ಶಿವಮೊಗ್ಗ: ಶ್ರೀ ಹಿಮವತ್ಕೇದಾರ ಜಗದ್ಗುರು ಮಹಾ ಸನ್ನಿಧಿಯವರ ಸನಾತನ ಧರ್ಮ ಜಾಗೃತಿ ಅಭಿಯಾನ ಸಮಾರೋಪ ಸಮಾರಂಭವು ೨೫-೦೩-೨೦೨೨ರಂದು ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದ ಆವರಣದಲ್ಲಿ ನಡೆಯಲಿದೆ.
ಅಂದು ಸಂಜೆ ೪.೩೦ಕ್ಕೆ ಜಗದ್ಗುರುಗಳನ್ನು ಪೂರ್ಣಕುಂಭ, ಕಳಸ, ಕಲಾಮೇಳಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಗುವುದು. ಸಂಜೆ ೫.೩೦ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಉತ್ತರಾಖಂಡದಲ್ಲಿರುವ ಭೀಮಶಂಕರಲಿಂಗ ಶಿವಾಚಾರ್ಯ ಮಹಾ ಸನ್ನಿಧಾನ ಉಖೀಮಠದ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಕೇದಾರನಾಥ ರಾಜಗುರುವರ್ಯರು ಸಾನಿಧ್ಯ ವಹಿಸಲಿದ್ದಾರೆ.

ಕಾಳೇನಹಳ್ಳಿ ಶಿವಯೋಗಾಶ್ರಮದ ನಿರಂಜನ ಪ್ರಣವ ಸ್ವರೂಪಿ, ಮಹಾತಪಸ್ವಿ ಸಿದ್ಧಲಿಂಗ ಶ್ರೀಗಳ ಸಮ್ಮುಖದಲ್ಲಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಅಭಿಯಾನದ ವರದಿ ವಾಚಿಸಲಿದ್ದಾರೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದರು ಹಾಗೂ ಶಿವಯೋಗಾಶ್ರಮದ ಕಾರ್ಯಾಧ್ಯಕ್ಷ ಬಿ.ವೈರಾಘವೇಂದ್ರ ಅಧ್ಯಕ್ಷತೆ ವಹಿಸುವರು.

ತೊಗರ್ಸಿ ಮಳೇಹಿರೇಮಠದ ಮಹಾಂತ ಶಿವಾಚಾರ್ಯರು, ಸಾಲೂರು ಹಿರೇಮಠದ ಗುರುಲಿಂಗ ಶಿವಚಾರ್ಯರು, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರ ಶಿವಚಾರ್ಯರು, ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ದುಗ್ಲಿ ರೇವಣಸಿದ್ದೇಶ್ವರ ಮಠದ ರೇವಣ ಸಿದ್ಧಶಿವಾಚಾರ್ಯರು ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ. ರೇವಣ್ಣಪ್ಪನವರು, ಉದ್ಯಮಿ ಹೆಚ್.ಮುರುಗೇಶ್ ಆಗಮಿಸುವರು. ದಿಗ್ವಿಜಯ ನ್ಯೂಸ್‌ನ ಕಾರ್ಯಕ್ರಮ ನಿರ್ಮಾಪಕ ಪ್ರಶಾಂತ್ ರಿಪ್ಪನಪೇಟೆ ಅವರನ್ನು ಆರ್ಶೀವಾದ ಪೂರ್ವಕವಾಗಿ ಸನ್ಮಾನಿಸಲಾಗುವುದು ಎಂದು ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…