ಶಿವಮೊಗ್ಗ: ರೋಟರಿ ಕ್ಲಬ್ ಮಿಡಟೌನ್ ನಲ್ಲಿ ನಿನ್ನೆ ನಡೆದ ವಾರದ ಅತಿಥಿ ಸೆಮಿನಾರ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಎಎಸ್ ಅಧಿಕಾರಿ ಹೇಮಂತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸೆಮಿನಾರ್ನಲ್ಲಿ ಮಾತನಾಡಿದ ಅವರು, ಕ್ರಾಫ್ಟ್ಸ್ ಆಫ್ ಮಲೆನಾಡು ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಮಲೆನಾಡಿನ ಸ್ಥಳೀಯ ಕೈಗಾರಿಕೆ ಮತ್ತು ಕೈಗುಡಿಗಾರಿಕೆಯಿಂದ ನಿರ್ಮಿತ ವಸ್ತುಗಳ ಪ್ರದರ್ಶನ, ಅವುಗಳ ಮೌಲ್ಯ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲಿನ ಪರಿಣಾಮವನ್ನು ರೋಟರಿ ಸ್ನೇಹಿತರಿಗೆ ಮನದಟ್ಟುಗೊಳಿಸಿದರು. ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಈ ವೇದಿಕೆಯ ಮೂಲಕ ₹3 ಕೋಟಿಗೂ ಅಧಿಕ ವಹಿವಾಟು ನಡೆದಿರುವುದನ್ನು ಸ್ಮರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷವಾಗಿ ಮಹಿಳೆಯರು ಕೈಗುಡಿಗಾರಿಕೆ ಚಟುವಟಿಕೆಗಳತ್ತ ಹೆಚ್ಚಾದ ಆಸಕ್ತಿ ತೋರಿಸುತ್ತಿರುವುದು ಸಂತೋಷದ ವಿಷಯ ಎಂದು ಅವರು ತಿಳಿಸಿದರು. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಲ್ಲಿ ಕ್ರಾಫ್ಟ್ಸ್ ಆಫ್ ಮಲೆನಾಡಿನ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಮಿಡಟೌನ್ ಅಧ್ಯಕ್ಷ ರೋಟೇರಿಯನ್ ಹರ್ಷ ಭಾಸ್ಕರ್ ಕಾಮತ್, ತಮ್ಮ ಅಧ್ಯಕ್ಷರ ನುಡಿಯಲ್ಲಿ, “ಕ್ರಾಫ್ಟ್ಸ್ ಆಫ್ ಮಲೆನಾಡು ಸ್ವದೇಶಿ ವಸ್ತುಗಳ ಪರಿಕಲ್ಪನೆಗೆ ಅತ್ಯುತ್ತಮ ವೇದಿಕೆ. ಸಂಸ್ಥೆಯ ಕಾರ್ಯ ಹಾಗೂ ಹೇಮಂತ್ ಕುಮಾರ್ ಅವರ ಆಸಕ್ತಿ ಶ್ಲಾಘನೀಯ,” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್, ಪಿಡಿಜಿ ಜಿ.ಎನ್. ಪ್ರಕಾಶ್, ರಾಜೇಂದ್ರ ಪ್ರಸಾದ್, ಪವಿತ್ರ ಹರ್ಷ , ಪ್ರೋಗ್ರಾಂ ಕೋಆರ್ಡಿನೇಟರ್ ಮನೋಹರ್ ಕಾಮತ್ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.