ಶಿವಮೊಗ್ಗ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪತ್ರಿಕೆ ಹಂಚುವ ಕಾರ್ಯ ಬೆನ್ನುಲುಬಾಗಲಿದೆ ಎಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದುರೆಮೋತಿ ಹೇಳಿದರು.

ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಗರದ ಜೈಲ್ ರಸ್ತೆಯಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಕಟ್ಟಲಾಗದೆ ಶಾಲೆಯನ್ನೇ ಬಿಟ್ಟ ನಿದರ್ಶನಗಳು ಬಹಳಷ್ಟು ಇವೆ. ಅಂತಹ ವಿದ್ಯಾರ್ಥಿಗಳಿಗೆ ಪತ್ರಿಕಾ ವಿತರಣಾ ಕಾರ್ಯ ನೆರವಾಗಲಿದೆ ಎಂದರು.ವಿದ್ಯಾರ್ಥಿಗಳ ಸಾಧನೆಗೆ ಯಾವುದೂ ಅಡ್ಡಿಯಾಗಲ್ಲ, ಪತ್ರಿಕೆ ವಿತರಣೆ ಮಾಡಿಕೊಂಡೇ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಬಾಲ್ಯದಲ್ಲೇ ಪತ್ರಿಕಾ ವಿತರಣೆ ಜೊತೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಇವರ ವಿದ್ಯಾಭ್ಯಾಸಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡಿ ಧನ ಸಹಾಯ ಮಾಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಅಕ್ಷಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿತರಕರ ಕಷ್ಟಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರವು ನಮ್ಮನ್ನು ಕೆಳಮಟ್ಟದಲ್ಲಿಯೇ ನೋಡುತ್ತಿದೆ. ಮೀಸಲಾತಿಯಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವವರಿಗೂ ಸ್ಥಾನವನ್ನು ಕಲ್ಪಿಸಿ, ಅವರ ಉನ್ನತ ವಿದ್ಯಾಭ್ಯಾಸ ಮತ್ತು ಅಭಿವೃದ್ದಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಸತ್ಯನಾರಾಯಣ್ ಮಾತನಾಡಿ, ಮುಂದಿನ ದಿನಗಳಲ್ಲಿ ಪತ್ರಿಕೆ ವಿತರಣೆ ಮಾಡುವ ಹುಡುಗರಿಗೆ ಪ್ರೋತ್ಸಾಹ ಧನ ವಿತರಿಸುವಂತಹ ಕೆಲಸವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.ಶಿವಮೊಗ್ಗ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ಧನಂಜಯ ಹೆಚ್ ಮಾತನಾಡಿ, ದಿನಪತ್ರಿಕೆ ವಿತರಣೆ ಮಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವುದು ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನೇ ಅಲಂಕರಿಸುತ್ತಾರೆ. ಶ್ರಮಪಟ್ಟಟವನಿಗೆ ಸುಖ ಸಿಕ್ಕೇ ಸಿಗುತ್ತದೆ. ಇದು ಹಿರಿಯರು ಹೇಳುವ ಅನುಭವದ ಮಾತು. ಅದು ಸತ್ಯವು ಹೌದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಭಟ್, ಖಜಾಂಚಿ ಯೋಗಿಶ್ ಪಿ,ಎಸ್.,   ಸದಸ್ಯರಾದ ಮಂಜುನಾಥ್ ಬಿ., ಚೇತನ್, ಪ್ರವೀಣ್, ಮನೋಜ್, ಮಂಜುನಾಥ್ ಎಸ್.ಹೆಚ್., ನಾಗೇಂದ್ರ, ಅರವಿಂದ್, ಸುಧೀರ್, ಸಂಜಯ್‌ಕುಮಾರ್, ರಾಮಣ್ಣ, ಶ್ರೀನಿವಾಸ್, ರಾಜ್‌ಕುಮಾರ್, ಪರಮೇಶ್ವರಪ್ಪ, ಎನ್. ಮಾಲತೇಶ್, ಗದಗ ಜಿಲ್ಲಾಧ್ಯಕ್ಷರಾದ ಶಂಕರಗುರು ಕಂದಗಲ್, ಮಂಜುನಾಥ್ ಕಬನೂರ್, ವಿನಾಯಕ ಬದಿ, ಕೊಪ್ಪಳದ ನಾಗರಾಜ್ ಕಲಾಲ್, ನರಗುಂದದ ಘಟ್ಟಿ ಸಂಘದ ನಿರ್ದೇಶಕರು, ಸದಸ್ಯರು, ವಿತರಕರು ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.ಸಮಾರಂಭದಲ್ಲಿ ಕಿರಣ್ ಎಂ., ಸತೀಶ್ ಎಸ್., ಲೋಕೇಶ್ ಆರ್.ಪಿ., ನವೀನ್ ಡಿ., ಧನುಷ್ ಎಸ್.ಎಂ. ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…