ಶಿವಮೊಗ್ಗ: ಕುಖ್ಯಾತ ರೌಡಿ, ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಂದಿ ಅಣ್ಣಿಯನ್ನು ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಬರ್ಬರ ಹತ್ಯೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಇನ್ನೋವಾ ಕಾರ್ ನಲ್ಲಿ ಬಂದು ಮಚ್ಚು ಲಾಂಗ್ ಗಳಿಂದ ಹಂದಿ ಅಣ್ಣಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಣ್ಣಿ ಮೃತಪಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.ಹಂದಿ ಅಣ್ಣಿ ಈ ಹಿಂದೆ ಅನೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ನಟೋರಿಯಸ್ ರೌಡಿ ಸೋದರರಾಗಿದ್ದ ಲವ –ಕುಶನ ಹತ್ಯೆಯಲ್ಲಿ ಹಂದಿ ಅಣ್ಣಿ ಪ್ರಮುಖ ಪಾತ್ರ ವಹಿಸಿದ್ದ. ಹಲವು ಹತ್ಯೆ ಪ್ರಕರಣಗಳಲ್ಲಿ ಹಂದಿ ಅಣ್ಣಿ ಭಾಗಿಯಾಗಿದ್ದ ಎನ್ನಲಾಗಿದೆ.ರಿಯಲ್ ಎಸ್ಟೇಟ್ ವ್ಯವಹಾರವೇ ಆತನ ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಸಾಗರ ರಸ್ತೆಯ ಜಾಗವೊಂದರ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದೆಂದು ಹೇಳಲಾಗಿದೆ. ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆ ಜನ ಸೇರಿದ್ದರು. ಘಟನಾ ಸ್ಥಳಕ್ಕೆ ಆತನ ತಾಯಿ, ಸೋದರರು ಆಗಮಿಸಿ ರೋಧಿಸುತ್ತಿದ್ದ ದೃಶ್ಯ ಕಂಡು ಬಂದಿತು. ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

ವರದಿ ಮಂಜುನಾಥ್ ಶೆಟ್ಟಿ…