ಉದ್ಯೋಗದಾತರು ತಮ್ಮ ಕಾರ್ಮಿಕರಿಗೆ ಉಪಧನವನ್ನು ಪಾವತಿಸಬೇಕು. ಇದರಿಂದ ಅವರು ಹಾಗೂ ಅವರ ಕುಟುಂಬಕ್ಕೆ ಅನುಕೂಲವಾಗುವುದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಗೋಪಿನಾಥ್ ಹೇಳಿದರು.


ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024 ಅನುಷ್ಟಾನ ಕುರಿತು ಕಾರ್ಮಿಕ ಇಲಾಖೆ ಮತ್ತು ಎಲ್‍ಐಸಿ ವತಿಯಿಂದ ಜು.9 ರಂದು ಛೇಂಬರ್ ಆಫ್ ಕಾಮರ್ಸ್ ಇಲ್ಲಿ ಹೋಟೆಲ್ ಮಾಲೀಕರು, ಆಸ್ಪತ್ರೆ, ನರ್ಸಿಂಗ್ ಹೋಂ, ಖಾಸಗಿ ಶಿಕ್ಷಣ ಸಂಸ್ಥೆ, ಸಾರಿಗೆ ಮುಖ್ಯಸ್ಥರು, ವಿವಿಧ ಸಂಸ್ಥೆಗಳ ಮಾಲೀಕರುಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉಪಧನ ಪಾವತಿ ಕಾಯ್ದೆ 1972 ರ ಕಲಂ 4-ಎ ರನ್ವಯ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು 2024 ಅನುಷ್ಟಾನಗೊಳಿಸುವ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಿವಿಧ ಸಂಸ್ಥೆಗಳ ಮಾಲೀಕರು ಸಾಮಾಜಿಕ ಹೊಣೆಗಾರಿಕೆಯಿಂದ ಜಾರಿಗೆ ತರಬೇಕು. ವಾಣಿಜ್ಯೋದ್ಯಮಿಗಳು, ಉದ್ಯೋಗದಾತರು ಎಲ್‍ಐಸಿ ಸಂಸ್ಥೆಗೆ ಕಾರ್ಮಿಕರ ಗ್ರಾಚ್ಯುಯಿಟಿ ತುಂಬಬೇಕು. ಇದರಿಂದ ಕಾರ್ಮಿಕರಿಗೆ ಹಲವಾರು ರೀತಿಯಲ್ಲಿ ಅನುಕೂಲವಾಗುತ್ತದೆ ಎಂದರು.


ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಉಪಧನ ಪಾವತಿ ಕಾಯ್ದೆ 1972 ಕಲಂ 4ಎ ಕಡ್ಡಾಯ ವಿಮೆಯನ್ನು ಜಾರಿಗೆ ತಂದಲ್ಲಿ ಉದ್ಯೋಗದಾತರ ಸಂಸ್ಥೆಯು ಯಾವುದೇ ಕಾರಣದಿಂದ ಮುಚ್ಚಿದಲ್ಲಿ, ಆರ್ಥಿಕವಾಗಿ ನಷ್ಟ ಅನುಭವಿಸಿದಲ್ಲಿ ಅಥವಾ ದಿವಾಳಿಯಾದಲ್ಲಿಯೂ ಸಹ ಕಾರ್ಮಿಕ ಉಪಧನವನ್ನು ಸುರಕ್ಷಿತವಾಗಿಸಲು ಅವಕಾಶವಾಗುತ್ತದೆ. ಉದ್ಯೋಗದಾತರು ಕಾರ್ಮಿಕರ ಉಪಧನ ಪಾವತಿಸುವುದರಿಂದ ಹಲವಾರು ಅನುಕೂಲಗಳಿವೆ ಎಂದು ವಿವರಿಸಿದರು.


ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಮಾತನಾಡಿ, ರಾಜ್ಯದಲ್ಲಿ ಉಪಧನ ಪಾವತಿ ಕಾಯ್ದೆ 1972 ರ ಕಲಂ 4-ಎ ರನ್ವಯ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು 2024 ಅನುಷ್ಟಾನಗೊಳಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸಂತಸದ ವಿಚಾರ. ಸರ್ಕಾರ ಈ ಕ್ರಮ ವಹಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಎಲ್ಲ ಉದ್ಯೊಗದಾತರು, ಮಾಲೀಕರು ಈ ನಿಯಮಗಳನ್ನು ಜಾರಿಗೆ ತರಬೇಕು. ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.


ಮಂಗಳೂರು ಎಲ್‍ಐಸಿ ರೀಜನಲ್ ಮ್ಯಾನೇಜರ್ ಸಿ.ವಿ.ಪ್ರಭ, ಪಿಪಿಟಿ ಪ್ರದರ್ಶನ ಮೂಲಕ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024 ರನ್ವಯ 10 ಜನ ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಯ ಮಾಲೀಕರು ಉಪಧನವನ್ನು ಪಾವತಿಸಬೇಕು. ಕರ್ನಾಟಕ ಕಡ್ಡಾಯ ವಿಮಾ ಉಪಧನ ನಿಯಮ 2024 ರನ್ವಯ ಅರ್ಹ ಕಾರ್ಮಿಕ/ನೌರರಿಗೆ ಆಗುವ ಅನುಕೂಲಗಳು, ಮಾಲೀಕರಿಗೆ/ಆಡಳಿತ ವರ್ಗಕ್ಕೆ ಆಗುವ ಅನುಕೂಲಗಳು, ಉಪಧನ ಪಾವತಿಸುವಲ್ಲಿ ಮಾಲೀಕರ ಕರ್ತವ್ಯಗಳು, ನೌಕರರಿಗೆ ಆಗುವ ಅನುಕೂಲಗಳು, ನಿಯಂತ್ರಣಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಕಾರ್ಮಿಕ ನಿರೀಕ್ಷಕರಾದ ಭೀಮೇಶ್, ಸುಖಿತಾ ಕೆ ಸಿ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್, ಅಧಿಕಾರಿಗಳು, ಎಲ್‍ಐಸಿ ಅಧಿಕಾರಿಗಳು, ವಿವಿಧ ಖಾಸಗಿ ಸಂಸ್ಥೆಗಳ ಮಾಲೀಕರು ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ