ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗ
ನಗರಕ್ಕಾಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನ ಹಲವು ಮುಖಂಡರನ್ನು
ಗೃಹಬಂಧನದಲ್ಲಿ ಇಟ್ಟ ಘಟನೆ ನಡೆದಿದೆ.

ಇಂದು ಬೆಳ್ಳಂಬೆಳಗ್ಗೆಯೇ ಯುವ ಕಾಂಗ್ರೆಸ್, ಎನ್.ಎಸ್.ಯು.ಐ ಸೇರಿದಂತೆ ಯುವಮುಖಂಡರಿಗೆ
ಶಾಕ್ ಕಾದಿತ್ತು. ಬೆಳಿಗ್ಗೆ 6 ಗಂಟೆಗೆಲ್ಲಾ ಮುಖಂಡರುಗಳ ಮನೆ ಮುಂದೆ ಹಾಜರಾದ
ಪೊಲೀಸರು, ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನೀವು ಇಂದು ಮನೆಯಲ್ಲೇ ಇರಬೇಕು
ಎಂದು ಮನವಿ ಮಾಡಿದರು.

ಕಾರ್ಯಕ್ರಮ ಮುಗಿಯುವ ವರೆಗೂ ಮನೆಯಿಂದ ಹೊರಬರುವಂತಿಲ್ಲ ತಾಕೀತು ಮಾಡಿದ ಪೊಲೀಸರು
ಮುಖಂಡರ ಮನೆ ಮುಂದೆ ಕುರ್ಚಿ ಹಾಕಿಸಿಕೊಂಡು ಬಾಗಿಲು ಕಾಯುತ್ತಿದ್ದ ದೃಶ್ಯ
ಸಾಮಾನ್ಯವಾಗಿತ್ತು.

ಇತ್ತೀಚೆಗೆ ನಗರದಲ್ಲಿ ನಡೆದ ಹರ್ಷ ಹತ್ಯಾ ಪ್ರಕರಣ, ಹಿಜಾಬ್ ವಿವಾದಗಳಿಂದ ನಗರದಲ್ಲಿ
ಅಶಾಂತಿಯ ವಾತಾವರಣ ಉಂಟಾಗಿತ್ತು. ಹಿಂದೂ ಹುಲಿ ಎಂದು ಪದೇ ಪದೇ ಘರ್ಜಿಸುತ್ತಿದ್ದ
ಕೆ.ಎಸ್. ಈಶ್ವರಪ್ಪನವರು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ
ಮೊದಲನೇ ಆರೋಪಿಯಾಗಿದ್ದು, ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್
ಕಾರ್ಯಕರ್ತರು ಅವರ ರಾಜೀನಾಮೆ ನಂತರ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ನಡೆಸುತ್ತಿದ್ದಾರೆ.

ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತು ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ
ಪ್ರತಿಭಟನೆ ಮುಂದುವರೆಸಿರುವ ಸಂದರ್ಭದಲ್ಲೇ ಈಶ್ವರಪ್ಪನವರ ಸ್ವಕ್ಷೇತ್ರ
ಶಿವಮೊಗ್ಗಕ್ಕೆ ಸಿಎಂ ಆಗಮವಾಗುತ್ತಿರುವುದರಿಂದಾಗಿ ಪ್ರತಿಭಟನೆ ಇನ್ನಷ್ಟು ಕಾವು
ಪಡೆದುಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆ ನೆಪದಲ್ಲಿ ಈ ಕ್ರಮ
ಅನುಸರಿಸಿದ್ದಾರೆ ಎನ್ನಲಾಗಿದೆ.

ಎನ್.ಎಸ್.ಯು.ಐ. ಪ್ರತಿಭಟನೆ…

ಪೊಲೀಸರು ಪ್ರಮುಖರ ಮನೆಗಳ ಮುಂದೆ ಪೊಲೀಸರನ್ನು ನಿಯೋಜಿಸಿ ಅವರು ಮನೆಯಿಂದ
ಹೊರಹೋಗದಂತೆ ತಡೆದರೂ ಕೆಲ ಮುಖಂಡರುಗಳಾದ ಸಿ.ಜಿ.ಮಧುಸೂಧನ್, ವಿಜಯ್, ಚೇತನ್,
ಶ್ರೀಜಿತ್, ಗಿರೀಶ್ ಕಾಟಿಕೆರೆ, ಚರಣ್, ಗೌತಮ್ ಮುಂತಾದವರ ನೇತೃತ್ವದಲ್ಲಿ ಬಸವೇಶ್ವರ
ವೃತ್ತದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ನಡೆಸಲಾಯಿತು. ಪೊಲೀಸರು ಯಾವುದೇ ಪ್ರತಿಭಟನೆ ನಡೆಸದಂತೆ ಮುನ್ನೆಚ್ಚರಿಕೆ ವಹಿಸಿದ್ದರೂ
ಎನ್.ಎಸ್.ಯು.ಐ. ಕಾರ್ಯಕರ್ತರ ದಿಡೀರ್ ಪ್ರತಿಭಟನೆಯಿಂದ ಪೊಲೀಸ್ ಇಲಾಖೆಗೆ ಮುಜುಗರ
ಉಂಟಾಗಿತ್ತು. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಕಾವಲಿತ್ತು.

ಯುವ ಕಾಂಗ್ರೆಸ್ ವಿರೋಧ…

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ರಾಜಕೀಯ ಪಕ್ಷಗಳ ಹಕ್ಕು. ಆದರೆ,
ಸರ್ಕಾರದ ವೈಪಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುವ ರಾಜಕೀಯ ಮುಖಂಡರನ್ನು
ಗೃಹಬಂಧನದಲ್ಲಿ ಇರಿಸುವುದು ಎಷ್ಟರಮಟ್ಟಿಗೆ ಸರಿ? ಈ ಘಟನೆಯನ್ನು ತೀವ್ರವಾಗಿ
ಖಂಡಿಸುವುದಾಗಿ ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಯುವ ಕಾಂಗ್ರೆಸ್
ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ಮುಖಂಡರಾದ ಎಂ. ಪ್ರವೀಣ್
ಕುಮಾರ್ , ಲೋಕೇಶ್, ಕುಮರೇಶ್ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…