
ಶಿವಮೊಗ್ಗ ಜಿಲ್ಲೆಯ ಮೂಲದ ಖ್ಯಾತ ಯೋಗಗುರು ಡಾ. ಕೆ. ರಾಘವೇಂದ್ರ ಪೈ ಅವರನ್ನು ಅಮೇರಿಕಾದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ. ಈ ವಿಶ್ವವಿದ್ಯಾಲಯವು ಸನಾತನ ಧರ್ಮ, ಯೋಗ ಹಾಗೂ ವೇದಾಧಾರಿತ ಜ್ಞಾನ ಪರಂಪರೆಯ ಅಭಿವೃದ್ದಿಗೆ ಸಮರ್ಪಿತವಾಗಿದೆ. ಅವರು ಶ್ರೀ ಕಾರ್ಕಳ ರಂಗನಾಥ ಪೈ ಹಾಗೂ ಶ್ರೀಮತಿ ರುಕ್ಮಾ ರಂಗನಾಥ ಪೈ ಅವರ ಪುತ್ರರು.
ಡಾ. ಪೈ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಸರ್ಕಾರಿ ಮುಖ್ಯ ಮಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ವಿದ್ಯಾಭ್ಯಾಸ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಅವರು ಧರ್ಮಸ್ಥಳದ ಎಸ್ಡಿಎಂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಯೋಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನವದೆಹಲಿ ಯೋಗ ಪ್ರಮಾಣೀಕರಣ ಮಂಡಳಿ (ಆಯುಷ್ ಸಚಿವಾಲಯ, ಭಾರತ ಸರ್ಕಾರ) ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಪಠ್ಯಕ್ರಮ ಸಮಿತಿಯಲ್ಲಿಯೂ ತಮ್ಮ ಸೇವೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಅವರ ಮಾರ್ಗದರ್ಶನದಲ್ಲಿ 13 ಮಂದಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಪ್ರಸ್ತುತ ಮೈಸೂರಿನಲ್ಲಿ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನವನ್ನು ಸ್ಥಾಪಿಸಿ, ಯೋಗ ಹಾಗೂ ದಾಸ ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ತರಬೇತಿಯನ್ನು ನೀಡುತ್ತಿದ್ದಾರೆ. “ಗಮನ ಯೋಗ ಸೂತ್ರಗಳು” ಹಾಗೂ “ಯೋಗ ವಿಶ್ವಕೋಶ” ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸಿದ್ಧ ಯೋಗಾಚಾರ್ಯರಾಗಿರುವ ಡಾ. ಪೈ ಅವರು ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಯೋಗ ಶಿಕ್ಷಕರನ್ನೂ ವಿದ್ಯಾರ್ಥಿಗಳನ್ನೂ ತರಬೇತಿ ನೀಡಿದ್ದಾರೆ. “ಯೋಗಿಕ್ ವಾಕ್ – ಗಮನ ಯೋಗ ಸೂತ್ರಗಳು” ಎಂಬ ವೈಶಿಷ್ಟ್ಯಪೂರ್ಣ ಸಂಶೋಧನೆಗಾಗಿ ಅವರು ಪ್ರಸಿದ್ಧರಾಗಿದ್ದಾರೆ. ಮೌಲ್ಯಾಧಾರಿತ ಶಿಕ್ಷಣ ಮತ್ತು ಯೋಗ ಪ್ರಸಾರದ ಕ್ಷೇತ್ರದಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಅವರಿಗೆ ಯೋಗ ಗುರು – ರಷ್ಯಾ, ಅಸ್ಥಾನ ಯೋಗಾಚಾರ್ಯ – ಶ್ರೀಕೃಷ್ಣ ಮಠ, ಸ್ವಾಮಿ ವಿವೇಕಾನಂದ ನಾಯಕತ್ವ ಪ್ರಶಸ್ತಿ (ಚಿಕಾಗೋ, ಅಮೇರಿಕಾ), ಟೆನ್ ಔಟ್ಸ್ಟ್ಯಾಂಡಿಂಗ್ ಯಂಗ್ ಪರ್ಸನ್ಸ್ ಆಫ್ ಇಂಡಿಯಾ, ಹಾಗೂ ಜೀವನ ಸಾಧನೆ ಪ್ರಶಸ್ತಿ (ಫ್ಲೋರಿಡಾ, ಅಮೇರಿಕಾ) ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳು ಲಭಿಸಿವೆ.
ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಮೂಲಕ ಡಾ. ಪೈ ಅವರು ಪ್ರಾಚೀನ ಭಾರತೀಯ ಜ್ಞಾನವನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ದಾರಿದೀಪವಾಗುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಸಂಕಲ್ಪ ಹೊಂದಿದ್ದಾರೆ.
