ಯುವ ಉದ್ಯಮಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದು, ಉದ್ಯಮದಲ್ಲಿ ಆಸಕ್ತಿಯಿರುವ ಯುವಜನರು ಈಗಾಗಲೇ ಅನುಷ್ಠಾನಗೊಳಿಸಿರುವ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸಿ ದೇಶ ವಿದೇಶಗಳಿಗೆ ಪೂರೈಸಿ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿರುವ ಮುರುಗೇಶ್ ನಿರಾಣಿ ಅವರ ಪುತ್ರ ಉದ್ಯಮಿ ವಿಜಯ ನಿರಾಣಿ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳಿಂದ ಸಿಗುವ ಆರ್ಥಿಕ ಸೌಲಭ್ಯ ಬಳಸಿಕೊಂಡು ಸರಿಯಾದ ಯೋಜನೆ ಹಾಕಿಕೊಂಡು ಉದ್ಯಮದಲ್ಲಿ ಮುನ್ನಡೆಯಬೇಕು. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು. ಹಂತ ಹಂತವಾಗಿ ಆಲೋಚನೆಗಳನ್ನು ಉದ್ಯಮದಲ್ಲಿ ಅಳವಡಿಸಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸು 2050ರೊಳಗೆ ದೇಶದ ನಿರುದ್ಯೋಗ ಮುಕ್ತವಾಗಬೇಕು. ಸರ್ಕಾರವೇ ಎಲ್ಲ ಉದ್ಯೋಗ ನೀಡಲಾಗುವುದಿಲ್ಲ. ಯುವಜನತೆ ಹೊಸ ಹೊಸ ಉದ್ಯಮಗಳನ್ನು ಆರಂಭಿಸಬೇಕು. ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯು ಉತ್ತಮ ಸಂಪನ್ಮೂಲ ಸೌಕರ್ಯಗಳನ್ನು ಹೊಂದಿರುವ ಜಿಲ್ಲೆ ಆಗಿದ್ದು, ಜಿಲ್ಲೆಯ ಯುವಜನತೆ ಹೊಸ ಹೊಸ ಆಲೋಚನೆ ಬೆಳೆಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಮುನ್ನಡೆಯಬೇಕು. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಬಿ.ಆರ್.ಸಂತೋಷ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಪ್ರದೀಪ್ ಎಲಿ, ಹಾಲಸ್ವಾಮಿ, ಗಣೇಶ್ ಅಂಗಡಿ, ಎಂ.ರಾಜ್, ಜೆ.ಆರ್.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಸುರೇಶ್ ಬಿ ಎಸ್…