ಶಿವಮೊಗ್ಗ: ಸಮರ ಕಲೆ, ಕರಾಟೆ ಮುಂತಾದವುಗಳು ಆತ್ಮರಕ್ಷಣೆಯ ಜೊತೆಗೆ ಆರೋಗ್ಯ ಹಾಗೂ ಸ್ವಾಭಿಮಾನದ ಪ್ರತೀಕಗಳಾಗಿವೆ ಎಂದು ಆದಿಚುಂಚನಗಿರಿ ಸಂಸ್ಥಾನದ ಕಾರ್ಯದರ್ಶಿ ಡಾ. ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಅವರು ನಿನ್ನೆ ಸಂಜೆ ಕುವೆಂಪುರಸ್ತೆಯಲ್ಲಿ ಪ್ರಾರಂಭವಾಗಿರುವ ಎಕ್ಸ್ಟ್ರೀಮ್ ಮಾರ್ಷಲ್ ಆರ್ಟ್ ಅಕಾಡೆಮಿ ವತಿಯಿಂದ ನಿರ್ಮಾಣಗೊಂಡ ಜಿಮ್ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದು ಆತ್ಮರಕ್ಷಣೆಗಾಗಿ ಯುವಜನಾಂಗ ಅದರಲ್ಲೂ ಮಹಿಳೆಯರು ಕರಾಟೆ ಸೇರಿದಂತೆ ಸಮರಕಲೆ ಕಲಿಯಬೇಕಾಗಿದೆ. ಈ ಸಮರ ಕಲೆಯನ್ನು ಜಿಲ್ಲೆಗೆ ತಂದ ಕೀರ್ತಿ ಶಿಕ್ಷಕ ಶಬ್ಬೀರ್ ಅಹ್ಮದ್ ಅವರದ್ದಾಗಿದೆ. ಅವರು ತಮ್ಮ ಜೀವನವನ್ನೇ ಇಂತಹ ಕಲೆಗಾಗಿ ಮುಡುಪಾಗಿಟ್ಟಿದ್ದಾರೆ. ಇದು ಸ್ವಾಗತದ ವಿಷಯ ಎಂದರು.

ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸವಿದ್ದರೆ ಯಶಸ್ಸು ಸಾಧ್ಯ. ಕ್ರೀಡಾಕ್ಷೇತ್ರದಲ್ಲಿ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದವರು ತಮ್ಮ ಬದುಕಿನಲ್ಲಿಯೂ ಕೂಡ ಎಂತಹ ಸಮಸ್ಯೆಗಳು ಬಂದರೂ ಎದುರಿಸುತ್ತಾರೆ. ಕ್ರೀಡೆ ನಮಗೆ ಕ್ರಿಯಾಶೀಲತೆಯನ್ನು ನೀಡುವುದರ ಜೊತೆಗೆ ಸಾಮರಸ್ಯ ಭಾವನೆಯನ್ನೂ ಮೂಡಿಸುತ್ತದೆ. ಶಬ್ಬೀರ್ ಅವರು ಮುಸ್ಲಿಂ ಬಾಂಧವರಾಗಿದ್ದರೂ ಕೂಡ ಸುಮಾರು 51 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಬೇಧವಿಲ್ಲದೇ ಕಲಿಸಿದ್ದಾರೆ. ಅವರ ಈ ಹೊಸ ಪ್ರಯೋಗ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ, ಸಮರ ಕಲೆ ಶಿಕ್ಷಕ ಶಬ್ಬೀರ್ ಅಹ್ಮದ್, ಪ್ರಮುಖರಾದ ದಸ್ತಗೀರ್ ಬಾಷಾ, ಶಶಿಕುಮಾರ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…