ಮಂಜುನಾಥ ಶೆಟ್ಟಿ…

ಜಿಲ್ಲೆಯ ರೈತ ಬಾಂಧವರ ಹಿತದೃಷ್ಟಿಯಿಂದ 2026-27ನೇ ಸಾಲಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.


ಮುಂಗಾರು ಹಂಗಾಮಿನಲ್ಲಿ ಆಯ್ದ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಳಗಿನ ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ:
ಮುಸುಕಿನ ಜೋಳ (ನೀರಾವರಿ/ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 31.07.2026
ಭತ್ತ (ನೀರಾವರಿ/ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 14.08.2026
ರಾಗಿ (ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 14.08.2026.
ರೈತರು ಬಿತ್ತನೆ ಅಥವಾ ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೂ ಸಹ ವಿಮೆ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.


ಬೆಳೆ ಸಾಲ ಪಡೆದ ರೈತರು…

ಬ್ಯಾಂಕ್‌ಗಳ ಮೂಲಕ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರವನ್ನು ನೀಡುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು.


ಬೆಳೆ ಸಾಲ ಪಡೆಯದ ರೈತರು…

ಸಾಲ ಪಡೆಯದ ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್ ಸಿ) ನೋಂದಾಯಿಸಿಕೊಳ್ಳಬಹುದು.
ಜಿಲ್ಲೆಯಲ್ಲಿ ಈ ಯೋಜನೆಯನ್ನು ಸರ್ಕಾರದಿಂದ ನಿಯೋಜಿತವಾದ ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

ರೈತರು ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ ಅಥವಾ ಹತ್ತಿರದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹಾಗೂ ಸರ್ಕಾರದ ಅಧಿಕೃತ ಸಂರಕ್ಷಣೆ ವೆಬ್‌ಸೈಟ್ samrkshane.karnataka.gov.in ಮೂಲಕವೂ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.