಕಿತ್ಸೆಗೆ ಹೆಸರಾಗಿರುವ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ಹಾಗೂ ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಹಯೋಗದಲ್ಲಿ ಡಯಾಬಿಟಿಸ್ ರಿವರ್ಸಲ್ ಪದ್ಧತಿ ಪರಿಚಯಿಸಲಾಗುತ್ತಿದೆ. ಈ ಚಿಕಿತ್ಸಾ ಪದ್ಧತಿ ರಾಜ್ಯದಲ್ಲಿ ಬೆಂಗಳೂರನ್ನು ಬಿಟ್ಟರೆ ಶಿವಮೊಗ್ಗದಲ್ಲಿ ಮಾತ್ರ ಲಭ್ಯವಿದೆ ಎಂದರು.

ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಿಇಓ ವಿವೇಕ್ ಸುಬ್ರಹ್ಮಣ್ಯ ಮಾತನಾಡಿ, ಡಯಾಬಿಟಿಸ್ ರಿವರ್ಸಲ್ ಕುರಿತು ಮೇ 19ರಂದು ಬೆಳಿಗ್ಗೆ ಐಲೆಟ್ಸ್ ಡಯಾಬಿಟಿಸ್ ಹಾಸ್ಪಿಟಲ್ ನಲ್ಲಿ ವಿಶೇಷ ಮಾಹಿತಿ ಶಿಬಿರ ಏರ್ಪಡಿಸಲಾಗಿದ್ದು, ಶಿಬಿರವನ್ನು ಐಎಂಎ ಉಪಾಧ್ಯಕ್ಷ ಡಾ. ಶಂಭುಲಿಂಗ ಬಂಕೊಳ್ಳಿ ಅವರು ಉದ್ಘಾಟಿಸಲಿದ್ದು, ಶಿವಮೊಗ್ಗ ಸಿಟಿ ಕ್ಲಬ್ ಕಾರ್ಯದರ್ಶಿ ಜಗತ್ ಗೌಡ, ಲಿಟಲ್ ಎಲ್ಲಿ ಪ್ರೀ ಸ್ಕೂಲ್ ನಿರ್ದೇಶಕ ಅನಿಲ್ ಪಿ. ಶೆಟ್ಟಿ ಆಗಮಿಸಲಿದ್ದಾರೆ. ಶಿಬಿರದಲ್ಲಿ ಡಯಾಬಿಟಿಸ್ ರಿವರ್ಸಲ್ ಕುರಿತು ಮುಕ್ತ ಸಂವಾದ ನಡೆಯಲಿದ್ದು, ಈ ಪದ್ಧತಿಯಡಿ ಚಿಕಿತ್ಸೆ ಪಡೆಯಲಿಚ್ಛಿಸುವವರು ಮೇ 30ರೊಳಗಾಗಿ ಹೆಸರು ನೊಂದಾಯಿಕೊಳ್ಳಬಹುದಾಗಿದ್ದು, ಮಾಹಿತಿಗೆ ಮೊ: 7975074740 ಸಂಪರ್ಕಿಸಿ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಲೈವ್ ಆಲ್ಟ್ ಲೈಫ್‍ನ ಸಿಎಫ್‍ಓ ಪುರುಷೋತ್ತಮ ಗೋವಿಂದರಾಜನ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…