ಯುವನಿಧಿ ಯೋಜನೆಯ ಲಾಭ ಅನರ್ಹರುಗಳು ಪಡೆಯುವುದಕ್ಕೆ ಕಡಿವಾಣ ಹಾಕಿ ಅರ್ಹರಿಗೆ ಮಾತ್ರವೇ ಈ ಯೋಜನೆಯ ಲಾಭ ತಲುಪಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲರವರು ಹೇಳಿದರು.

ಅವರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ 2024 – 2025 ನೇ ಸಾಲಿನ ಯುವನಿಧಿ ಯೋಜನೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಭೆಯಲ್ಲಿ ಸದಸ್ಯರು ಮಂಡಿಸಿದ ಅಭಿಪ್ರಾಯ ಕ್ರೂಡೀಕರಿಸಿ ಈ ನಿರ್ಣಯವನ್ನು ಅಂಗೀಕರಿಸಿ, ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಯುವನಧಿ ಯೋಜನೆಯಲ್ಲಿ ಅನರ್ಹರು ಫಲಾನುಭವಿಗಳಾಗಿದ್ದು, ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮಾಡಲಾಯಿತು ಎಂದು ತಿಳಿಸಿದರು.


ಶಿವಮೊಗ್ಗ ಜಿಲ್ಲೆಯಲ್ಲಿ 6460 ಪದವಿದರು ಮತ್ತು 110 ಡಿಪ್ಲೋಮೋ ಪಡೆದಿದ್ದವರು ಯುವನಿಧಿ ಯೋಜನೆಯಲ್ಲಿ ಫಲಾನುಭವಿಗಳಾಗಿ ನೊಂದಣಿಯಾಗಿದ್ದು, ಈ ಯೋಜನೆಯಿಂದ ಪ್ರತಿ ತಿಂಗಳು ರೂ. 1,79,95,500 ಕೋಟಿ ರೂಪಾಯಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಆದರೇ ಈ ಯೋಜನೆಯಲ್ಲಿ ನೋಂದಣಿಯಾಗಿದ್ದ ಬಹಳಷ್ಟು ಫಲಾನುಭವಿ ಯುವಕರು ಉದ್ಯೋಗದಲ್ಲಿ ಇದ್ದು ಸಂಬಳ ಪಡೆಯುತ್ತಿದ್ದು, ಸುಳ್ಳು ಮಾಹಿತಿಯನ್ನು ನೀಡಿ ನಿರುದ್ಯೋಗಗಳೆಂದು ಸ್ವಯಂ ಘೋಷಣೆ ಮಾಡಿಕೊಂಡು ಯುವನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಆದ್ದರಿಂದ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ತನಿಖೆನಡೆಸಿ ನೈಜ ನಿರುದ್ಯೋಗಿ ಫಲಾನುಭವಿಗಳು ಮಾತ್ರವೇ ಯುವನಿಧಿ ಲಾಭ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸದಸ್ಯರಾದ ಬಸವರಾಜ್ ಕಮರೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *