ಮಂಜುನಾಥ್ ಶೆಟ್ಟಿ…

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ 78ನೇ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ ಆಚರಿಸಲಾಯಿತು.ಸಂಭ್ರಮಾಚರಣೆಯಲ್ಲಿ ವಿವಿಧ ಮಠಾಧೀಶರು ಆಶೀರ್ವಚನ ನೀಡಿ, ಅವರ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯ ಯಶಸ್ಸಿಗಾಗಿ ಶುಭ ಹಾರೈಸಿದರು.

“78ನೇ ವರ್ಷವೋ, 28ನೇ ವರ್ಷವೋ ಎಂಬ ಅನುಮಾನ”
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ಅವರ ಉತ್ಸಾಹ ಮತ್ತು ಲವಲವಿಕೆಯನ್ನು ಕಂಡರೆ ಅವರಿಗೆ 78 ವರ್ಷಗಳ ಸಂಭ್ರಮವೋ ಅಥವಾ 28 ವರ್ಷಗಳ ಸಂಭ್ರಮವೋ ಎಂಬ ಅನುಮಾನ ಕಾಡುತ್ತದೆ ಎಂದು ಹೇಳಿದರು.

ಅವರ ಉತ್ಸಾಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗಲಿ. ರಾಜಕೀಯವಾಗಿ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಗಳಿಸಲಿ ಎಂದು ಆಶೀರ್ವದಿಸಿದರು.

ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ವಯಸ್ಸಿನಲ್ಲಿ 78 ವರ್ಷಗಳಾಗಿದ್ದರೂ ಈಶ್ವರಪ್ಪ ಅವರ ಮಾನಸಿಕ ಸದೃಢತೆ ಮತ್ತು ಚೈತನ್ಯ 28 ವರ್ಷದ ಯುವಕರನ್ನು ನೆನಪಿಸುತ್ತದೆ ಎಂದರು.

ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದರೂ ಅವರು ಎಂದಿಗೂ ತಮ್ಮ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಟ್ಟಿಲ್ಲ. ಸ್ಥಾನಮಾನವನ್ನು ಬಿಟ್ಟಿರಬಹುದು, ಆದರೆ ತತ್ವವನ್ನು ಬಿಟ್ಟಿಲ್ಲ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ 500 ವರ್ಷಗಳ ಹೋರಾಟವನ್ನು ಸ್ಮರಿಸಲಾಯಿತು. ದಕ್ಷಿಣ ಭಾರತದ ಪ್ರತಿನಿಧಿಯಾಗಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಾಮಮಂದಿರ ಟ್ರಸ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.

“ನೂರಾರು ವರ್ಷ ಬದುಕುವುದಲ್ಲ, ಹೇಗೆ ಬದುಕುತ್ತೇವೆ ಎಂಬುದು ಮುಖ್ಯ”
ಬೆಕ್ಕಿನಕಲ್ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, 78 ಮತ್ತು 28 ಸಂಖ್ಯೆಗಳು ಪ್ರಾಸಬದ್ಧವಾಗಿದ್ದರೂ ಈಶ್ವರಪ್ಪ ಅವರು ಅದಕ್ಕೆ ತಕ್ಕಂತೆ ಚೈತನ್ಯದಿಂದ ಬದುಕುತ್ತಿರುವುದು ವಿಶೇಷ ಎಂದರು.

ನೂರಾರು ವರ್ಷ ಬದುಕುವುದು ಮುಖ್ಯವಲ್ಲ. ಸಮಾಜ, ಜೀವಜಗತ್ತು ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಈಶ್ವರಪ್ಪ ಅವರ ಜೀವನ ಮಾದರಿಯಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈಶ್ವರಪ್ಪ ಅವರು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಗೋವರ್ಧನ ಟ್ರಸ್ಟ್ ಆರಂಭಿಸಿರುವ ಈಶ್ವರಪ್ಪ ಅವರು 22 ಎಕರೆ ಪ್ರದೇಶದಲ್ಲಿ ಮೇವು ಸಂಗ್ರಹ ವ್ಯವಸ್ಥೆ ರೂಪಿಸಿ ಗೋಶಾಲೆ ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ರಾಜಕೀಯ ಜೀವನದ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವುದು ಅವರ ಸಾರ್ಥಕ ಬದುಕಿನ ಉದಾಹರಣೆಯಾಗಿದೆ ಎಂದು ಹೇಳಿದರು.ಅವರ ಪುತ್ರರೂ ಈ ಕಾರ್ಯಗಳಲ್ಲಿ ಸಾಥ್ ನೀಡುತ್ತಿರುವುದು ಸಂತಸದ ಸಂಗತಿ ಎಂದು ಆಶೀರ್ವಚನದಲ್ಲಿ ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಧ ಮಠಾಧೀಶರು ಈಶ್ವರಪ್ಪ ಅವರು ಆರೋಗ್ಯದಿಂದ, ಉತ್ಸಾಹದಿಂದ ಮತ್ತಷ್ಟು ವರ್ಷಗಳ ಕಾಲ ಸಮಾಜ ಮತ್ತು ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡು ಶತಾಯುಷಿಯಾಗಲಿ ಎಂದು ಹಾರೈಸಿದರು. ಆದಿಚುಂಚನಗಿರಿಯ ನಾದಮಯಾನಂದಶ್ರೀಗಳು ಉಪಸ್ಥಿತರಿದ್ದರು. ನಂತರ ಸಮೂಹ ಗಾನ ನಡೆಯಿತು

Leave a Reply

Your email address will not be published. Required fields are marked *