ಮಂಜುನಾಥ್ ಶೆಟ್ಟಿ…
ಮಹಾಪುರುಷರ ತತ್ವ-ಆದರ್ಶಗಳು ಕೇವಲ ವೇದಿಕೆಗೆ ಸೀಮಿತವಾಗದೆ ಯುವ ಪೀಳಿಗಳಿಗೆ ಆದರ್ಶವಾಗಬೇಕು
ಶಾಲಾ ಮಕ್ಕಳಿಗೆ ಜೀವನ ಚರಿತ್ರೆ ವಿತರಿಸಲು ವಿಧಾನ ಪರಿಷತ್ತಿನಲ್ಲಿ ಡಾ. ಧನಂಜಯ ಸರ್ಜಿ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಸರ್ಕಾರವು ಅದ್ದೂರಿಯಾಗಿ ಆಚರಿಸುವ ಮಹಾಪುರುಷರ ಜಯಂತಿಗಳು ಕೇವಲ ಔಪಚಾರಿಕ ಕಾರ್ಯಕ್ರಮಗಳಾಗದೆ, ಅವುಗಳ ನೈಜ ಆಶಯವು ಮುಂದಿನ ಪೀಳಿಗೆಗೆ ತಲುಪಬೇಕು. ಈ ನಿಟ್ಟಿನಲ್ಲಿ ಜಯಂತಿಗಳ ಸಂದರ್ಭದಲ್ಲಿ ವ್ಯಯಿಸುವ ಹಣದಲ್ಲಿ ಮಹಾಪುರುಷರ ಜೀವನ ಚರಿತ್ರೆಯ ಪ್ರತಿಗಳನ್ನು ಮುದ್ರಿಸಿ ರಾಜ್ಯದ ಶಾಲಾ ಮಕ್ಕಳಿಗೆ ವಿತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಒತ್ತಾಯಿಸಿದರು.
ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವರ್ಷಕ್ಕೆ ಸುಮಾರು 30 ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ಪ್ರತಿಯೊಂದು ಜಯಂತಿಗೂ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆ. ಆದರೆ, ದುರದೃಷ್ಟವಶಾತ್ ಈ ಕಾರ್ಯಕ್ರಮಗಳು ಕೇವಲ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕೆಲವು ಮುಖಂಡರು ಒಳಗೊಂಡಂತೆ ಸರಾಸರಿ 50ರಿಂದ 200 ಜನರಿಗೆ ಮಾತ್ರ ಸೀಮಿತವಾಗುತ್ತಿರುವುದು ವಿಷಾಧನೀಯ.
ಜಯಂತಿಗಳ ಹೆಸರಿನಲ್ಲಿ ರಂಗಮಂದಿರಗಳ ಬಾಡಿಗೆ, ಶಾಮಿಯಾನ, ಅದ್ದೂರಿ ವೇದಿಕೆ ಅಲಂಕಾರ ಮತ್ತು ಊಟ-ಉಪಚಾರಗಳಿಗಾಗಿಯೇ ಕೋಟ್ಯಂತರ ರೂ ಖರ್ಚಾಗುತ್ತಿದೆ. ಈ ಹಣವು ಕೇವಲ ಒಂದು ದಿನದ ಸಂಭ್ರಮಕ್ಕೆ ಬಳಕೆಯಾಗುವ ಬದಲು, ಆ ಮಹಾಪುರುಷರ ಜೀವನದ ಮೌಲ್ಯಗಳನ್ನು ಸಾರುವ ಪ್ರತಿಗಳನ್ನು ಸಿದ್ಧಪಡಿಸಿ ವಿತರಿಸುವಂತಾಗಬೇಕು.
ರಾಜ್ಯದಲ್ಲಿ ಪ್ರಸ್ತುತ 8, 9 ಮತ್ತು 10ನೇ ತರಗತಿಯಲ್ಲಿ ಸುಮಾರು 30 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪ್ರತಿ ವರ್ಷ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುತ್ತಿದ್ದಾರೆ. ವರ್ಷಕ್ಕೆ 30 ಜಯಂತಿಗಳಾದರೆ
ಈ ಹಂತದ ಮಕ್ಕಳಿಗೆ ಮಹಾಪುರುಷರ ಜೀವನ ಚರಿತ್ರೆಯನ್ನು ತಲುಪಿಸಿದರೆ, ಆಯಾ ದಿನದಂದು ಶಾಲೆಗಳಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳುವುದು ಮತ್ತು ಇಲಾಖೆಯ ವತಿಯಿಂದಲೇ ಅಧಿಕೃತ ಜೀವನ ಚರಿತ್ರೆಯ ಪುಸ್ತಕಗಳನ್ನು ಉಚಿತವಾಗಿ ನೀಡುವುದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯುವುದಲ್ಲದೆ, ನಾಡಿನ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ ಎಂದು ಡಾ. ಸರ್ಜಿ ಅವರು ಹೇಳಿದರು.
ಡಾ. ಧನಂಜಯ ಸರ್ಜಿ ಅವರ ಸಲಹೆಗೆ ಸದನದಲ್ಲಿ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಈ ಪ್ರಸ್ತಾವನೆಯನ್ನು ಮುಕ್ತವಾಗಿ ಸ್ವಾಗತಿಸಿದರು. ಸರ್ಜಿ ಅವರ ಸಲಹೆ ಅತ್ಯಂತ ಮೌಲ್ಯಯುತವಾಗಿದೆ. ಮಹಾಪುರುಷರ ವಿಚಾರಧಾರೆಗಳು ವಿದ್ಯಾರ್ಥಿ ದೆಸೆಯಲ್ಲೇ ಮನವರಿಕೆಯಾಗುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಜಯಂತಿಗಳ ಸಂದರ್ಭದಲ್ಲಿ ಜೀವನ ಚರಿತ್ರೆಯ ಪ್ರತಿಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಗಂಭೀರವಾಗಿ ಚಿಂತಿಸಲಿದೆ,” ಎಂದು ಹೇಳಿದರು.