ಮಂಜುನಾಥ್ ಶೆಟ್ಟಿ…

ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ರೂಪಿಸಿದ ಸಂಸ್ಥೆ ಎಟಿಎನ್ಸಿಸಿ ಎಂದು ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಉಪಾಧ್ಯಕ್ಷ ದೇವಕುಮಾರ್ ಹೇಳಿದರು.
ಎಟಿಎನ್ಸಿಸಿ ಹಿರಿಯ ವಿದ್ಯಾರ್ಥಿ ಬಳಗದ ವಾಣಿಜ್ಯ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗಪ್ಪ ಶೆಟ್ಟಿ ಮತ್ತು ಅವರ ಸ್ನೇಹಿತರು ಸ್ಥಾಪಿಸಿದ ರಾಜ್ಯದ ಪ್ರಥಮ ವಾಣಿಜ್ಯ ಕಾಲೇಜಿನಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಸರ್ಕಾರದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯವಾಗಿ ಹಲವರು ಉನ್ನತ ಸ್ಥಾನ ಹೊಂದಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಚಲನಚಿತ್ರ ನಿರ್ಮಾಪಕ ರಮೇಶ್ ಅವರು ತಮ್ಮ ಜೀವನ ರೂಪಿಸಿದ ಕಾಲೇಜಿಗೆ ಋಣಿಯಾಗಿರುವುದಾಗಿ ತಿಳಿಸಿದರು. ಒಂದೇ ಕಾಲೇಜಿನಲ್ಲಿ ಓದಿದ ಅತ್ಯಂತ ಹಿರಿಯರು ಹಾಗೂ ಕಿರಿಯರು ಸೇರಿ ತಮ್ಮ ಪರಿಚಯ ಮಾಡಿಕೊಂಡು ತಾವು ತೊಡಗಿಕೊಂಡಿರುವ ಉದ್ಯೋಗದ ಮಾಹಿತಿ ನೀಡಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ಸದಸ್ಯರು, ರಾಜ್ಯದ ಪ್ರಥಮ ವಾಣಿಜ್ಯ ಕಾಲೇಜು ಪ್ರಾರಂಭದ ದಿನದಿಂದ ಇಂದಿನವರೆವಿಗೂ ಓದಿದ ಹಾಗೂ ಹಲವಾರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತ ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲ ಹಿರಿಯ ವಿದ್ಯಾರ್ಥಿಗಳು ರಾಜ್ಯ ನೌಕರರ ಸಂಘದ ಭವನದಲ್ಲಿ ಒಂದೆಡೆ ಸೇರಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ವಾಗೇಶ್ ಮಾತನಾಡಿ, ರಾಜಧಾನಿಯಲ್ಲಿ ಉದ್ಯೋಗದಾತರಾಗಿ ಇರುವವರು ಅವಶ್ಯಕ ಉದ್ಯೋಗಿಗಳನ್ನು ಹೊಂದಲು ತಾವು ಓದಿದ ಇಂದಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ನಾವು ಇಂದು ಮಾಡಿರುವ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಓದಿದ ಕಾಲೇಜು, ಹಳೆಯ ಸ್ನೇಹಿತರು ಭೇಟಿಯಾದಾಗ ಸಿಗುವ ಸಂತೋಷಕ್ಕೆ ಪಾರವೇ ಇಲ್ಲ. ಅದನ್ನು ಓದಗಿಸಲು ಚಿಕ್ಕ ಪ್ರಯತ್ನ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ, ಇತಿಹಾಸ, ರಾಷ್ಟ್ರ ನಾಯಕರನ್ನು ನೀಡಿರುವ ಬಗ್ಗೆ ನಿರೂಪಕ ಸಮನ್ವಯ ಕಾಶಿ ವಿವರಿಸಿದರು. 1986ನೇ ಸಾಲಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸ್ಮಿತಾ ರೂಪೇಶ್ ಸ್ವಾಗತಿಸಿದರು. ಜಿ.ವಿಜಯಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಿವಾನಂದರಾವ್ ಸಭಿಕರಿಗೆ ವಿಶೇಷ ಸ್ವರ್ಧೆ ಏರ್ಪಡಿಸಿ ಬಹುಮಾನ ನೀಡಿದರು.
ಉಪಾಧ್ಯಕ್ಷ ಕೇಶವಮೂರ್ತಿ ವಂದಿಸಿದರು. ದಿಲೀಪ್ ನಾಡಿಗ್, ನವೀನ್, ಅಂಬೋರೆ, ಸುರೇಶ್, ಮಹೇಶ್, ಕುಮಾರ್ ಗೌಡ, ಶ್ರೀಕಾಂತ್ ಕಾಮತ್, ಶಂಕರ್ ಇತರರಿದ್ದರು.