ಮಂಜುನಾಥ್ ಶೆಟ್ಟಿ…

ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅತ್ಯಂತ ಪೂರಕವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿüಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ ಎಸ್ ಸಂತೋಷ್ ಹೇಳಿದರು.


ರಂಗಾಯಣ ಶಿವಮೊಗ್ಗ ರೆಪರ್ಟರಿ ಕಲಾವಿದರು ಬುಧವಾರದಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪ್ರದರ್ಶಿಸಿದ ಡಾ. ಡಿ. ಎಸ್. ಚೌಗಲೆ ರಚನೆಯ ಮತ್ತು ಚಿದಂಬರರಾವ್ ಜಂಬೆ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಮೂಲ ಶಿಕ್ಷಣದ ಪರಿಕಲ್ಪನೆ, ಅಸ್ಪೃಶ್ಯತಾ ನಿವಾರಣೆ, ಮಾನವೀಯ ಧರ್ಮ ಮುಂತಾದ ಚಿಂತನೆಗಳು ಸಮಾಜ ನಿರ್ಮಾಣಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.


ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ ಸಿ ಮಾತನಾಡಿ, ರಂಗಾಯಣದ ವತಿಯಿಂದ ಪ್ರತಿ ವರ್ಷ ಆಯ್ದ ಮೂರು ನಾಟಕಗಳನ್ನು ರಾಜ್ಯದ ವಿವಿಧ ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಈ ವರ್ಷ ನನ್ನೊಳಗೊಬ್ಬ ಗಾಂಧಿ ನಾಟಕವನ್ನು ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ರಿಪರ್ಟರಿ ಕಲಾವಿದರು ಅಭಿನಯಿಸುತ್ತಿದ್ದು, 30ನೇ ಪ್ರದರ್ಶನವನ್ನು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಾಯಣ ವತಿಯಿಂದ ಜೈಲಿನ ಬಂಧಿವಾಸಿಗಳಿಗೆ ನಾಟಕ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ್, ಐ ಎ ಎಸ್ ಅಧಿಕಾರಿಗಳಾದ ನಾಗೇಂದ್ರರಾವ್, ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪರಮೇಶ್ವರಪ್ಪ, ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಭವ್ಯ, ಸಹಾಯಕ ಅಧೀಕ್ಷಕಿ ಪ್ರೀತಿ, ಕೇಂದ್ರ ಕಾರಾಗೃಹದ ಶಿಕ್ಷಕ ಗೋಪಾಲಕೃಷ್ಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *