ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಸಿಕ್ಕಿದೆ ಎಂದರೆ ಅದಕ್ಕೆ ಡಿ.ದೇವರಾಜ ಅರಸುರವರೇ ಕಾರಣ ಎಂದು ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸುವರ್ಣ ಸಾಂಸ್ಕøತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಹರಿಕಾರ-ಸಾಮಾಜಿಕ ಪರಿವರ್ತನೆಯ ಹರಿಕಾರ-ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 107 ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಮೂಲಕ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಅರಸು. ಹಿಂದೆಲ್ಲ ಹಿಂದುಳಿದವರು ಶಿಕ್ಷಣ ನಗರ ಪ್ರದೇಶಗಳಿಗೆ ಹೋಗಿ ಶಿಕ್ಷಣ ಪಡೆಯಬೇಕೆಂದರೆ ಊರಿನ ಶ್ರೀಮಂತರ ಬಳಿ ಬೇಡಬೇಕಿತ್ತು. ಆದರೆ ಅರಸುರವರು ಹಿಂದುಳಿದವರಿಗಾಗಿ ಅನೇಕ ಶಾಲಾ, ಕಾಲೇಜು, ಹಾಸ್ಟೆಲ್, ವಿದ್ಯಾರ್ಥಿವೇತನ ನೀಡುವ ಮೂಲಕ ಇಂದು ಆ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಅಂತಹ ಉನ್ನತ ಶಿಕ್ಷಣ ಸಹ ಪಡೆಯುವಂತೆ ಮಾಡಿದ್ದಾರೆ. ಹಾಗೂ ಅವರು ತಮ್ಮ ಕಾಲ ಮೇಲೆ ನಿಲ್ಲುವ ವ್ಯವಸ್ಥೆಯನ್ನು ಸಾಧ್ಯವಾಗಿಸಿದ್ದಾರೆ.
ಮಹಿಳಾ ಸ್ವಾವಲಂಬನೆ ಕೂಡ ಅವರಿಂದ ಸಾಧ್ಯವಾಗಿದೆ. ಪಾಲಿಕೆ ವತಿಯಿಂದ ಸಹ ಹೊಸದಾಗಿ ಮಹಿಳಾ ಬಜಾರ್ ನಿರ್ಮಿಸಲಾಗುತ್ತಿದ್ದು, ಮಹಿಳಾ ಉದ್ಯಮಿಗಳು ಅನೇಕರಿಗೆ ಕೆಲಸ ಕೊಡಬಹುದು. ಈ ನಿಟ್ಟಿನಲ್ಲಿ ಮುಂದೆ ಬರಬೇಕೆಂದು ತಿಳಿಸಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಚಂದ್ರಗುತ್ತಿ ಡಿ.ದೇವರಾಜ ಅರಸುರವರ ಜೀವನ ಚರಿತ್ರೆ ಮತ್ತು ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬಸವಳಿದ ಜನರ ಆಶಾಕಿರಣವಾಗಿದ್ದವರು ಅರಸು. ಅವರೊಬ್ಬ ಸಾಮಾಜಿಕ ಚಿಕಿತ್ಸಕ, ತಜ್ಞ. ಕಷ್ಟ ಕಾರ್ಪಣ್ಯದಿಂದ ವಿಕಾಸ ಹೊಂದಿದವರು ಎಂದು ವಿದ್ಯಾರ್ಥಿಗಳಿಗೆ ಅರಸುರವರ ಇಡೀ ಜೀವನದ ಚಿತ್ರಣ ನೀಡಿದರು
ಇಂದಿನ ಪೀಳಿಗೆಗೆ ಅಂದಿನ ಸಾಮಾಜಿಕ ಸ್ಥಿತಿಗತಿ, ಕಷ್ಟಗಳು ಗೊತ್ತಿಲ್ಲ. ಅವರಂತಹವರ ಹೋರಾಟದ ಫಲದಿಂದಲೇ ಇಂದು ನೀವೆಲ್ಲ ಉತ್ತಮ ಶಿಕ್ಷಣ ಪಡೆಯುತ್ತಿದ್ದೀರಿ. ಹಿಂದುಳಿದ ವರ್ಗಗಳ ಆತ್ಮಚೈತನ್ಯ ಎಂದು ಹೇಳಬಹುದಾದ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದರು. ಅತ್ಯಂತ ಹೀನಾಯವಾದ ತಲೆ ಮೇಲೆ ಮಲ ಹೊರುವ ಪದ್ದತಿ ರದ್ದತಿಗೊಳಿಸಿದರು. ಕ್ರಾಂತಿಕಾರಿಯಾದ ಭೂಸುಧಾರಣೆ ಕಾಯ್ದೆ ಜಾರಿಗೆ ತಂದರು. ಅಂಬೇಡ್ಕರ್‍ರವರ ಚಿಂತನ ಕ್ರಮಗಳನ್ನು ಮುಂದುವರೆಸಿದ ಇಂತಹ ಮಹನೀಯರ ಜೀವನ ಚರಿತ್ರೆ, ಗುಣಗಳನ್ನು ತಿಳಿದು, ಅಳವಡಿಸಿಕೊಂಡಾಗ ನಮ್ಮ ಓದು ಮತ್ತು ಬುದ್ದಿಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ…

ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ.ರಾಜು ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ, ಮಹಾನ್ ಚೇತನ ಅರಸು ಜೀವನದ ಪ್ರತಿ ಘಟ್ಟವನ್ನು ಸಾಕ್ಷೀಕರಿಸಿ ಅನುಸರಿಸುತ್ತಾ ಬಂದಿದ್ದೇನೆ. ಜಿಲ್ಲೆಯಲ್ಲಿ ಅನೇಕರ ಹೋರಾಟದ ಫಲವಾಗಿ ದೇವರಾಜ ಅರಸು ಭವನ ನಿರ್ಮಾಣಕ್ಕೆ ಭೂಮಿ ಲಭಿಸಿ, ಕಟ್ಟಡ ನಿರ್ಮಾಣ ಆರಂಭಗೊಂಡು, ಈಗ ಅಪೂರ್ಣವಾಗಿ ನಿಂತಿದೆ. ಕಟ್ಟಡ ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು.
ಪ್ರಶಸ್ತಿಯೊಂದಿಗೆ ನೀಡಲಾದ ರೂ.50 ಸಾವಿರವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಚಟುವಟಿಕೆಗೆ ವಿನಿಯೋಗಿಸಿಕೊಳ್ಳಲು ನೀಡುವುದಾಗಿ ಘೋಷಿಸಿದರು.

ಮಾಜಿ ವಿಧಾನ ಪರಿಷತ್ ಶಾಸಕರಾದ ಸಿದ್ದರಾಮಣ್ಣ ಮಾತನಾಡಿ, ಅನೇಕ ಕ್ರಾಂತಿಕಾರಿ ನಿಲುವುಗಳ ಮೂಲಕ ಹಿಂದುಳಿದ ವರ್ಗಗಳ ಉದ್ದಾರಕ್ಕೆ ನಿಂತ ಬದ್ದ ಮತ್ತು ಧೀಮಂತ ವ್ಯಕ್ತಿ ಅರಸುರವರು. ಹಿಂದುಳಿದವರ ಮೀಸಲಾತಿ ಒಂದು ಸಂವಿಧಾನಬದ್ದ ಹಕ್ಕು ಮತ್ತು ಆಶಯವಾಗಿದೆ ಎಂದ ಅವರು ಸರ್ಕಾರ ಕೈಗೊಂಡಿರುವ ಸಾಮಾಜಿಕ-ಶೈಕ್ಷಣಿಕ ವರದಿಯು ಸ್ವೀಕೃತವಾಗಿ, ಅಧ್ಯಯನ ನಡೆದು ಅನುಷ್ಟಾನಗೊಳ್ಳಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಅರಸುರವರ ಜಯಂತಿ ವಿಶೇಷವಾಗಿ ಆಚರಣೆಯಾಗಿತ್ತಿದೆ. ಮಹಾನ್ ವ್ಯಕ್ತಿಗಳಲ್ಲಿ ಇವರದು ಅದ್ಭುತವಾದ ವ್ಯಕ್ತಿತ್ವ. ಹಿಂದುಳಿದ ವರ್ಗಗಳ ಉದ್ದಾರಕ್ಕಾಗಿ ಭೂಸುಧಾರಣೆ ಕಾಯ್ದೆ ಜಾರಿ, ಅನೇಕ ಶೈಕ್ಷಣಿಕ ಸಂಸ್ಥೆ, ಹಾಸ್ಟೆಲ್‍ಗಳ ಸ್ಥಾಪನೆ ಮೂಲಕ ದಿಟ್ಟ ನಿಲುವುಗಳನ್ನು ಕೈಗೊಂಡವರು ಇವರು. ಅರಸುರವರ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು ಯುವಜನತೆ ಇಂದೇ ತಮ್ಮ ಗುರಿಯನ್ನು ಗುರುತು ಹಾಕಿಕೊಂಡು ಆ ನಿಟ್ಟಿನಲ್ಲಿ ಸತತ ಶ್ರಮ ಮತ್ತು ಕಲಿಕೆಯ ಮೂಲಕ ನಿರಂತರವಾಗಿ ಮುನ್ನಡೆಯಬೇಕೆಂದು ಆಶಿಸಿದರು.

ಜಯಂತಿ ಅಂಗವಾಗಿ ಸುವರ್ಣ ಸಾಂಸ್ಕøತಿ ಭವನದ ಆವರಣದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಮಹಾಪೌರರು ಹಾಗೂ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭ.ಕೆ.ಆರ್ ಸ್ವಾಗತಿಸಿದರು. ವೇದಿಕೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಎಂ.ವಿಜಯಭಾಸ್ಕರ್, ದೇವರಾಜ ಅರಸು ಅಭಿವೃದ್ದಿ ನಿಗಮದ ನಿರ್ದೇಶಕ ಮಾಲತೇಶ್, ಜಿಲ್ಲಾ ಹಿಂದುಳಿದ ಒಕ್ಕೂಟದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಅಶೋಕ್, ಜಿಲ್ಲಾ ಮೊಗವೀರ ಸಮಾಜದ ಅಧ್ಯಕ್ಷ ಅಣ್ಣಪ್ಪ, ಡಿಎಸ್‍ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಗವಿಸಿದ್ದಪ್ಪ ತೆಗ್ಗಿನಮಠ, ಒಕ್ಕೂಟಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವರದಿ ಪ್ರಜಾಶಕ್ತಿ…